ಬೆಂಗಳೂರು: "ನಮಗೆ ಷರಿಯಾನೇ ಮುಖ್ಯ ಅನ್ನೋರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ವಕ್ಫ್ ಆಸ್ತಿ ಹೆಸರಲ್ಲಿ ರೈತರಿಗೆ ನೋಟಿಸ್ ಕೊಡೋದನ್ನು ತಕ್ಷಣ ನಿಲ್ಲಿಸಲಿ. ಜಮೀರ್ ಅಹ್ಮದ್ ಜಿಲ್ಲಾ ಪ್ರವಾಸ ಮಾಡಿ, ಅಧಿಕಾರಿಗಳಿಗೆ ಧಮ್ಕಿ ಹಾಕಿ ನೋಟಿಸ್ ಕೊಡಬೇಕು ಅಂತ ಮೌಖಿಕ ಸೂಚನೆ ಕೊಟ್ಟಿದ್ದರು. ನಂತರ ಇದೆಲ್ಲವೂ ಶುರುವಾಯ್ತು. ಈ ನೆಲದ ಆಸ್ತಿಯನ್ನು ನಮ್ಮದೆಂದು ಹೇಳೋಕೆ ಅವಕಾಶ ಕೊಡಲ್ಲ" ಎಂದರು.
"ದಾನ ಕೊಟ್ಟಿದ್ದೇ ನಿಜವಾಗಿದ್ರೆ, ಸೂಕ್ತ ದಾಖಲೆ ಇದ್ರೆ ಅದು ವಕ್ಫ್ ಆಸ್ತಿ ಆಗುತ್ತದೆ. ಸರ್ಕಾರ ಗ್ರ್ಯಾಂಟ್ ಕೊಟ್ರೂ ಅದು ವಕ್ಫ್ ಆಸ್ತಿ ಅಂತ ಪರಿಗಣಿಸಬಹುದು. ವಕ್ಫ್ ಬೋರ್ಡ್ ಖರೀದಿಸಿದ್ರೆ ಅದು ವಕ್ಫ್ ಆಸ್ತಿ ಅಂತ ಹೇಳಬಹುದು. ಆದರೆ ಸ್ವಯಂಪ್ರೇರಿತವಾಗಿ ವಕ್ಫ್ ಎಂದು ಘೋಷಿಸಿಕೊಳ್ಳುವ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರೆ ಅದು ವಕ್ಫ್ ಆಸ್ತಿ ಆಗಲ್ಲ" ಎಂದು ಹೇಳಿದರು.
"ದೇಶ ಬಿಟ್ಟು ಹೋದವರು ಜಮೀನು ಕೊಟ್ಟಿದ್ರೂ ಅದು ಹೇಗೆ ಇವರದ್ದಾಗುತ್ತೆ?. ಇಲ್ಲಿ ಷರಿಯಾ ಕಾನೂನು ಇಲ್ಲ. ಇಲ್ಲಿರೋದು ಸಂವಿಧಾನ ಮಾತ್ರ. ಷರಿಯಾ ಕಾನೂನು ಬೇಕು ಅನ್ನುವವರು ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾರೆ. ಸಂವಿಧಾನ ಬೇಕು ಅಂದ್ರೆ ಮಾತ್ರ ಇಲ್ಲಿರಿ, ಷರಿಯಾ ಬೇಕು ಅಂದ್ರೆ ಪಾಕಿಸ್ತಾನಕ್ಕೆ ಹೋಗಿ. ಸಂವಿಧಾನದ ಪ್ರಕಾರ ಯಾರದ್ದೋ ಆಸ್ತಿಯನ್ನು ನಮ್ಮ ಅಪ್ಪನ ಆಸ್ತಿ, ವಕ್ಫ್ ಬೋರ್ಡ್ ಆಸ್ತಿ ಅಂತ ಹೇಳಲು ಅವಕಾಶ ಇಲ್ಲ. ವಕ್ಫ್ ತನ್ನದು ಅಂತ ಹೇಳಿಕೊಳ್ಳುವ ಆಸ್ತಿ ಬಗ್ಗೆ ಕೂಲಂಕಷ ಪರಿಶೀಲನೆ ಆಗಬೇಕಿದೆ" ಎಂದು ಆಗ್ರಹಿಸಿದರು.
"ವಿಜಯಪುರ ಅಲ್ಲದೇ ಈಗ ಯಾದಗಿರಿ, ಧಾರವಾಡದಲ್ಲೂ ನೋಟಿಸ್ ಕೊಡೋದು ಶುರುವಾಗಿದೆ. ಸಿಎಂ ಸಂವಿಧಾನ ಪರ ಇದ್ರೆ ವಕ್ಫ್ ಹೆಸರು ರದ್ದುಪಡಿಸಿ ರೈತರ ಹೆಸರು ನೋಂದಣಿ ಮಾಡಿಸಿ. ಸಿಎಂಗೆ ಇದು ಅಗ್ನಿಪರೀಕ್ಷೆ. ಸಿಎಂ ಸಂವಿಧಾನ ಪರ ಇದ್ದಾರೋ ಇಲ್ವೋ ಅಂತ ಗೊತ್ತಾಗಲಿದೆ" ಎಂದರು.
ಅಲ್ಪಸಂಖ್ಯಾತರ ತುಷ್ಟೀಕರಣ ಹೀನ ಮಟ್ಟದಲ್ಲಿದೆ: ಮತ್ತೊಂದೆಡೆ, ಹುಬ್ಬಳ್ಳಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, "ವಕ್ಫ್ ಬೋರ್ಡ್ ರೈತರಿಗೆ ನೋಟಿಸ್ ಕೊಟ್ಟಿದ್ದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ. ವಕ್ಫ್ ಬೋರ್ಡ್ಗೆ ಆಸ್ತಿ ನೀಡುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಹೀನ ಮಟ್ಟಕ್ಕಿಳಿದಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರತಿ ಬಾರಿ ತಪ್ಪು ಹೆಜ್ಜೆ ಇಡುತ್ತಿದೆ. ಈ ಕೂಡಲೇ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು. ರೈತರ ಕ್ಷಮೆ ಯಾಚಿಸಬೇಕು" ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವಕ್ಫ್ ಆಸ್ತಿಯೆಂದು ನೋಟಿಸ್ ಕೊಟ್ಟಿದ್ದೇ ಬಿಜೆಪಿ ಸರ್ಕಾರ: ಸಚಿವ ಎಂ.ಬಿ. ಪಾಟೀಲ್