ಬೆಂಗಳೂರು: "ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬ ಗೌರಿ ಹಬ್ಬ. ಮಹಿಳೆಯರಿಗೆ ಗೌರಿ ಹಬ್ಬದ ಸಂದರ್ಭದಲ್ಲಿ ತವರಿನಿಂದ ಬಾಗಿನ ನೀಡಲಾಗುತ್ತದೆ. ಈ ಹಬ್ಬದ ಪ್ರತೀಕವಾಗಿ ಎಲ್ಲರೂ ಸಂಸ್ಕೃತಿ, ಪದ್ಧತಿ, ಪಾರಂಪರಿಕ ಸಂಪ್ರದಾಯವನ್ನು ಉಳಿಸಬೇಕು. ಇಂದಿನ ಯುವ ಸಮೂಹಕ್ಕೆ ಅವುಗಳನ್ನು ತಿಳಿಸಬೇಕು" ಎಂದು ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ತಿಳಿಸಿದರು.

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರ ಮನೆಯಲ್ಲಿ ಗೌರಿ, ಗಣೇಶ ಹಬ್ಬದ ಪ್ರಯುಕ್ತ ಗೌರಿ ಪೂಜೆ ಮತ್ತು 500 ಸುಮಂಗಲಿಯರಿಗೆ ಬಾಗಿನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಸೋಮಾರಿಗಳಾಗದೇ ಎಲ್ಲರೂ ಕಾಯಕದ ಮಹತ್ವ ಅರಿತು, ದುಡಿದು, ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು" ಎಂದು ಕರೆ ನೀಡಿದರು.
ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, "ಜಯನಗರ ವಿಧಾನಸಭಾ ಕ್ಷೇತ್ರ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ, ಸಂಪ್ರದಾಯ ಸಾಂಸ್ಕೃತಿಕ ಕೇಂದ್ರವಾಗಿದೆ. ಜಯನಗರ ವಿಧಾನಸಭಾ ಕ್ಷೇತ್ರದ ಜನರು ನನ್ನ ಕುಟುಂಬದಂತೆ ಎಲ್ಲರೂ ಒಟ್ಟಾಗಿ ಹಬ್ಬದ ಅಚರಣೆ ಮಾಡಬೇಕು ಎಂಬ ಉದ್ದೇಶದಿಂದ ಗೌರಿ ಹಬ್ಬದಲ್ಲಿ ಮಹಿಳೆಯರಿಗೆ ತವರಿನಿಂದ ಬಾಗಿನ ಕೊಡುವಂತೆ ನನ್ನ ಮನೆಯಿಂದ ಮಹಿಳೆಯರಿಗೆ ಬಾಗಿನ ನೀಡಲಾಗುತ್ತಿದೆ. ಗೌರಿ ವ್ರತ ಅಚರಣೆಯಿಂದ ಎಲ್ಲರ ಬಾಳಿನಲ್ಲಿ ಸುಖ, ನೆಮ್ಮದಿ, ಸಂಪತ್ತು ಲಭಿಸುತ್ತದೆ ಎಂಬ ನಂಬಿಕೆ ಇದೆ" ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಹೆಚ್.ಸಿ.ನಾಗರತ್ನ ರಾಮಮೂರ್ತಿ, ನಟಿ ಹಾಗೂ ಬಿಜೆಪಿ ಮಹಿಳಾ ಮುಖಂಡೆ ಮಾಳವಿಕಾ ಅವಿನಾಶ್, ತಾರಾ ಅನುರಾಧ ಅವರು ಮಹಿಳೆಯರಿಗೆ ಬಾಗಿನ ವಿತರಣೆ ಮಾಡಿದರು.
ಇದನ್ನೂ ಓದಿ: ಉಚಿತ ಗಣೇಶ ಮೂರ್ತಿ ವಿತರಣೆ: ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ ನಿಖಿಲ್ ಕುಮಾರಸ್ವಾಮಿ - Free Ganesha Idol Distribution