ಬಾಗಲಕೋಟೆ : ಸರ್ಕಾರಿ ಶಾಲೆ ಎಂದರೆ ಸರಿಯಾಗಿ ಶಿಕ್ಷಣ ಸಿಗಲ್ಲ ಎಂಬ ಮಾತು ಕೇಳಿ ಬರುತ್ತವೆ. ಆದರೆ, ಇಲ್ಲೊಂದು ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆಸುವ ಮೂಲಕ ಗಮನ ಸೆಳೆದಿದೆ. ಇಂತಹ ಶಾಲೆ ಇರುವುದು ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ.
ಕೆರಕಲಮಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಒಟ್ಟು 242 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಮುಖ್ಯ ಗುರುಗಳಾದ ರಾಜೇಶ್ ಮನಗೂಳಿ ಹಾಗೂ ಸಹ ಶಿಕ್ಷಕರು, ಶ್ರಾವಣದ ಕೊನೆ ಸೋಮವಾರದಂದು ಮಕ್ಕಳಿಂದ ತಂದೆ - ತಾಯಿಗಳ ಪಾದಪೂಜೆ ಮಾಡಿಸಿದ್ದಾರೆ. ಮಕ್ಕಳಿಗೆ ಆತ್ಮವಿಶ್ವಾಸದೊಂದಿಗೆ ಭರವಸೆ ಮೂಡಿಸುವ ಕಾರ್ಯ ಮಾಡಿದ್ದಾರೆ.
ಶಿಕ್ಷಕರ ವಿನೂತನ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಸಹ ಸಾಥ್ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿ ಹೆಚ್ಚಿನ ಪ್ರಮಾಣದ ಓದಿನ ಆಸಕ್ತಿ ಬೆಳೆಸಲು ಈ ಶಾಲೆ ಮುಂದಾಗಿದೆ. ಎಲ್ಲ ಮಕ್ಕಳು ಪ್ರತಿನಿತ್ಯ ಶಾಲೆಗೆ ಬರಬೇಕು, ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು. ಆ ಮೂಲಕ ಉತ್ತಮ ಫಲಿತಾಂಶ ಪಡೆಯಬೇಕು ಅನ್ನೋ ಹಂಬಲದಿಂದ ಶಿಕ್ಷಕರು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನೂರಾರು ಮಕ್ಕಳು ಸಾಮೂಹಿಕವಾಗಿ ತಮ್ಮ ತಮ್ಮ ತಂದೆ ತಾಯಿಯ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಪೋಷಕರ ಪಾದ ತೊಳೆದು, ವಿಭೂತಿ, ಕುಂಕುಮ ಅರ್ಪಿಸಿ ಹೂ ಇಟ್ಟು ಉದುಬತ್ತಿ ಬೆಳಗಿ ಪೂಜೆ ಮಾಡಿದರು.
ಇದಾದ ನಂತರ ಶಿಕ್ಷಕರು ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿದರು. ಪವಿತ್ರ ದಿನವಾದ ಇಂದು, ನನ್ನ ಹೆತ್ತವರ ಪುಣ್ಯಪಾದಗಳನ್ನು ಮುಟ್ಟಿ ಪ್ರತಿಜ್ಞೆ ಮಾಡುವುದು ಏನೆಂದರೆ, 'ನಾನು ನನ್ನ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಎಂದಿಗೂ ಶಾಲೆಗೆ ಗೈರು ಹಾಜರಾಗದೇ, ಶಾಲೆಯಲ್ಲಿ ಪೂಜ್ಯ ಗುರುಗಳಿಂದ ಪಡೆದ ಜ್ಞಾನವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು, ಅವರು ಹೇಳಿದ ಮನೆಗೆಲಸ ಮತ್ತು ವಹಿಸಿದ ಜವಾಬ್ದಾರಿಗಳನ್ನು ಶಿರಸಾವಹಿಸಿ ಪಾಲಿಸಿ, ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಮನಃಪೂರ್ವಕವಾಗಿ ಪ್ರಯತ್ನಿಸುತ್ತೇನೆ.
ನಾನು ಇನ್ನು ಮುಂದೆ ಜೀವನದಲ್ಲಿ ಎಂದಿಗೂ ದುರಾಭ್ಯಾಸಗಳನ್ನು ಮಾಡುವುದಿಲ್ಲ. ಸತ್ಯ, ಅಹಿಂಸೆಗಳನ್ನು ಪಾಲಿಸುತ್ತಾ ಸನ್ಮಾರ್ಗದಲ್ಲಿ ನಡೆಯುತ್ತ ಆದರ್ಶ ವಿದ್ಯಾರ್ಥಿಯಾಗುತ್ತೇನೆ. ವಿದ್ಯಾದಾನ ಮಾಡಿದ ಗುರುಗಳಿಗೆ, ಜನ್ಮ ನೀಡಿದ ಹೆತ್ತವರಿಗೆ ಕೀರ್ತಿ ತರುವ ಹಾಗೆ ಜೀವನವನ್ನು ರೂಪಿಸಿಕೊಳ್ಳುತ್ತೇನೆ. ಆ ಮೂಲಕ ನನ್ನ ಊರಿಗೆ, ನಾಡಿಗೆ ಹಾಗೂ ದೇಶಕ್ಕೆ ಹೆಸರು ತರಲು ನನ್ನ ಉಸಿರು ಇರುವವರೆಗೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಈ ಮೂಲಕ ದೃಢಸಂಕಲ್ಪ ಮಾಡುತ್ತಾ ಪ್ರತಿಜ್ಞೆ ಮಾಡುತ್ತೇನೆ' ಎಂದು ಪ್ರಮಾಣ ಮಾಡಿಸಿದರು.
ಶಿಕ್ಷಣಕ್ಕೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ: ಇದು ಮಕ್ಕಳಲ್ಲಿ ಭರವಸೆಯನ್ನ ಮೂಡಿಸೋದು ಮೊದಲ ಭಾಗವಾದ್ರೆ, ಇನ್ನುಳಿದಂತೆ ಪಾಲಕರು ಮಕ್ಕಳನ್ನ ಉತ್ತಮವಾಗಿ ಓದಿಸುವ ಕುರಿತು ಪೋಷಕರಿಂದ ಪ್ರಮಾಣ ಮಾಡಿಸಿ ದೀಕ್ಷೆ ಕೊಡಿಸಿದರು. ಈ ವೇಳೆ, ಎಲ್ಲ ಪೋಷಕರು ಪವಿತ್ರ ದಿನವಾದ ಇಂದು ನಮ್ಮ ಮಗುವಿನ, ಮಕ್ಕಳ ತಲೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡುವ ಮೂಲಕ ದೀಕ್ಷೆ ಕೈಗೊಳ್ಳುವುದು ಏನೆಂದರೆ, 'ನಮ್ಮ ಮಗುವಿಗೆ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವುದನ್ನು ನಮ್ಮ ಪ್ರಥಮ ಆದ್ಯತೆಯೆಂದು ಭಾವಿಸಿ ಕಾಯಾ, ವಾಚಾ, ಮನಸಾ ಪ್ರಯತ್ನಿಸುತ್ತೇವೆ. ಅವರ ಶಿಕ್ಷಣಕ್ಕೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ. ಅವರು ಎಲ್ಲಿಯವರೆಗೆ ಶಿಕ್ಷಣ ಪಡೆಯಲು ಇಚ್ಛಿಸುವರೋ ಅಲ್ಲಿಯವರೆಗೆ ಏನೇ ಕಷ್ಟಗಳು ಬಂದರೂ ಎದೆಗುಂದದೇ ಅವರು ಶಿಕ್ಷಣವನ್ನು ಪೂರ್ಣಗೊಳಿಸುವಂತೆ ಶ್ರಮಿಸುತ್ತೇವೆ.
ಇನ್ನು ಮುಂದೆ ನಾವು ಮಕ್ಕಳಿಗಾಗಿ ಆಸ್ತಿ ಮಾಡದೇ ನಮ್ಮ ಮಕ್ಕಳನ್ನೇ ನಮ್ಮ ಊರಿನ, ಸಮಾಜದ, ನಾಡಿನ ಹಾಗೂ ದೇಶದ ಹೆಮ್ಮೆಯ ಆಸ್ತಿಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ನಮ್ಮ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ನಮ್ಮೂರಿನ ಶಾಲೆ ಹಾಗೂ ಪೂಜ್ಯ ಗುರುಗಳೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ' ಮತ್ತು ಇದೇ ಪುಣ್ಯ ದಿನದಂದು ನಮ್ಮ ಮಗುವಿನ, ಮಕ್ಕಳ ತಲೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡುವುದೇನೆಂದರೆ,
'ನಮ್ಮ ಮಗುವಿನ, ಮಕ್ಕಳ ಸುಂದರ ಭವಿಷ್ಯಕ್ಕಾಗಿ ನಮ್ಮಲ್ಲಿರುವ ಎಲ್ಲ ರೀತಿಯ ದುಶ್ಚಟಗಳನ್ನು ಬಿಟ್ಟು ಸಮಾಜದಲ್ಲಿ ಉತ್ತಮ ನಾಗರಿಕರಾಗಿ, ಮಕ್ಕಳಿಗೆ ಒಳ್ಳೆಯ ಪಾಲಕರಾಗಿ, ಸನ್ಮಾರ್ಗದಲ್ಲಿ ನಡೆಯುತ್ತಾ ಆದರ್ಶ ಜೀವನವನ್ನು ನಡೆಸುತ್ತೇವೆ ಎಂದು ದೀಕ್ಷೆ ಕೈಗೊಳ್ಳುತ್ತೇವೆ' ಎಂದು ಶಾಲಾ ಶಿಕ್ಷಕರ ಸಮ್ಮುಖದಲ್ಲಿ ಪ್ರಮಾಣ ವಚನ ಬೋಧನೆ ಮಾಡಿಸಲಾಯಿತು.
ದೇಶದ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ: ಈ ಕುರಿತು ಶಿಕ್ಷಕ ಎಂ. ಎಂ ಮನಿಯಾರ ಅವರು ಮಾತನಾಡಿ, 'ಇವತ್ತು ಶಿಕ್ಷಣದಲ್ಲಿ ಮಾಹಿತಿ ಇದೆ. ಮಕ್ಕಳಲ್ಲಿ ಮೌಲ್ಯ ಇಲ್ಲದಂತಾಗಿದೆ. ತಂದೆ - ತಾಯಿ, ಶಿಕ್ಷಕರ ಬಗ್ಗೆ ಗೌರವವನ್ನು ನಾವು ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪಾದಪೂಜೆ ಹಾಗೂ ದೀಕ್ಷೆ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡು ಪೋಷಕರಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಹಾಗೂ ಸಮಾಜದ ಬಗ್ಗೆ, ದೇಶದ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು' ಎಂದಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿನಿ ಸಾವಿತ್ರಿ ಮಾತನಾಡಿ, 'ಇಂದು ನಮ್ಮ ಶಾಲೆಯಲ್ಲಿ ಪಾದಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಎಲ್ಲ ವಿದ್ಯಾರ್ಥಿಗಳು ಸೇರಿ ತಂದೆ ತಾಯಿಗೆ ಪಾದಪೂಜೆ ಮಾಡಿದೆವು. ನಾವು ಎಂದೂ ಶಾಲೆ ತಪ್ಪಿಸುವುದಿಲ್ಲ, ಒಳ್ಳೆ ವಿದ್ಯಾರ್ಥಿಗಳಾಗುತ್ತೇವೆ. ಭಾರತಕ್ಕೆ ಏನಾದ್ರು ಒಳ್ಳೆಯ ಕೆಲಸ ಮಾಡುತ್ತೇವೆ' ಎಂದು ಪ್ರಮಾಣ ಮಾಡಿದ್ದೇವೆ ಎಂದರು.
ಇದನ್ನೂ ಓದಿ : ಕಾಲ್ನಡಿಗೆ ಶಿಕ್ಷಕ, ಸಮಯದ ಪರಿಪಾಲಕ; ವೃತ್ತಿ ಆರಂಭಿಸಿದ ಶಾಲೆಯಲ್ಲೇ ನಿವೃತ್ತನಾದ ಗುರುವಿಗೆ ಚಿನ್ನದ ಕಾಣಿಕೆ - Gold Ring Gift