ಬೆಂಗಳೂರು : ಉದ್ಯಮಿ ಹಾಗೂ ಜೆಡಿಎಸ್ ಎಂಎಲ್ಸಿ ಟಿ. ಎ ಶರವಣ ಅವರ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ ಚಿನ್ನಾಭರಣಗಳನ್ನ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ.
ಹಾಲ್ ಮಾರ್ಕ್ಸ್ ಸೀಲ್ ಹಾಕಲು ನೀಡಿದ್ದ 1.249 ಕೆ.ಜಿ ತೂಕದ ಚಿನ್ನಾಭರಣ ವಂಚಿಸಲಾಗಿದೆ ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ ಮ್ಯಾನೇಜರ್ ನೀಡಿದ ದೂರಿನನ್ವಯ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜನವರಿ 14ರಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಸವನಗುಡಿ ಶಾಖೆಯ 1 ಕೆಜಿ 249 ಗ್ರಾಂ ಚಿನ್ನದ ಆಭರಣಗಳನ್ನು ಹಾಲ್ ಮಾರ್ಕ್ ಹಾಕಲು ನಗರತ್ ಪೇಟೆಯ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್ಗೆ ನೀಡಲಾಗಿತ್ತು. ಜನವರಿ 15ರಂದು ಚಿನ್ನಾಭರಣ ಕೊಡುವಂತೆ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್ನ ಮಾಲೀಕ ಭರತ್ ಚಟಡ್ ಅವರನ್ನ ಕೇಳಿದಾಗ, "ತಮ್ಮ ಸಂಸ್ಥೆಯ ಉದ್ಯೋಗಿ ಕಳ್ಳತನ ಮಾಡಿದ್ದಾನೆ" ಎಂದು ಉತ್ತರಿಸುತ್ತಿದ್ದಾರೆ ಎಂದು ದೂರಲಾಗಿದೆ.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಸವನಗುಡಿ ಶಾಖೆಯ ಮ್ಯಾನೇಜರ್ ನೀಡಿರುವ ದೂರಿನನ್ವಯ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬಳ್ಳಾರಿಯಲ್ಲಿ ಕಳ್ಳತನವಾಗಿದ್ದ ಎರಡೂವರೆ ಕೆಜಿ ಚಿನ್ನಾಭರಣ ಜಪ್ತಿ; ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು - STOLEN GOLD RECOVERED