ಬೆಂಗಳೂರು: ಕುಂಡಲಿ ಪೂಜೆ ನೆಪದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಅವರ ಗೌರವಕ್ಕೆ ಧಕ್ಕೆ ತಂದ ಆರೋಪದಲ್ಲಿ ಜ್ಯೋತಿಷಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ, ಜ್ಯೋತಿಷಿ ಬಳಿಗೆ ಕರೆದೊಯ್ದಿದ್ದಲ್ಲದೇ ಅವರ ವರ್ತನೆಯನ್ನು ಪ್ರಶ್ನಿಸದ ಮಹಿಳೆಯ ಪತಿಯ ವಿರುದ್ಧ ಪ್ರಕರಣ ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.
ಜ್ಯೋತಿಷಿ ಮೋಹನ್ ದಾಸ್ ಅಲಿಯಾಸ್ ಶಿವರಾಮು ಮತ್ತು ಸಂತ್ರಸ್ತ ಮಹಿಳೆಯ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಕುಂಡಲಿ ದೋಷವನ್ನು ಸರಿಪಡಿಸಲು ಪತಿ ತನ್ನ ಪತ್ನಿಯನ್ನು ಜ್ಯೋತಿಷಿಯಾದ ಮೋಹನ್ ದಾಸ್ ಬಳಿಗೆ ಕರೆದೊಯ್ದಿದ್ದರು. ಆದ್ರೆ ಜ್ಯೋತಿಷಿ ಅಸಭ್ಯವಾಗಿ ಮಹಿಳೆಯ ದೇಹವನ್ನು ಸ್ಪರ್ಶಿಸಿ ಅಪರಾಧವೆಸಗಿದ್ದಾರೆ. ಇದನ್ನು ವಿರೋಧಿಸದಂತೆ ಎಚ್ಚರಿಕೆ ನೀಡುವ ಮೂಲಕ ಇಬ್ಬರೂ ಅರ್ಜಿದಾರರು ಅಪರಾಧವೆಸಗಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಜೊತೆಗೆ, ಇಬ್ಬರೂ ಅರ್ಜಿದಾರರ ವಿರುದ್ಧ ಗಂಭೀರ ಸ್ವರೂಪದ ಆರೋಪವಿದೆ.
ಅಲ್ಲದೆ, ಈ ಮೊದಲು ದಾಖಲಿಸಿದ್ದ ಪ್ರಕರಣ ಮತ್ತು ಎರಡನೇ ಬಾರಿ ದಾಖಲಿಸಿದ್ದ ಪ್ರಕರಣದಲ್ಲಿ ಒಂದೇ ರೀತಿಯ ಆರೋಪಗಳಿದ್ದು, ಪ್ರಕರಣದ ರದ್ದುಗೊಳಿಸಬೇಕು ಎಂದು ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, ಎರಡನೇ ಪ್ರಕರಣದಲ್ಲಿ ಸೆಕ್ಷನ್ 498ಎ(ಕ್ರೌರ್ಯ) ಆರೋಪ ಮಾಡಲಾಗಿದೆ. ಎರಡನೇ ಆರೋಪಿಯಾಗಿರುವವರು ಮಹಿಳೆಯ ಮೇಲೆ (ಸೆಕ್ಷನ್ 354) ಮಾನಭಂಗದ ಉದ್ದೇಶದಿಂದ ವರ್ತಿಸುವ ಮತ್ತು 354ಎ(ಮಹಿಳೆ ವಿರುದ್ಧದ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಪ್ರಕರಣ ರದ್ದುಪಡಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು? 2014 ಮೇ 19ರಂದು ಮದುವೆಯಾಗಿದ್ದು, ಆ ಬಳಿಕ ಪತಿ ನನ್ನ ಮೇಲೆ ಅಪಹಾಸ್ಯ ಮತ್ತು ಕ್ರೌರ್ಯದಿಂದ ನಡೆದುಕೊಳ್ಳುತ್ತಿದ್ದರು. ಈ ಸಂಬಂಧ ಜ್ಯೋತಿಷಿಯನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಪತಿಯ ಕುಟುಂಬದವರ ಒತ್ತಾಯಿಸಿದ್ದರು. ಈ ಪ್ರಕ್ರಿಯೆ 2015ರ ಫೆಬ್ರವರಿ 4ರ ವರೆಗೂ ಮುಂದುವರೆದಿತ್ತು. ಬಳಿಕ ಪೂಜೆ ಮಾಡಿಸುವ ಮೂಲಕ ಸರಿಪಡಿಸಬೇಕು ಎಂಬುದಾಗಿ ನಿರ್ಧರಿಸಿ ಪತಿ (ಎರಡನೇ ಅರ್ಜಿದಾರ) ಜ್ಯೋತಿಷ್ಯಾಲಯಕ್ಕೆ ಕರೆದೊಯ್ದಿದ್ದರು. ಈ ವೇಳೆ ಜ್ಯೋತಿಷಿ ಬಳಿ ಹೋದಾಗ ನನ್ನ ಕುಂಡಲಿಯನ್ನು ಸರಿಪಡಿಸುವುದಕ್ಕಾಗಿ ಪೂಜೆ ಮಾಡುವ ಸೋಗಿನಲ್ಲಿ ದೇಹವನ್ನು ಅನುಚಿತವಾಗಿ ಜ್ಯೋತಿಷಿ ಸ್ಪರ್ಶಿಸಿದ್ದರು ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದರು.
ಈ ಸಂದರ್ಭದಲ್ಲಿ ಪತಿ ಸ್ಥಳದಲ್ಲಿ ಹಾಜರಿದ್ದು, ಜ್ಯೋತಿಷಿಯ ವರ್ತನೆಯನ್ನು ಪ್ರಶ್ನಿಸಲಿಲ್ಲ. ಜೊತೆಗೆ, ನನ್ನ ರಕ್ಷಣೆ ಮಾಡುವುದಕ್ಕೂ ಮುಂದಾಗಿರಲಿಲ್ಲ. ಹೀಗಾಗಿ ಕೃತ್ಯದಲ್ಲಿ ಇಬ್ಬರೂ ಭಾಗಿಯಾಗಿದ್ದಾರೆ ಎಂದು ತಮ್ಮ ದೂರಿನಲ್ಲಿ ವಿವರಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ದುಬಾರಿ ಬೆಲೆಯ 38 ರೇಷ್ಮೆ ಸೀರೆ ಕಳ್ಳತನ, ನಾಲ್ವರು ಆರೋಪಿಗಳ ಬಂಧನ - SAREE THEFT CASE
ಈ ಸಂಬಂಧ ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿಸೆ ಸೆಕ್ಷನ್ 498ಎ, 354, 354ಎ, 508 ಮತ್ತು 38ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿತು. ಇದನ್ನು ಪ್ರಶ್ನಿಸಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ(ಪತಿ) ಪರ ವಕೀಲರು, ದೂರುದಾರರು ತನ್ನ ಕಕ್ಷಿದಾರ ಮತ್ತು ಅವರ ಕುಟುಂಬಸ್ಥರ ವಿರುದ್ಧ 2018ರಲ್ಲಿ ಐಪಿಸಿ ಸೆಕ್ಷನ್ 498-ಎ ಅಡಿಯಲ್ಲಿ ದೂರು ದಾಖಲಿಸಿದ್ದರು. ಅದೇ ಆರೋಪದಲ್ಲಿ 2019ರಲ್ಲಿ ಮತ್ತೊಂದು ದಾಖಲಿಸಿದ್ದಾರೆ. ಇದು ಕಾನೂನು ಬಾಹಿರ ಎಂದು ವಾದಿಸಿದ್ದರು. ಅಲ್ಲದೆ, ದೂರುದಾರರು 2018ರಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಆದ್ದರಿಂದ ಈ ದೂರು ದಾಖಲು ಮಾಡುವುದಕ್ಕೆ ಸೂಕ್ತ ಆಧಾರಗಳಿಲ್ಲ ಎಂಬುದಾಗಿ ವಾದ ಮಂಡಿಸಿದ್ದರು. ಅಲ್ಲದೆ, ವಿವಾಹ ವಿಚ್ಛೇದನ ಕೋರಿ ಪತಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣಾ ಹಂತದಲ್ಲಿದೆ. ಹೀಗಾಗಿ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.
ಹಾಗೆಯೇ 2018ರಲ್ಲಿ ದಾಖಲಿಸಿರುವ ದೂರಿನಲ್ಲಿರುವ ಅಂಶಗಳು ಹಾಗೂ 2019ರಲ್ಲಿ ದಾಖಲಿಸಿರುವ ಪ್ರಕರಣದಲ್ಲಿನ ಅಂಶಗಳು ಸಂಪೂರ್ಣ ವಿಭಿನ್ನವಾಗಿವೆ ಎಂಬುದಾಗಿ ವಾದ ಮಂಡಿಸಿದ್ದರು. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.