ಬೆಳಗಾವಿ: ಜಿಲ್ಲಾಡಳಿತದ ವಿರೋಧದ ನಡುವೆಯೂ ಭಾನುವಾರ ರಾತ್ರಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಂಡಿತು. ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಶಿವೇಂದ್ರರಾಜೇ ಭೋಸ್ಲೆ, ಶಾಸಕ ಅಭಯ್ ಪಾಟೀಲ ಸೇರಿ ಸಾವಿರಾರು ಜನರು ಇದಕ್ಕೆ ಸಾಕ್ಷಿಯಾದರು.
ಕಳೆದ ಐದಾರು ದಿನಗಳಿಂದ ಬೆಳಗಾವಿಯ ಅನಗೋಳದ ಸಂಭಾಜಿ ವೃತ್ತದಲ್ಲಿ 21 ಅಡಿ ಎತ್ತರದ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಶಾಸಕ ಅಭಯ ಪಾಟೀಲ ಹಾಗೂ ಪಾಲಿಕೆ ಸದಸ್ಯರು ವಿಶೇಷ ತಯಾರಿ ನಡೆಸಿದ್ದರು. ಆದರೆ, ಇದಕ್ಕೆ ಶ್ರೀರಾಮಸೇನಾ ಹಿಂದೂಸ್ಥಾನ ಸಂಘಟನೆ ರಮಾಕಾಂತ ಕೊಂಡೂಸ್ಕರ್ ಮತ್ತು ಅವರ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ, ಜಿಲ್ಲಾಧಿಕಾರಿಗಳು ಶನಿವಾರ ಸಭೆ ನಡೆಸಿ, ಪುತ್ಥಳಿ ಅನಾವರಣ ಕಾರ್ಯಕ್ರಮ ಮುಂದೂಡಲು ಪ್ರಯತ್ನಿಸಿದ್ದರು. ಅನುಮತಿಯನ್ನೂ ನೀಡಿರಲಿಲ್ಲ.
ಜಿಲ್ಲಾಡಳಿತದ ಆದೇಶಕ್ಕೆ ಸೆಡ್ಡು ಹೊಡೆದ ಶಾಸಕ ಅಭಯ ಪಾಟೀಲ, ಭಾನುವಾರವೇ ಪ್ರತಿಮೆ ಅನಾವರಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಆ ಪ್ರಕಾರ ಅನಗೋಳ ನಾಕಾದಿಂದ ಭವ್ಯ ಶೋಭಾಯಾತ್ರೆ ನಡೆಸಿದರು. ಶೋಭಾ ಯಾತ್ರೆಯುದ್ದಕ್ಕೂ ಶಿವಾಜಿ, ಸಂಭಾಜಿ ಪರ ಘೋಷಣೆಗಳು ಮೊಳಗಿದವು. ಕೇಸರಿ ಸೀರೆ ತೊಟ್ಟಿದ್ದ ಮಹಿಳೆಯರು ಪೂರ್ಣಕುಂಭದೊಂದಿಗೆ ಸಾಗಿದರು. ಡೋಲ್ ತಾಶಾಗಳ ಅಬ್ಬರ ಜೋರಾಗಿತ್ತು. ಎತ್ತ ನೋಡಿದರೂ ಜನಸಾಗರವೇ ಕಂಡು ಬಂತು. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಶಿವಭಕ್ತರು ಸಂಭ್ರಮಿಸಿದರು.
![SAMBHAJI MAHARAJ STATUE](https://etvbharatimages.akamaized.net/etvbharat/prod-images/06-01-2025/23263669_thumb-4.jpg)
ಬಳಿಕ ಛತ್ರಪತಿ ಸಂಭಾಜಿ ಮಹಾರಾಜರ ಪುತ್ಥಳಿಗೆ ಶಿವೇಂದ್ರರಾಜೇ ಭೋಸ್ಲೆ ಅವರು ಕ್ಷೀರಾಭಿಷೇಕ ಮಾಡಿ, ಪುತ್ಥಳಿ ಅನಾವರಣಗೊಳಿಸಿದರು. ಈ ವೇಳೆ ನೆರೆದಿದ್ದ ಸಹಸ್ರಾರು ಜನರು ಶಿವಾಜಿ, ಸಂಭಾಜಿ ಮಹಾರಾಜ್ ಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು.
![SAMBHAJI MAHARAJ STATUE](https://etvbharatimages.akamaized.net/etvbharat/prod-images/06-01-2025/23263669_thumb-5.jpg)
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ: ಶಿವೇಂದ್ರರಾಜೇ ಭೋಸ್ಲೆ ಮಾತನಾಡಿ, ''ಬೆಳಗಾವಿ ಪ್ರಮುಖ ವೃತ್ತದಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆಯಾಗಿದ್ದು ಸಂತಸ ತಂದಿದೆ. ಶಾಸಕ ಅಭಯ ಪಾಟೀಲ ಅವರೇ ಇಂಥದ್ದೊಂದು ದೊಡ್ಡ ಕೆಲಸಕ್ಕೆ ಕಾರಣ. ನಾನು ಈ ಕಾರ್ಯಕ್ರಮಕ್ಕೆ ಬರಬಾರದು ಎಂಬುದು ಕೆಲವರ ಉದ್ದೇಶವಾಗಿತ್ತು. ಇದಕ್ಕಾಗಿ ತಡೆಯುವ ಯತ್ನ ಮಾಡಿದರು. ಆದರೆ, ನಿಮ್ಮ ಮತ್ತು ಅಭಯ ಪಾಟೀಲ ಮೇಲಿನ ಪ್ರೀತಿಗಾಗಿ ಬಂದಿದ್ದೇನೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ಮುಂದಿನ ದಿನಗಳಲ್ಲಿ ನೀವೂ ಸಹ ಅವರ ಬೆನ್ನಿಗೆ ನಿಲ್ಲುವಂತೆ'' ಕರೆ ನೀಡಿದರು.
![SAMBHAJI MAHARAJ STATUE](https://etvbharatimages.akamaized.net/etvbharat/prod-images/06-01-2025/23263669_thumb-3.jpg)
ಧನ್ಯವಾದ ಸಲ್ಲಿಸಿದ ಶಾಸಕರು: ಅಭಯ ಪಾಟೀಲ ಮಾತನಾಡಿ, "ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣಕ್ಕೆ ನಾನಾ ರೀತಿಯಲ್ಲಿ ಅಡೆತಡೆಯನ್ನುಂಟು ಮಾಡಿದರೂ ಕೂಡ, ಶಿವಭಕ್ತರ ಶಕ್ತಿಯಿಂದ ಇಂದು ಇಲ್ಲಿ ಭಗವಾ ಧ್ವಜ ಹಾರಾಡಿದೆ. ನಿನ್ನೆ ಜಿಲ್ಲಾಧಿಕಾರಿಗಳು ಇದೇ ಸ್ಥಳದಲ್ಲಿ ಬಂದು ಹೇಳಿಕೆ ನೀಡಿ ಭಾನುವಾರ ಸಂಜೆ ಯಾರೂ ಇಲ್ಲಿ ಬರಬೇಡಿ, ಎಲ್ಲರೂ ಮನೆಯಲ್ಲಿ ಇರುವಂತೆ ಹೇಳಿದ್ದರು. ಭಾನುವಾರ ಮಧ್ಯಾಹ್ನದವರೆಗೂ ಬಹಳಷ್ಟು ಅಡೆತಡೆಗಳನ್ನುಂಟು ಮಾಡಲಾಯಿತು" ಎಂದರು.
![SAMBHAJI MAHARAJ STATUE](https://etvbharatimages.akamaized.net/etvbharat/prod-images/06-01-2025/23263669_thumb-2.jpg)
"ಆದರೂ ನಿಮ್ಮೆಲ್ಲರ ಶಕ್ತಿ ಮುಂದೆ ಯಾವ ಆಟವೂ ನಡೆಯಲಿಲ್ಲ. ಪೊಲೀಸರಿಗೂ ನಮ್ಮ ಮೇಲೆ ಹೆಚ್ಚಿನ ಪ್ರೀತಿಯಿದೆ. ಹಾಗಾಗಿ, ಅವರೂ ಕೂಡ ಹಗಲಿರುಳು ಇಲ್ಲಿ ಭದ್ರತೆ ಒದಗಿಸಿದರು. ಇಷ್ಟೊಂದು ಅದ್ಧೂರಿ ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಶಿವಭಕ್ತರಿಗೆ, ಮಹಿಳೆಯರಿಗೆ ವಿಶೇಷವಾದ ಧನ್ಯವಾದಗಳು. ಅಲ್ಲದೇ, ಎರಡು ಸಾವಿರಕ್ಕೂ ಅಧಿಕ ಕುಂಭ ಹೊತ್ತ ಮಹಿಳೆಯರು ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ನಿಂತು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದ್ದಿರಿ. ನಿಮಗೂ, ಅವರಿಗೂ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದು ತಿಳಿಸಿದರು.
ಮೇಯರ್ ಸವಿತಾ ಕಾಂಬಳೆ, ಉಪಮಹಾಪೌರ ಆನಂದ ಚವ್ಹಾಣ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಭಾಜಿ ಮೂರ್ತಿ ವಿವಾದ: ಸ್ಥಳದಲ್ಲಿ ಬಿಗುವಿನ ವಾತಾವರಣ