ಬೆಂಗಳೂರು : ಬೆಳಗಾವಿಯಲ್ಲಿ ನಡೆದಿರುವುದು 60 ಪರ್ಸೆಂಟ್ ವಸೂಲಿ ಮಾಡಿದ ನೆನಪಿನ ಜಾತ್ರೆಯೇ ಹೊರತು, ಕಾಂಗ್ರೆಸ್ ಸಮಾವೇಶವಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ಮಾಡಲಾಗಿದೆ. ಗಾಂಧೀಜಿ ಬಗ್ಗೆ ಅಷ್ಟೊಂದು ಪ್ರೀತಿ ಇದ್ದರೆ, ಕಾಂಗ್ರೆಸ್ ಭವನಕ್ಕೆ ಗಾಂಧೀಜಿ ಅಥವಾ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರಿಡಬೇಕಿತ್ತು. ಸೋನಿಯಾ ಗಾಂಧಿಯಾಗಲಿ, ರಾಹುಲ್ ಗಾಂಧಿಯಾಗಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಇವರಿಗೆ ಗಾಂಧೀಜಿಯ ಹೆಸರು ಹೇಳುವ ನೈತಿಕತೆ ಇಲ್ಲ. ಇದು 60 ಪರ್ಸೆಂಟ್ ವಸೂಲಿ ಮಾಡುವ ನೆನಪಿನ ಜಾತ್ರೆಯಾಗಿತ್ತು ಎಂದರು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಹಸುವಿನ ಕೆಚ್ಚಲು ಕತ್ತರಿಸಿದ್ದು, ಹತ್ಯೆ ಮಾಡಿದ್ದು, ಬ್ಯಾಂಕ್ ದರೋಡೆ, ಮಹಿಳೆ ಮೇಲೆ ಅತ್ಯಾಚಾರ ಮೊದಲಾದ ಘಟನೆಗಳನ್ನು ಕಡೆಗಣಿಸಿ ಸರ್ಕಾರ ಸಮಾವೇಶದ ಸಂಭ್ರಮದಲ್ಲಿದೆ. ಅಭಿವೃದ್ಧಿ ಬಗ್ಗೆ ಕೇಳಿದರೆ ಬಿಜೆಪಿ ಸರ್ಕಾರದ ಅವಧಿಗೆ ಹೋಲಿಸುತ್ತಾರೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೇಗೆ ಭಿನ್ನ ? ಕಾಂಗ್ರೆಸ್ ಶಾಸಕರೇ ಅನುದಾನ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಗಾಂಧೀಜಿಯಂತೆ ಸರಳವಾಗಿರಬೇಕು ಎಂದು ಹೇಳಿದ್ದಾರೆ. ಆದರೆ, ಬೆಳಗಾವಿ ಸಮಾವೇಶದಲ್ಲಿ ಕಟೌಟ್ಗಳ ವಿಜೃಂಭಣೆ ಕಂಡುಬಂದಿದೆ. ನಕಲಿ ಗಾಂಧಿಗಳಿಂದ ಅಸಲಿ ಗಾಂಧಿಯ ಸ್ಮರಣೆ ನಡೆದಿದೆ ಎಂದು ಅವರು ಟೀಕಿಸಿದರು.
ಇದನ್ನೂ ಓದಿ : ಪ್ರಿಯಾಂಕಾ ಗಾಂಧಿ ಕಿತ್ತೂರು ಚನ್ನಮ್ಮನಂತೆ: ಬೆಳಗಾವಿಯಲ್ಲಿ ಪ್ರಿಯಾಂಕಾರನ್ನು ಹಾಡಿಹೊಗಳಿದ ಮಲ್ಲಿಕಾರ್ಜುನ ಖರ್ಗೆ
ಜನರ ಕ್ಷಮೆಯಾಚಿಸಿ : ಕಿತ್ತೂರು ರಾಣಿ ಚನ್ನಮ್ಮ ಕರ್ನಾಟಕದ ವೀರ ಮಹಿಳೆ. ಅವರನ್ನು ಪ್ರಿಯಾಂಕಾ ವಾದ್ರಾಗೆ ಹೋಲಿಕೆ ಮಾಡುವುದು ಅಕ್ಷಮ್ಯ. ಇದರಿಂದ ಚನ್ನಮ್ಮರಿಗೆ ಅಪಮಾನವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷ ಕೂಡಲೇ ಜನರ ಕ್ಷಮೆ ಯಾಚಿಸಬೇಕು ಎಂದು ಪ್ರತಿಪಕ್ಷ ನಾಯಕ ಆಗ್ರಹಿಸಿದರು.
ಬಿಜೆಪಿ ಸಂಘಟನಾ ಸಭೆ ನಡೆದಿದ್ದು, ತಾಲೂಕು ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದಿದೆ. ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಬಂದ ನಂತರ ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆ ಚರ್ಚೆಯಾಗಲಿದೆ. ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ನಾವ್ಯಾರೂ ತೀರ್ಮಾನ ಮಾಡುವುದಿಲ್ಲ. ಅದನ್ನು ಹಿರಿಯ ನಾಯಕರು ಮಾತ್ರ ಮಾಡುತ್ತಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರೇ ವರಿಷ್ಠರ ಜೊತೆ ಮಾತನಾಡಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಬಣ ಜಗಳ : ಎಲ್ಲ ಶಾಸಕರ ಜೊತೆ ಮಾತುಕತೆ ನಡೆಸಿದ ರಾಜ್ಯ ಉಸ್ತುವಾರಿ ರಾಧಾಮೋಹನ್