ಬೆಳಗಾವಿ : ಉತ್ತರಪ್ರದೇಶದ ಆಗ್ರಾದಲ್ಲಿ ದೊರೆ ಷಹಜಾನ್ ತನ್ನ ಪ್ರೇಯಸಿಗಾಗಿ ಕಟ್ಟಿಸಿದ 'ತಾಜ್ಮಹಲ್' ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಅಂಥಹದ್ದೇ ಪ್ರೇಮಕಥೆಗೆ ಹೋಲುವ ಘಟನಾವಳಿಗೆ ಕಿತ್ತೂರು ಸಂಸ್ಥಾನ ಸಾಕ್ಷಿಯಾಗಿತ್ತು. ಇಲ್ಲಿನ ಅರಸ ಮಾಳವರುದ್ರಗೌಡರು ತನ್ನ ಪ್ರೇಯಸಿಗಾಗಿ ಕಟ್ಟಿದ 'ನಿರಂಜನಿ ಮಹಲ್' ಪ್ರೀತಿ, ಸಾಮರಸ್ಯ ಮತ್ತು ಭಾವೈಕ್ಯತೆ ಸಂದೇಶ ಸಾರುತ್ತಿದೆ.
ನಾಡಿನ ಅನೇಕ ಅರಸರು ತಮ್ಮ ರಾಜ್ಯಭಾರ, ಕಚೇರಿಗಳ ನಿರ್ವಹಣೆ, ವಾಸ್ತವ್ಯ ಮತ್ತು ಕ್ರೀಡೆ ಸೇರಿ ಮತ್ತಿತರ ಚಟುವಟಿಕೆಗಳಿಗೆ ಐತಿಹಾಸಿಕ ಕಟ್ಟಡಗಳನ್ನು ನಿರ್ಮಿಸಿದ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಆದರೆ, ಪ್ರೀತಿಯ ಧ್ಯೋತಕವಾಗಿ ಕಟ್ಟಿದ ಮಹಲ್ಗಳು ತೀರಾ ಕಡಿಮೆ.
ನರ್ತಕಿಗೆ ಮನಸೋತ ದೊರೆ; ಕಿತ್ತೂರಿನ 9ನೇ ದೊರೆ ಮಾಳವರುದ್ರಗೌಡ (ಫಕೀರರುದ್ರಸರ್ಜ)ದೇಸಾಯಿ ಸವಣೂರಿನ ನವಾಬರ ಜೊತೆಗೆ ಉತ್ತರಭಾರತ ಪ್ರವಾಸಕ್ಕೆ ಹೋದ ವೇಳೆ, ಕಾಶ್ಮೀರದ ಮುಸ್ಲಿಂ ದೊರೆಯ ಆಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಕಣ್ಣಿಗೆ ಬಿದ್ದ ರಾಜನರ್ತಕಿ ರಂಜನಿ (ನೀಲಂ) ಅವರಿಗೆ ಮಾಳವರುದ್ರಗೌಡರು ಮನಸೋತರು. ಇಬ್ಬರ ನಡುವೆ ಪ್ರೇಮಾಂಕುರವಾಗಿ ತಾಯ್ನಾಡಿಗೆ ಮರಳುವಾಗ ಅವರನ್ನೂ ಕರೆತಂದರು. ಇಬ್ಬರ ವಾಸಕ್ಕಾಗಿ ಕಿತ್ತೂರಿನ ಉಪರಾಜಧಾನಿಯಾಗಿದ್ದ ದೇಶನೂರಿನಲ್ಲಿ ಐತಿಹಾಸಿಕ ಕಟ್ಟಡ ನಿರ್ಮಿಸಿದ್ದರು. ವಾಸ್ತುಶಿಲ್ಪದಿಂದ ಶ್ರೀಮಂತವಾಗಿದ್ದ ಈ ಕಟ್ಟಡ 'ನಿರಂಜನ್ ಮಹಲ್' ಎಂದೇ ಖ್ಯಾತಿ ಪಡೆಯಿತು.
ಕಿತ್ತೂರಿನ ದೊರೆಗೂ ಉತ್ತರದ ಮುಸ್ಲಿಂ ರಾಜನರ್ತಕಿಗೂ ಎಲ್ಲಿಂದೆಲ್ಲಿಯ ನಂಟು ಎಂಬುದನ್ನು ಅರಿಯುವ ಕುತೂಹಲ ಜನರದ್ದು. ಇದಕ್ಕಾಗಿ ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಿಂದಲೂ ಸಾಕಷ್ಟು ಪ್ರವಾಸಿಗರು, ಸಂಶೋಧಕರು, ಇತಿಹಾಸ ಪ್ರಿಯರು ದೇಶನೂರಿಗೆ ಆಗಮಿಸುತ್ತಾರೆ. ಆದರೆ, ಈ ಭವ್ಯ ಕಟ್ಟಡದ ಮಾಹಿತಿ ಅರಿಯಲಾಗದೇ ನಿರಾಸೆಯಿಂದ ಮರಳುತ್ತಿದ್ದಾರೆ. ಸರ್ಕಾರದ ಕಡೆಗಣೆಗೆ ಒಳಗಾದ ಈ ಮಹಲ್ ಅವನತಿಯತ್ತ ಹೆಜ್ಜೆ ಇಟ್ಟಿರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜನರ್ತಕಿಗೆ ಲಿಂಗದೀಕ್ಷೆ ನೀಡಿದ ಕಲ್ಮಠದ ಸ್ವಾಮೀಜಿ : ''ಕಾಶ್ಮೀರದಿಂದ ಕಿತ್ತೂರಿಗೆ ರಂಜನಿ (ನೀಲಂ)ಳನ್ನು ಕರೆದುಕೊಂಡು ಬಂದ ಮಾಳವರುದ್ರಗೌಡ ದೊರೆ, ಆಕೆಯೊಂದಿಗೆ ಮದುವೆ ಆಗುವುದಾಗಿ ಅರಮನೆಯಲ್ಲಿ ತಿಳಿಸುತ್ತಾರೆ. ಇದಕ್ಕೆ ಮೊದಲ ಪತ್ನಿ ಮಲ್ಲವ್ವ ಸೇರಿ ಎಲ್ಲರೂ ವಿರೋಧಿಸುತ್ತಾರೆ. ನಿನಗೆ ರಾಜ್ಯಭಾರ ಬೇಕೋ, ರಾಜ ನರ್ತಕಿ ಬೇಕೋ? ಎಂದು ಪ್ರಶ್ನಿಸುತ್ತಾರೆ. ಆಗ ನನಗೆ ನನ್ನ ಪ್ರೇಯಸಿಯೇ ಬೇಕು ಎಂದಾಗ, ರಾಜಗುರು ಸಂಸ್ಥಾನ ಕಲ್ಮಠದ ಸ್ವಾಮೀಜಿ ನರ್ತಕಿಗೆ 'ನಿರಂಜನಿ' ಎಂದು ಹೆಸರಿಟ್ಟು ಲಿಂಗ ದೀಕ್ಷೆ ಕೊಡಿಸಿ ಮಾಳವರುದ್ರಗೌಡ ದೇಸಾಯಿ ಜೊತೆಗೆ ಮದುವೆ ಮಾಡಿಸುತ್ತಾರೆ. ಬಳಿಕ ತನ್ನ ಪ್ರೇಮದ ಸಂಕೇತವಾಗಿ ದೇಶನೂರಿನಲ್ಲಿ ಸುಂದರ ಮಹಲ್ ನಿರ್ಮಿಸುತ್ತಾರೆ. ಅದುವೇ 'ನಿರಂಜನಿ ಮಹಲ್'. ಸದ್ಯ ಇದು ದುಸ್ಥಿತಿಗೆ ತಲುಪಿದ್ದು, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಡಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣ ಮಾಡಬೇಕು'' ಎಂದು ಹಿರಿಯ ಪತ್ರಕರ್ತ ಸಿ. ವೈ ಮೆಣಸಿನಕಾಯಿ ಒತ್ತಾಯಿಸಿದ್ದಾರೆ.
ಬೆರಗು ಮೂಡಿಸುವ ಕಟ್ಟಡ ನಿರ್ಮಾಣದ ಶೈಲಿ : ''1734-1749ರ ವರೆಗೆ ಆಡಳಿತ ನಡೆಸಿರುವ ಮಾಳವರುದ್ರಗೌಡರು ನಿರ್ಮಿಸಿರುವ 'ನಿರಂಜನಿ ಮಹಲ್' ನೋಡಲು ಒಂದು ಅಂತಸ್ತಿನಂತೆ ಕಂಡುಬಂದರೂ, ಎರಡಂತಸ್ತಿನ ಕಟ್ಟಡ ಇದಾಗಿದೆ. ನಾಲ್ಕು ದಿಕ್ಕುಗಳಲ್ಲೂ 20 ಕಮಾನುಗಳು ಇವೆ. ನೆಲ ಮಹಡಿಯಲ್ಲಿ ಜಲಕ್ರೀಡೆ ಆಡಲು ಮತ್ತು ನೀರನ್ನು ಬಳಸಲು ಒಳಗೆ ಬಾವಿ ನಿರ್ಮಿಸಲಾಗಿದೆ. ಈಗಲೂ ಬಾವಿಯಿದ್ದು, ನೀರೂ ಇದೆ. ಇನ್ನು ಬಾವಿಯ ಸುತ್ತಲೂ ಸ್ನಾನಗೃಹ, ಪೂಜಾಗೃಹಗಳು ಇದ್ದವು. ದಾಸಿಯರ ವಾಸಕ್ಕೆ ಕೋಣೆಗಳು ಇದ್ದವು. ಮೇಲಿನಮಹಡಿಯ ಮಧ್ಯದಲ್ಲಿ ಒಂದು ಬೃಹದಾಕಾರದ ಬೆಳಕಿನ ಕಿಂಡಿಯಿದ್ದು, ಅದಕ್ಕೆ ಗ್ಲಾಸ್ ಅಳವಡಿಸಿದ್ದರು. ಈಗ ಗ್ಲಾಸ್ ಹಾಳಾಗಿದೆ. ಇಕ್ಕಟ್ಟಾದ ಮೆಟ್ಟಿಲುಗಳಿವೆ. ಎರಡನೇ ಮಹಡಿ ಮಧ್ಯ ಭಾಗದಲ್ಲಿ ರಾಜ-ರಾಣಿಯ ವಾಸ್ತವ್ಯಕ್ಕೆ ಒಂದು ಕೋಣೆ ಕಾಣಸಿಗುತ್ತದೆ. ಆದರೆ, ಸದ್ಯ ಇದರ ಅಸ್ತಿತ್ವ ಇಲ್ಲ. ಈ ಕಟ್ಟಡದ ತುಂಬಾ ಬೆಳಕು, ಗಾಳಿಯ ವ್ಯವಸ್ಥೆಗಾಗಿ ಸಾಕಷ್ಟು ಸಣ್ಣ ಸಣ್ಣ ಬೆಳಕಿನ ಕಿಂಡಿಗಳನ್ನು ಅಳವಡಿಸಲಾಗಿದೆ. ಇನ್ನು, ಈ ಕಟ್ಟಡದ ಶೈಲಿ ನಿಜಕ್ಕೂ ಬೆರಗು ಮೂಡಿಸುತ್ತದೆ'' ಎನ್ನುತ್ತಾರೆ ದೇಶನೂರ ಗ್ರಾ. ಪಂ. ಮಾಜಿ ಅಧ್ಯಕ್ಷ ದೀಪಕಗೌಡ ಪಾಟೀಲ.
ಅವಸಾನದ ಅಂಚಿಗೆ ತಲುಪಿದ 'ನಿರಂಜನಿ ಮಹಲ್' : ಈ ಬಗ್ಗೆ ಶಿಕ್ಷಕ ಎ. ಎಸ್ ಗಡದವರ್ ಮಾತನಾಡಿ, ''ಹೆಮಟೈಟ್ ಕಾರ್ಟರೈಜ್ ಕಲ್ಲು, ಸುಣ್ಣ-ಬೆಲ್ಲ ಮಿಶ್ರಿತ ಗಚ್ಚಿನಿಂದ ಈ ಮಹಲ್ ಕಟ್ಟಲಾಗಿದ್ದು, ಇನ್ನು ಕೂಡ ಗಟ್ಟಿಮುಟ್ಟಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಅವಸಾನದ ಅಂಚಿಗೆ ತಲುಪಿದೆ. ಅರಸ ಮಾಳವರುದ್ರಗೌಡ ಅವರು ದೇಶನೂರಿನಲ್ಲಿ 'ನಿರಂಜನಿ ಮಹಲ್' ನಿರ್ಮಿಸುವ ಜೊತೆಗೆ ಗುಡ್ಡದಲ್ಲಿ ಕೋಟೆಯೊಂದನ್ನು ಕಟ್ಟಿದ್ದರು. ಇದಕ್ಕೆ ರುದ್ರಗಡ ಎಂದು ಕರೆಯುತ್ತಿದ್ದರು. ಈ ಮಹಲ್ನಿಂದ ರುದ್ರಗಡಕ್ಕೆ ಹೋಗಲು ಸುರಂಗ ಮಾರ್ಗವೊಂದಿತ್ತು. ಈಗ ಅದು ಮುಚ್ಚಲ್ಪಟ್ಟಿದೆ. ಇನ್ನು ರುದ್ರಗಡದಲ್ಲಿನ ಅರಮನೆ ಕಿತ್ತೂರು ಅರಸರಿಗೆ ಬೇಸಿಗೆ ಅರಮನೆಯಾಗಿತ್ತು. ಬೇಸಿಗೆಯಲ್ಲಿ ಮೂರು ತಿಂಗಳು ಇಲ್ಲಿಯೇ ಇರುತ್ತಿದ್ದರು'' ಎಂದು ವಿವರಿಸಿದರು.
ಇದನ್ನೂ ಓದಿ : ತಾಜ್ ಮಹಲ್ ಹಾಗೂ ಇತರ ಐತಿಹಾಸಿಕ ತಾಣಗಳಿಗೆ ಹಾನಿ!