ಹುಬ್ಬಳ್ಳಿ: ''ಆರೋಗ್ಯ ಕ್ಷೇತ್ರದಲ್ಲಿ ಎಂ.ಎಂ. ಜೋಶಿ ಅವರ ಸಾಧನೆ ಅಪಾರ. ತಾಂತ್ರಿಕತೆ ಬಳಸಿಕೊಂಡು, ಹೊಸ ಪ್ರಯೋಗಗಳ ಮೂಲಕ ಜನಸಾಮಾನ್ಯರ ಸೇವೆ ಮಾಡುತ್ತಿದ್ದಾರೆ. ಮನಸ್ಸು ಶುದ್ಧವಾಗಿಟ್ಟುಕೊಂಡು ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಖಂಡಿತವಾಗಿ ಸಾಧನೆ ನಿಮ್ಮದಾಗುತ್ತದೆ. ಅದಕ್ಕೆ ಎಂ.ಎಂ.ಜೋಶಿ ಅವರೇ ನಿದರ್ಶನ" ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಐಸಿರಿ ಕಟ್ಟಡವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. "ಸ್ವಚ್ಛ ಭಾರತ ಅಭಿಯಾನದ ಮೂಲಕ ಪ್ರಧಾನಮಂತ್ರಿ ದೇಶದಲ್ಲಿ ಮಹಾಕ್ರಾಂತಿ ಮಾಡಿದ್ದಾರೆ. ಹೊಗೆಮುಕ್ತ ಅಡುಗೆ ಮನೆ, ಶುದ್ಧ ನೀರು ಹಾಗೂ ಆಯುಷ್ಮಾನ್ ಭಾರತ ಯೋಜನೆ ಜಾರಿಗೊಳಿಸಿ ದೇಶದ ನಾಗರಿಕರು ಆರೋಗ್ಯಯುತ ಜೀವನ ನಡೆಸಲು ನೆರವಾಗಿದ್ದಾರೆ. ವಿಕಸಿತ ಭಾರತ ಪರಿಕಲ್ಪನೆಯಲ್ಲಿ ದೇಶವು ಸಾಗುತ್ತಿದೆ. ಬಲಿಷ್ಠ ಭಾರತ ನಿರ್ಮಾಣ ನಮ್ಮದು. 10 ವರ್ಷಗಳಲ್ಲಿ ದೇಶದಲ್ಲಿ ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲವೂ ಅಭಿವೃದ್ಧಿ ಸಾಧಿಸಿವೆ" ಎಂದು ಹೇಳಿದರು.
ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ಜಗತ್ತಿನಲ್ಲಿ ಭಾರತ ಆರ್ಥಿಕತೆಯಲ್ಲಿ ಪ್ರಸ್ತುತ 5ನೇ ಸ್ಥಾನದಲ್ಲಿದೆ. ಇದಕ್ಕೆ ರಾಷ್ಟ್ರದ ಆರೋಗ್ಯ ಕ್ಷೇತ್ರದ ಕೊಡುಗೆ ಅಪಾರ. ಭಾರತದ ಆರೋಗ್ಯ ಅಭಿವೃದ್ಧಿ ಹೊಂದುತ್ತಾ ಜಗತ್ತಿನ ಮೆಡಿಕಲ್ ಹಬ್ ಆಗುತ್ತಿದೆ. ವಿಶ್ವಾಸಾರ್ಹ ದೇಶವಾಗಿ ಆರ್ಥಿಕ ಪರಿವರ್ತನೆ ಹೊಂದುವ ಮೂಲಕ, 3ನೇ ಸ್ಥಾನಕ್ಕೇರಲಿದೆ'' ಎಂದು ವಿಶ್ವಾಸ ವ್ಯಕ್ಯಪಡಿಸಿದ ಅವರು, ಉಪರಾಷ್ಟ್ರಪತಿಗಳು ಹುಬ್ಬಳ್ಳಿಗೆ ಆಗಮಿಸಿದ್ದು, ಹೆಚ್ಚು ಸಂತಸ ತಂದಿದೆ. ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವದವರು" ಎಂದರು.
ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, "ಡಾ. ಎಂ.ಎಂ. ಜೋಶಿ ಅವರಲ್ಲಿ ಪ್ರಮುಖವಾದ ಎರಡು ಗುಣಗಳಿವೆ. ಮಾನವೀಯತೆ ಹಾಗೂ ದೈವೀ ಗುಣಗಳು. ಇದರಿಂದ ಅವರು ಸಮಾಜದಲ್ಲಿನ ಅಶಕ್ತರ ಆರೊಗ್ಯ ಸುಧಾರಣೆಗೆ ಹಗಲಿರುಳು ಶ್ರಮಿಸಿ, ಮಹತ್ವದ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿಯಿಂದ ತಮ್ಮ ಸೇವೆ ಆರಂಭಿಸಿ, ಲಕ್ಷಾಂತರ ಬಡವರಿಗೆ ನೆರವಾಗಿದ್ದಾರೆ. ನಾವು ಚಿಕ್ಕವರಿದ್ದಾಗ ಹಳ್ಳಿಗಳಲ್ಲಿ ಕಣ್ಣಿನ ಹೆಲ್ತ್ ಕ್ಯಾಂಪ್ ಮಾಡಿ ಅಪಾರ ಜನರಿಗೆ ನೆರವು ನೀಡಿದವರು ಇವರು. ರಾಜ್ಯದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ವೈದ್ಯರಲ್ಲಿ ಎಂ.ಎಂ. ಜೋಶಿ ಒಬ್ಬರಾಗಿದ್ದಾರೆ. ಇಂದು ಉದ್ಘಾಟನೆಯಾದ ಐಸಿರಿ ಆಸ್ಪತ್ರೆ ಕಟ್ಟಡವು ಬಡವರ ಆಶಾಕಿರಣವಾಗಲಿ" ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ ತೆಂಗಿನಕಾಯಿ, ಶ್ರೀನಿವಾಸ್ ಮಾನೆ, ಎಂ. ಆರ್. ಪಾಟೀಲ, ಮಹಾನಗರ ಪಾಲಿಕೆ ಮೇಯರ್ ವೀಣಾ ಭಾರದ್ವಾಜ್, ಎಂ.ಎಂ. ಜೋಶಿ ಆಸ್ಪತ್ರೆಯ ಸಂಸ್ಥಾಪಕ ಪದ್ಮಶ್ರೀ ಡಾ.ಎಂ.ಎಂ. ಜೋಶಿ, ಪ್ರಮೀಳಾ ಜೋಶಿ ಹಾಗೂ ಡಾ. ಶ್ರೀನಿವಾಸ್ ಜೋಶಿ ಉಪಸ್ಥಿತರಿದ್ದರು.
ಇದನ್ನೂ ಓದಿ: 4ನೇ ಹಂತದಲ್ಲಿದ್ದ ಕ್ಯಾನ್ಸರ್ ಪೀಡಿತ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ; 8 ಕೆ ಜಿ ಗೆಡ್ಡೆ ಹೊರತೆಗೆದ ವೈದ್ಯರು