ಹುಬ್ಬಳ್ಳಿ : ನಮ್ಮ ಬೆವರು, ನಮ್ಮ ದುಡಿಮೆ ಅವರಿಗೆ ಬೇಕಂತೆ, ನೆರವು ಕೇಳೋದು ತಪ್ಪಾ?. ನಮ್ಮಿಂದ ತಾನೇ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗ್ತಾ ಇದೆ. ನನಗಂತೂ ಬಜೆಟ್ ಮೇಲೆ ಏನೂ ನಿರೀಕ್ಷೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿಯವರ ಮಾಸ್ಟರ್ ಸ್ಟ್ರೋಕ್ನಿಂದ ನಿರುದ್ಯೋಗ ತಾಂಡವ ಆಡ್ತಾ ಇದೆ. ಮಧ್ಯಮ ವರ್ಗ ನಿರ್ನಾಮವಾಗಿದೆ. ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾ ಇದ್ದಾರೆ. ಕರ್ನಾಟಕ ಎರಡನೇ ಹೆಚ್ಚು ಐಟಿ ಕಂಪನಿ ಹೊಂದಿರುವ ರಾಜ್ಯ. ನಾವು 100 ರೂಪಾಯಿ ಟ್ಯಾಕ್ಸ್ ಕಟ್ಟಿದ್ರೆ 12 ರೂಪಾಯಿ ಕೊಡ್ತಾರೆ. ಯುಪಿ ಅವರಿಗೆ 120, ಬಿಹಾರ 178 ರೂಪಾಯಿ ಹೋಗ್ತಾ ಇದೆ. ಇಡೀ ದೇಶವನ್ನು ನಾವು ಸಮರ್ಥವಾಗಿ ನಡೆಸಿಕೊಂಡು ಹೋಗ್ತಾ ಇದ್ದೇವೆ. ನಮ್ಮ ರಾಜ್ಯದಿಂದಲೇ ಅತೀ ಹೆಚ್ಚು ಉದ್ಯೋಗ ಸೃಷ್ಟಿ ಆಗ್ತಿರೋದು. ಅದಕ್ಕೆ ಯಾವುದೇ ನೆರವು ನೀಡೋದಿಲ್ಲ ಅಂದ್ರೆ ಹೇಗೆ? ಬಜೆಟ್ ಮೇಲೆ ನನಗೆ ಯಾವುದೇ ನಿರೀಕ್ಷೆ ಇಲ್ಲ. ಕಳೆದ ಹತ್ತು ವರ್ಷದಿಂದ ನೋಡಿಕೊಂಡು ಬಂದಿದ್ದೇನೆ. ಅದರ ಆಧಾರದ ಮೇಲೆ ಮಾತನಾಡುತ್ತಿದ್ದೇನೆ ಎಂದರು.
ಕಳೆದ ಬಾರಿ ರಾಜ್ಯಕ್ಕೆ ಅನುದಾನ ಕೇಳಿದ್ದೆವು, ಇದುವರೆಗೂ ಬಂದಿಲ್ಲ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಮನವಿ ಪತ್ರ ಕೊಡದೆ ನಾವು ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡಿದ್ದೇವೆ. ಆದರೂ ಕೂಡ ಕೇಂದ್ರದವರು ಕೊಡಲ್ಲ ಅಂದ್ರೆ? ಕೇಂದ್ರ ಸರ್ಕಾರದಿಂದ ಏನೂ ಬಂದಿಲ್ಲ ಅಂದ್ರೆ ಕಷ್ಟ ಆಗುತ್ತೆ ಎಂದು ಹೇಳಿದರು.
ಪ್ರಭಾವಿ ಸಚಿವರ ಸಭೆ ವಿಚಾರವಾಗಿ ಮಾತನಾಡಿದ ಅವರು, ಮುಂದಿನ ಮೂರುವರೆ ವರ್ಷ ನಮ್ಮ ಸರ್ಕಾರಕ್ಕೆ ಏನೂ ಆಗಲ್ಲ. ನಮ್ಮ ಮನೆಗೆ, ನಾವು ಅವರ ಮನೆಗೆ ಹೋಗಲೇಬಾರದಾ? ಎರಡಮೂರು ದಿನಕ್ಕೊಮ್ಮೆ ನಾನು ಗೃಹ ಸಚಿವರ ಮನೆಯಲ್ಲೇ ಇರ್ತೇನೆ. ನಮ್ಮ ಪಕ್ಷದವರು ಕೂಡ ಹೋಗಬಾರದು ಅಂದ್ರೆ ಹೇಗೆ?, ಪರಮೇಶ್ವರ್, ಸುರ್ಜೆವಾಲಾ, ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಕರ್ನಾಟಕದ ಬಗ್ಗೆ ಆಗ್ತಾ ಇರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ ನಾವು ಮೂರುವರೆ ವರ್ಷ ಒಳ್ಳೆಯ ಆಡಳಿತ ಕೊಡ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸಮರ್ಥನೆ ನೀಡಿದ ಸಚಿವರು, ಗಂಗಾ ಸ್ನಾನ ಮಾಡಿದ್ರೆ ಪಾಪ ಪರಿಹಾರ ಆಗುತ್ತಾ? ಬಿಜೆಪಿ ಅವರು ಹಿಂದೂ ವಿರೋಧಿ ಅಂತಾರೆ. ನಮ್ಮ ದೇಶದಲ್ಲಿ ಬುದ್ದಿಸಮ್, ಜೈನಿಸಮ್, ಸಿಖ್ ಹಾಗೂ ಲಿಂಗಾಯತ ಧರ್ಮಗಳು ಹುಟ್ಟಿವೆ. ಈ ನಾಲ್ಕು ಧರ್ಮಗಳು ಹುಟ್ಟಿದ್ದು ಯಾವುದರಲ್ಲಿ ಸಮಾನತೆ, ಸ್ವಾಭಿಮಾನ ಇರಲಿಲ್ಲ ಅದರ ವಿರುದ್ಧ ಹುಟ್ಟಿವೆ. ಬಸವಣ್ಣ ಅವರು ದೇಶ ದ್ರೋಹಿನಾ? ಹಿಂದೂ ವಿರೋಧಿನಾ? ಬಿಜೆಪಿ ಅವರಿಗೆ ಕಾಮನ್ ಸೆನ್ಸ್ ಇದೆಯಾ? ಕೇವಲ ಗಂಗಾ ಅಷ್ಟೇ ಅಲ್ಲ, ದೇಶದ ಯಾವುದೇ ನದಿಯಲ್ಲಿ ಹೋಗಿ ಡುಮಕಿ ಹಾಕಿದ್ರೂ ಪಾಪ ಪರಿಹಾರ ಆಗೋದಿಲ್ಲ. ನಾವು ದುಡಿತಾ ಇರೋದಕ್ಕೆ ಅನುದಾನ ಕೊಡಿ ಸಾಕು, ನಮಗೆ ದೇಶ ದ್ರೋಹಿ ಸರ್ಟಿಫಿಕೆಟ್ ಕೊಡೋಕೆ ಇವರ್ಯಾರು? ಎಂದು ಪ್ರಶ್ನಿಸಿದರು.
ಎಕನಾಮಿಕ್ ಸರ್ವೇ ರಿಪೋರ್ಟ್ ಮುಚ್ಚಿ ಹಾಕೋಕೆ ಹೀಗೆಲ್ಲಾ ಮಾಡ್ತಾ ಇದ್ದಾರೆ. ಟ್ರಂಪ್ ಇನ್ವಿಟೆಷನ್ ಕೊಡಲಿಲ್ಲ. ಇಂತಹ ವಿಷಯಗಳ ಮೂಲಕ ಅದನ್ನ ಮುಚ್ಚಿ ಹಾಕೋ ಯತ್ನ ಇದಾಗಿದೆ ಎಂದು ಖರ್ಗೆ ಟೀಕಿಸಿದರು.
ಅಯ್ಯೋ ಪಾಪ, ಎನ್ನುವುದಿಲ್ಲವಾ? : ರಾಷ್ಟ್ರಪತಿಗಳ ಕುರಿತು ಸೋನಿಯಾ ಗಾಂಧಿ ಹೇಳಿಕೆಗೆ ಸಮರ್ಥನೆ ಮಾಡಿಕೊಂಡ ಅವರು, ಏನಂತ ಹೇಳಿದ್ರು? ಪಾಪ ಅವರು ಅಷ್ಟು ಹೊತ್ತಿನಿಂದ ನಿಂತಿದ್ದಾರೆ. ಅವರಿಗೂ ಕೂಡಾ ವಯಸ್ಸಾಗಿದೆ, ಒಬ್ಬ ರಾಷ್ಟ್ರಪತಿಯಿಂದ ಅಷ್ಟು ಹೊತ್ತು ಭಾಷಣ ಮಾಡಿಸುವುದಾ? ಎಂದು ಹೇಳಿದ್ದು ತಪ್ಪಾ? ಎಂದು ಪ್ರಶ್ನಿಸಿದರು. ಪೂರ್ ಲೇಡಿ ಅಂತ ಪದ ಬಳಕೆ ಮಾಡಿದ್ದಾರೆ? ಎಂಬ ಪ್ರಶ್ನೆಗೆ, ಅಯ್ಯೋ ಪಾಪ, ಎನ್ನುವುದಿಲ್ಲವಾ? ಅಂತಾ ಕೇಳಿದ್ರು. ಮಾನ್ಯ ಮುಖ್ಯಮಂತ್ರಿಗಳು ಕಳೆದ ಬಜೆಟ್ ಭಾಷಣದ ವೇಳೆ ಮೂರುವರೆ ಗಂಟೆ ಭಾಷಣ ಮಾಡಿದ್ರು, ಅದನ್ನ ಇಂಗ್ಲಿಷ್ನಲ್ಲಿ ಟ್ರಾನ್ಸ್ಲೇಟ್ ಮಾಡಿ, ಯಾವ ಕಡೆ ನಾವು ಕಾನ್ಸನ್ಟ್ರೇಟ್ ಮಾಡಬೇಕು? ಎಂದು ಮರು ಪ್ರಶ್ನಿಸಿದರು.
ಭಕ್ತಿ ಆಧ್ಯಾತ್ಮಿಕವಾಗಿ ಇರಬೇಕು : ಮಲ್ಲಿಕಾರ್ಜುನ ಖರ್ಗೆ ಪೂಜೆ ಮಾಡಿದ ಫೋಟೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಖರ್ಗೆ ಸಾಹೇಬ್ರು ಬುದ್ಧ, ಬಸವ, ಅಂಬೇಡ್ಕರ್ ಮೇಲೆ ನಂಬಿಕೆ ಇಟ್ಟವರು. ಅವರ ಆಚರಣೆ ನನ್ನ ಮೇಲೆ ಹೇರಿಲ್ಲ, ನನ್ನ ಆಚರಣೆ ನನ್ನ ಮಕ್ಕಳ ಮೇಲೆ ಹೇರಲ್ಲ. ನಿಮ್ಮ ಭಕ್ತಿ ನಿಮಗೆ, ನಮ್ಮ ಭಕ್ತಿ ನಮಗೆ. ಬಾಬಾ ಸಾಹೇಬ್ ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ, ಭಕ್ತಿ ಆಧ್ಯಾತ್ಮಿಕವಾಗಿ ಇರಬೇಕು, ಮನಶಾಂತಿಗಾಗಿ ಇರಬೇಕು. ಭಕ್ತಿ ವ್ಯಕ್ತಿಗೆ ಬಂದ್ರೆ ಸರ್ವಾಧಿಕಾರಿ ಆಗ್ತಾನೆ ಎಂದಿದ್ದಾರೆ ಎಂದು ಹೇಳಿದರು.
ಇದೆಲ್ಲ ಪೂರ್ವ ನಿಯೋಜಿತ : ಇಡಿ ಯಾಕೆ ಮುಡಾ ತನಿಖೆ ಮಾಡ್ತಾ ಇದೆ? ಮನಿ ಲಾಂಡರಿಂಗ್ನಲ್ಲಿ ಸಿದ್ದರಾಮಯ್ಯ ಪಾತ್ರ ಇದೆ ಅಂತ ಬಿಂಬಿಸಿದ್ದಾರೆ. ವಿಜಯೇಂದ್ರ ಸಲ್ಲಿಸಿರೋ ಅಫಿಡವಿಟ್ನಲ್ಲಿ ಮನಿ ಲಾಂಡರಿಂಗ್ ಅಂಶವಿದೆ. ಆದರೆ ವಿಜಯೇಂದ್ರ ಅವರ ವಿಚಾರ ಇದುವರೆಗೂ ಬಹಿರಂಗಗೊಂಡಿಲ್ಲ. ಸಿದ್ದರಾಮಯ್ಯ ಅವರದ್ದು ಹೇಗೆ ಆಚೆ ಬರುತ್ತೆ. ಇದೆಲ್ಲ ಪೂರ್ವ ನಿಯೋಜಿತ. ಅಷ್ಟು ಇದ್ದಿದ್ರೆ ಮೇಲೆ ಕೂತ ಇಬ್ಬರು ಬಿಡ್ತಾ ಇದ್ರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ವಿಕಸಿತ ಭಾರತ ನಿರ್ಮಾಣಕ್ಕೆ ಒತ್ತು : ಕೇಂದ್ರ ಬಜೆಟ್ ಸ್ವಾಗತಿಸಿದ ರಾಜ್ಯ ಬಿಜೆಪಿ ನಾಯಕರು - BUDGET 2025