ಬೆಂಗಳೂರು: ''ಸಿಎಂ ಡಿನ್ನರ್ ಸಭೆಯಲ್ಲಿ ಅಹಿಂದ ಸಚಿವರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ'' ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ''ಆಪ್ತ ಸಚಿವರ ಸಭೆ ಅಂತ ಅಲ್ಲ. ಅಹಿಂದ ಸಚಿವರೂ ಕೂಡಿದ್ದಾರೆ. ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಮಾತನಾಡಿದ್ದರಲ್ಲಿ ತಪ್ಪೇನಿದೆ?. ಹಿಂದಿನ ಅಹಿಂದ ಸಭೆಗಳೇ ಬೇರೆ. ಅಲ್ಲಿ ಊಟಕ್ಕೆ ಸೇರಿ ಸಮಾಜದ ಸಮಸ್ಯೆ, ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ. ನಾಳೆ ನಾವು ಲಿಂಗಾಯತ ಶಾಸಕರು ಸೇರುತ್ತೇವೆ. ನಾವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇದನ್ನು ತಪ್ಪು ಎನ್ನಲು ಆಗುತ್ತಾ?. ಒಕ್ಕಲಿಗ ನಾಯಕರೂ ಕೂಡ ಅವರ ಸಮಸ್ಯೆಗಳ ಚರ್ಚೆಗೆ ಸೇರಿರುತ್ತಾರೆ. ಬೇರೆ ಅರ್ಥ ಏಕೆ?'' ಎಂದು ಪ್ರಶ್ನಿಸಿದ್ದಾರೆ.
ವಿಪಕ್ಷಗಳು ರಾಜಕೀಯ ಮಾಡುತ್ತಿವೆ: ಗುತ್ತಿಗೆದಾರ ಸಚಿನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಪ್ರಿಯಾಂಕ್ ವಿರುದ್ಧ ಯಾಕೆ ಪ್ರತಿಭಟನೆ ಮಾಡಬೇಕು?. ಆತ್ಮಹತ್ಯೆಗೂ ಪ್ರಿಯಾಂಕ್ ಖರ್ಗೆಗೂ ಸಂಬಂಧವೇನು?. ಕೇಸಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ತನಿಖೆ ನಡೆಯುತ್ತಿದೆ, ಸತ್ಯ ಎಲ್ಲವೂ ಹೊರಬರುತ್ತದೆ. ವಿಪಕ್ಷಗಳು ಸುಮ್ಮನೆ ರಾಜಕೀಯ ಮಾಡುತ್ತಿವೆ'' ಎಂದರು.
''ಸಂಪುಟ ಪುನಾರಚನೆ ಬಗ್ಗೆ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಹೇಳಿದಂತೆ ಮಾಡುತ್ತಾರೆ. ಹೈಕಮಾಂಡ್, ಸಿಎಂ ಪರಮಾಧಿಕಾರ ಅದು. ಹೈಕಮಾಂಡ್ ನಿರ್ಧಾರ ಮಾಡುತ್ತದೆ'' ಎಂದು ತಿಳಿಸಿದರು.
ಕೆಟ್ಟ ಪದ ಬಳಕೆ ಸರಿಯಲ್ಲ: ಸಿ.ಟಿ.ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಟಾಪಟಿ ಪ್ರಕರಣದ ಬಗ್ಗೆ ಮಾತನಾಡಿ, ''ಹೆಣ್ಣುಮಗಳಿಗೆ ಕೆಟ್ಟ ಪದ ಬಳಸಿದ್ದಾರೆ. ಅದು ಸಿ.ಟಿ.ರವಿಯವರಿಗೆ ಶೋಭೆ ತರಲ್ಲ. ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ಹೊರಬರಲಿ. ಅವರ ಬೆನ್ನಿಗೆ ಪಕ್ಷ ನಿಂತಿಲ್ಲ ಅನ್ನೋದು ಬೇಡ. ನಾವೆಲ್ಲರೂ ಪ್ರತಿಭಟನೆ ಮಾಡಿದ್ದೆವು. ನಾನು ಸೇರಿ ಎಲ್ಲರೂ ಖಂಡಿಸಿದ್ದೆವು. ಕೆಟ್ಟ ಪದ ಬಳಸುವುದು ಸರಿಯಲ್ಲ. ಬೆಳಗಾವಿಯಲ್ಲಿ ನಾವು ಮಾತನಾಡಿದ್ದೆವು. ತನಿಖೆ ನಡೆದಿರುವಾಗ ಮುಂದಿನದು ಯಾಕೆ?. ಮೊದಲು ಸತ್ಯಾಸತ್ಯತೆ ಹೊರಬರಲಿ'' ಎಂದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ಯಾವುದೂ ಇಲ್ಲ, ಎಲ್ಲವೂ ಸುಳ್ಳು: ಡಿನ್ನರ್ ಮೀಟಿಂಗ್ ಬಗ್ಗೆ ಸಿಎಂ ಸ್ಪಷ್ಟನೆ