ರಾಜ್ಯಪಾಲರ ನಡವಳಿಕೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ: ಪರಮೇಶ್ವರ್ - G Parameshwar - G PARAMESHWAR
ಅನಿವಾರ್ಯತೆ ಇಲ್ಲದೇ ಇದ್ದರೆ ನಾವು ರಾಜ್ಯಪಾಲರಿಗೆ ಉತ್ತರ ಕೊಡುವುದಿಲ್ಲ. ಅವರ ನಡವಳಿಕೆಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.


Published : Sep 23, 2024, 12:55 PM IST
ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನಡವಳಿಕೆ ಬಗ್ಗೆ ಚರ್ಚಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು, ರಾಜ್ಯಪಾಲರು ಸರ್ಕಾರಕ್ಕೆ ವಿವರಣೆ ಕೇಳಿ ಪತ್ರಗಳನ್ನು ಬರೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಪ್ರತಿನಿತ್ಯ ಸರ್ಕಾರದ ಕಾರ್ಯಗಳ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿರುವ ಸಂದರ್ಭಗಳೇ ಇಲ್ಲ. ಆದರೆ ಇದೀಗ ನಿತ್ಯ ಪತ್ರ ಬರೆದು ಮಾಹಿತಿ ಕೊಡಿ ಅಂತಿದ್ದಾರೆ. ರಾಜ್ಯಪಾಲರು ಹಾಗೂ ಸರ್ಕಾರದ ಮಧ್ಯೆ ಉತ್ತಮ ಸಂಬಂಧ ಇರುತ್ತದೆ. ಆದರೆ ಹೀಗಾದರೆ ಸುಗಮವಾಗಿ ಆಗುವುದಿಲ್ಲ" ಎಂದರು.
"ಸರ್ಕಾರದಲ್ಲಿ ಸಿಎಂ ಜೊತೆಗೆ ಇದರ ಬಗ್ಗೆ ಮುಂದೆ ಏನು ಮಾಡಬೇಕೆಂದು ಚರ್ಚೆ ಮಾಡುತ್ತೇವೆ. ಅನಿವಾರ್ಯತೆ ಇಲ್ಲದಿದ್ದರೆ ನಾವು ರಾಜ್ಯಪಾಲರಿಗೆ ಉತ್ತರ ಕೊಡಲ್ಲ. ಯಾವುದಕ್ಕೆ ಉತ್ತರ ಕೊಡಬೇಕೋ ಕೊಡುತ್ತೇವೆ. ಸಂಪುಟದಲ್ಲಿ ರಾಜ್ಯಪಾಲರ ನಡವಳಿಕೆ ಬಗ್ಗೆ ಚರ್ಚೆ ಮಾಡುತ್ತೇವೆ" ಎಂದು ಹೇಳಿದರು.
ಮಹಾಲಕ್ಷ್ಮಿ ಕೊಲೆ ಕೇಸ್: ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಮಹಾಲಕ್ಷ್ಮಿ ಎಂಬ ಯುವತಿಯ ಬರ್ಬರ ಕೊಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, "ಒಂದಿಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಅದರಲ್ಲಿ ಇಬ್ಬರಿದ್ದಾರೋ ಒಬ್ಬರಿದ್ದಾರೋ ನೋಡಬೇಕು. ಆದಷ್ಟು ಬೇಗ ಅವರನ್ನು ಆರೋಪಿಗಳನ್ನು ಹಿಡಿಯುತ್ತೇವೆ" ಎಂದರು.
ಮುನಿರತ್ನ ಪ್ರಕರಣ: "ಮುನಿರತ್ನ ವಿರುದ್ಧ ದಿನಕ್ಕೊಂದು ಮಾಹಿತಿ ಹೊರಬರುತ್ತಿದೆ. ಹೀಗಾಗಿ ಎಸ್ಐಟಿ ಮಾಡಿದ್ದೇವೆ. ಸಿದ್ದರಾಮಯ್ಯರಿಗೆ ಒಂದು ಕುಮಾರಸ್ವಾಮಿಗೆ ಒಂದು ಮಾನದಂಡ ಮಾಡಲು ಆಗುವುದಿಲ್ಲ. ಎಲ್ಲರಿಗೂ ಒಂದೇ ಮಾನದಂಡ. ನಾಲ್ಕೂ ಜನ ಮಂತ್ರಿ, ಮಾಜಿ ಸಿಎಂಗಳ ದೂರಿಗೆ ರಾಜ್ಯಪಾಲರು ನೊಟೀಸನ್ನೇ ನೀಡಿಲ್ಲ" ಎಂದು ತಿಳಿಸಿದರು.
ಗೃಹ ಸಚಿವರನ್ನು ಭೇಟಿಯಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಬಿಟ್ ಕಾಯಿನ್, ಪಿಎಸ್ಐ ಪ್ರಕರಣದ ಮರುತನಿಖೆಗೆ ಮನವಿ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, "ಪೂರ್ಣ ಪ್ರಮಾಣದಲ್ಲಿ ಅದರ ತನಿಖೆಯಾಗಿಲ್ಲ. ಹೀಗಾಗಿ ನಮಗೆ ಅನುಮಾನವಿದೆ. ನೇರವಾದ ತನಿಖೆ ಮಾಡಿ ಅನ್ನುವುದು ನಮ್ಮ ಮನವಿ. ಆರಗ ಜ್ಞಾನೇಂದ್ರ ಅವರ ಪಾತ್ರವಿಲ್ಲ ಅಂದರೆ ಸರಿಯಲ್ಲ. ಆರಗ ಅವರ ಮಗ ಜಮೀನು ಕೊಂಡಿದ್ದಾರೆ. ಅದಕ್ಕೆ ಪ್ರತ್ಯೇಕವಾಗಿ ರಸ್ತೆ ಮಾಡಿಸಿದ್ದಾರೆ. 2 ಕೋಟಿ ರೂ ಖರ್ಚು ಮಾಡಿ ಮಾಡಿಸಿದ್ದಾರೆ. ಇದು ನಮಗೆ ಅನುಭವಕ್ಕೆ ಬಂದಿದೆ" ಎಂದು ಆರೋಪಿಸಿದ ಕಿಮ್ಮನೆ ರತ್ನಾಕರ್, "ತೀರ್ಥಹಳ್ಳಿಯಲ್ಲಿ 70 ಕೋಟಿ ಹಣ ಓಡಾಡಿದೆ. ಈಗ ಆಸ್ತಿ ಖರೀದಿ ನಡೆದಿದೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಅವರಿದ್ದಾರೆ ಅನ್ನಲ್ಲ. ಆದರೆ ಆ ಸಂದರ್ಭದಲ್ಲಿ ಅವರು ಗೃಹ ಸಚಿವರಾಗಿದ್ದರು. ಹಾಗಾಗಿ ತನಿಖೆ ಮಾಡಿ ಅಂತ ಹೇಳುತ್ತಿದ್ದೇವೆ" ಎಂದರು.
ಇದನ್ನೂ ಓದಿ: ಆರಗ ಜ್ಞಾನೇಂದ್ರ ಎಸಗಿರುವ ಅಕ್ರಮಗಳ ತನಿಖೆಗೆ ಎಸ್ಐಟಿ ರಚಿಸಿ: ಕಿಮ್ಮನೆ ರತ್ನಾಕರ್ - Kimmane Ratnakar