ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ “ಅರಮನೆ ಫಲಪುಷ್ಪ ಪ್ರದರ್ಶನ-2024” ಕಾರ್ಯಕ್ರಮ, ಛಾಯಾಚಿತ್ರ ಪ್ರದರ್ಶನ, ಬೊಂಬೆ ಮನೆ ಹಾಗೂ ಕುಸ್ತಿ ಪಂದ್ಯಾವಳಿಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್. ಸಿ ಮಹದೇವಪ್ಪ ಚಾಲನೆ ನೀಡಿದರು.
ಸಾವಿರಾರು ಫಲಪುಷ್ಪಗಳಿಂದ ವಿವಿಧ ರೀತಿಯ ಕಲಾಕೃತಿಗಳ ನಿರ್ಮಾಣ: ಫಲಪುಷ್ಪ ಪ್ರದರ್ಶನಕ್ಕೆ 25 ಸಾವಿರ ಹೂವಿನ ಕುಂಡಗಳನ್ನು ಇಡಲಾಗಿದ್ದು, ಗುಲಾಬಿ, ಸೇವಂತಿಗೆ, ಜಲಿಯ ಸಾಲ್ವಿಯ, ಚೆಂಡು ಹೂ, ಸೂರ್ಯಕಾಂತಿ ಹೂವುಗಳು ಸೇರಿದಂತೆ ಹಲವು ಬಗೆಯ ಹೂವುಗಳನ್ನು ಇಲ್ಲಿ ಕಾಣಬಹುದಾಗಿದೆ.
ಅರಮನೆ, ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಕಲಾಕೃತಿ, ಚಾಮುಂಡಿಬೆಟ್ಟದ ನಂದಿ ವಿಗ್ರಹ, ಪಕ್ಷಿಗಳು, ದೆಹಲಿಯ ಅಕ್ಷರಧಾಮ, ಕಾರ್ಗಿಲ್ ವಿಜಯಸ್ತಂಭ, ದಕ್ಷಿಣ ಕಾಶಿಯ ನಂಜುಂಡೇಶ್ವರ, ಗಂಡಭೇರುಂಡ, ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರತಿಕೃತಿ ಸೇರಿದಂತೆ ಹಲವು ವಿಭಿನ್ನ ಚಿತ್ತಾರಗಳನ್ನು ಹೂವುಗಳಲ್ಲಿ ಅರಳಿಸಲಾಗಿದೆ.
ಬೊಂಬೆ ಮನೆ, ಛಾಯಾಚಿತ್ರಗಳ ಪ್ರದರ್ಶನ ಹಾಗೂ ಕುಸ್ತಿ ಪಂದ್ಯಾವಳಿ ಆಯೋಜನೆ : ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆಯ ಆವರಣದಲ್ಲಿ ಮೈಸೂರು ಅರಮನೆ ಮತ್ತು ರಾಜ ಮನೆತನಗಳ ಇತಿಹಾಸ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಬೊಂಬೆಗಳ ಪ್ರದರ್ಶನ, ಅರಮನೆಯ ವರಾಹ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ವೀಕ್ಷಕರ ಗಮನ ಸೆಳೆದವು.
ರಸಸಂಜೆ ಕಾರ್ಯಕ್ರಮಕ್ಕೆ ಮನಸೋತ ವೀಕ್ಷಕರು : ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ ಮಧುಬಾಲಕೃಷ್ಣನ್ ಮತ್ತು ತಂಡದವರಿಂದ ಆಯೋಜಿಸಲಾಗಿದ್ದ "ಸಂಗೀತ ರಸಸಂಜೆ" ಕಾರ್ಯಕ್ರಮವು ನೆರೆದಿದ್ದಂತಹ ಸಾವಿರಾರು ವೀಕ್ಷಕರನ್ನು ತನ್ನತ್ತ ಸೆಳೆದು ಮಧುರ ಸಂಗೀತಕ್ಕೆ ಮನಸೋಲುವಂತೆ ಮಾಡಿತು.
ಫಲಪುಷ್ಪ ಪ್ರದರ್ಶನ ಹಾಗೂ ಅರಮನೆ ದೀಪಾಲಂಕಾರವು ಡಿಸೆಂಬರ್ 21 ರಿಂದ 31ರ ವರೆಗೆ ನಡೆಯಲಿದೆ. ಆಗಮಿಸುವ ವೀಕ್ಷಕರಿಗೆ ಪ್ರವೇಶ ದರವನ್ನು ನಿಗದಿ ಪಡಿಸಿದ್ದು, ವಯಸ್ಕರಿಗೆ ಮತ್ತು ವಿದೇಶಿ ಪ್ರವಾಸಿಗರಿಗೆ 30 ರೂ. 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 20 ರೂ. ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಫಲಪುಷ್ಪ ಪ್ರದರ್ಶನವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ಅರಮನೆ ವಿದ್ಯುತ್ ದೀಪಾಲಂಕಾರವು ಸಂಜೆ 7 ರಿಂದ 9ರ ವರೆಗೆ ಇರಲಿದೆ.
ಈ ಸಂದರ್ಭದಲ್ಲಿ 2025ನೇ ಸಾಲಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಟಿ. ಎಸ್. ಶ್ರೀವತ್ಸ, ಜಿ. ಟಿ ದೇವೇಗೌಡ, ಕೆ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಸಿ. ಎನ್. ಮಂಜೇಗೌಡ, ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಎಂ ಗಾಯತ್ರಿ, ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಹಾಗೂ ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಟಿ. ಎಸ್ ಸುಬ್ರಮಣ್ಯ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು ಇದ್ದರು.
ರಸ ಮಂಜರಿ ಕಾರ್ಯಕ್ರಮ : ಡಿ. 21 ರಿಂದ ಡಿ. 31ರ ವರೆಗೆ ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಅರಮನೆ ದೀಪಾಲಂಕಾರ ಜತೆಗೆ ಸಂಜೆ ರಸ ಮಂಜರಿ ಕಾರ್ಯಕ್ರಮಗಳು ಸಹ ಜರುಗಲಿವೆ.
ಇದನ್ನೂ ಓದಿ : ದಸರಾ ಫಲಪುಷ್ಪ ಪ್ರದರ್ಶನ: ಗಮನ ಸೆಳೆಯುತ್ತಿದೆ ಪಂಚ ಗ್ಯಾರಂಟಿ - DASARA FLOWER SHOW