ಗದಗ: ಲೋಕಸಭಾ ಚುನಾವಣೆಯ ಮತದಾನದ ಮಹತ್ವ ಸಾರುವ ಉದ್ದೇಶದಿಂದ ರೋಣ ತಾಲೂಕು ಪಂಚಾಯ್ತಿ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ ಅವರ ಮದುವೆ ಸಮಾರಂಭದಲ್ಲಿ ರೋಣ ತಾಪಂ ಕಾರ್ಯನಿರ್ವಾಹಕ ಎಸ್.ಕೆ. ಇನಾಮದಾರ ಅವರ ಅಧ್ಯಕ್ಷತೆಯಲ್ಲಿ ವಿಶಿಷ್ಟ ರೀತಿಯಲ್ಲಿ ಮತದಾನ ಜಾಗೃತಿ ಮಾಡಲಾಯಿತು.

ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ವಿರಪ್ಪ ಹಾಗೂ ಶಿವಪ್ಪ ಸೂಡಿ ಅವರ ಮಕ್ಕಳಾದ ಪ್ರಕಾಶ ಹಾಗೂ ಪ್ರವೀಣ ಅವರ ಮದುವೆಯಲ್ಲಿ ಮತದಾನ ಜಾಗೃತಿ ಕುರಿತು ಸಾಮಾಜಿಕವಾಗಿ ಏನಾದರೂ ವಿಶೇಷ ಕಾರ್ಯಕ್ರಮ ಮಾಡಬೇಕೆಂದು ಕೊಂಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ನಮ್ಮ ಹಕ್ಕು ಪ್ರತಿಯೊಬ್ಬರೂ ತಪ್ಪದೇ ಚಲಾಯಿಸಬೇಕು ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಧು - ವರ ತಮ್ಮ ವಿವಾಹಕ್ಕೆ ಬಂದ ಅತಿಥಿಗಳಿಗೆ ಮತದಾನ ಮಾಡುವಂತೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ರೋಣ ತಾಲೂಕ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಕೆ ಇನಾಮದಾರ ಮಾತನಾಡಿ, ''ಮತದಾನ ಪ್ರತಿ ಅರ್ಹ ವ್ಯಕ್ತಿಯ ಕರ್ತವ್ಯವಾಗಿದೆ. ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು. ಮತದಾನ ಎಂಬುದು ಸಂವಿಧಾನ ನಮಗೆ ಕೊಟ್ಟ ಪರಮೋಚ್ಚ ಅಧಿಕಾರವಾಗಿದೆ. ಇದನ್ನು ಸರಿಯಾಗಿ ಬಳಸಿಕೊಂಡು ಯೋಗ್ಯ ವ್ಯಕ್ತಿಯನ್ನು ಚುನಾಯಿಸಬೇಕು. ಯಾವಾಗ ಯೋಗ್ಯ ವ್ಯಕ್ತಿಯ ಪರವಾಗಿ ನಾವು ಮತ ಚುನಾಯಿಸುತ್ತೆವೋ ಆವಾಗ ನಮ್ಮ ಹಾಗೂ ದೇಶದ ಭದ್ರತೆ ಮತ್ತು ನಮ್ಮ ಜನರ ಜೀವನ ಚೆನ್ನಾಗಿ ನಡೆಯುತ್ತದೆ'' ಎಂದ ಅವರು, ಅರ್ಹ ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗದೇ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮತದಾನದ ದಿನ ರಜೆ ಮೇಲೆ ಊರಿಗೆ ತೆರಳದೇ ಮತದಾನ ಮಾಡಬೇಕು ಎಂದು ಮದುವೆಗೆ ಬಂದ ಅಥಿತಿಗಳಿಗೆ ಜಾಗೃತಿ ಮೂಡಿಸಿದರು.

''ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಅಮೂಲ್ಯ ಘಳಿಗೆ, ನನ್ನ ಮಗ ತಾಲೂಕು ಪಂಚಾಯ್ತಿಯಲ್ಲಿ ಕೆಲಸ ಮಾಡುವ ಕಾರಣ ಮತದಾನ ಜಾಗೃತಿ ಮಾಡೋಣ ಅಂತಾ ಮನೆಯಲ್ಲಿ ಚರ್ಚೆ ಮಾಡಿದ, ಹಾಗಾಗಿ ನಾವು ಸುಮಾರು 3,000ಕ್ಕೂ ಹೆಚ್ಚು ಜನರ ನಡುವೆ ಮತದಾನ ಜಾಗೃತಿ ಕೈಗೊಂಡೆವು ಇದೊಂದು ಸಾಮಾಜಿಕ ಜಾಗೃತಿ ನಿಜವಾಗಿಯೂ ನಮ್ಮ ಕುಟುಂಬಕ್ಕೆ ಖುಷಿ ತಂದಿದೆ'' ಎಂದು ವರನ ತಂದೆ ಶಿವಪ್ಪ ಸೂಡಿ ತಿಳಿಸಿದರು.
''ನಾನು ನಮ್ಮ ತಾಲೂಕಿನ ಸ್ವಿಪ್ ಸಮಿತಿ ಅಧ್ಯಕ್ಷ. ತಾಲೂಕಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಮಾಡುತ್ತೇವೆ. ನಮ್ಮ ಟಿ.ಸಿ. ಪ್ರವೀಣ ಫೋನ್ ಮಾಡಿ ನಮ್ಮ ಮದುವೆ ಯಲ್ಲಿ ಮತದಾನ ಜಾಗೃತಿ ಮಾಡೋಣ ಅಂತಾ ಹೇಳಿದ್ದರು. ಅದಕ್ಕೆ ಸಮ್ಮತಿ ನೀಡಿದೆ, ಮದುವೆ ಕಾರ್ಯಕ್ರಮದಲ್ಲಿ ಮೂರು ಸಾವಿರ ಜನರ ಸಮ್ಮುಖದಲ್ಲಿ ಮತದಾನ ಜಾಗೃತಿ ಮಾಡಿರುವುದು ಸಂತಸ ತಂದಿದೆ ಎಂದು ರೋಣ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ತಿಳಿಸಿದರು.
ಮದುವೆ ಸಮಾರಂಭದಲ್ಲಿ ಮತದಾನದ ಅರಿವು: ಮೈಸೂರು ಜಿಲ್ಲೆಯ ನಂಜನಗೂಡು ಮದುವೆ ಸಮಾರಂಭದಲ್ಲಿ ಮದುವೆ ಸಂಭ್ರಮದಲ್ಲಿರುವ ನವ ವಧು - ವರ ಮತದಾನ ಜಾಗೃತಿ ಮೂಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿ ಹೆಬ್ಯಾ ಗ್ರಾಮದ ತುಳಸಿ ಹಾಗೂ ಸೋಮೇಶ್ವರಪುರ ಗ್ರಾಮ ಗಿರೀಶ್ ಅವರು ಘೋಷವಾಕ್ಯದ ಫಲಕ ಹಿಡಿದು ಮತದಾರರ ಫೋಟೋ ಫ್ರೇಮ್ನಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ಮೂಲಕ ಏಪ್ರಿಲ್ 26 ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂಬ ಸಂದೇಶ ಸಾರಿದರು. ಈ ವಿಶೇಷ ಕ್ಷಣಕ್ಕೆ ವಿವಾಹ ವಧು - ವರರ ಸಂಬಂಧಿಕರು, ಸ್ನೇಹಿತರು ಸಾಕ್ಷಿಯಾದರು. ಸ್ವೀಪ್ ಸಮಿತಿಯ ವಿಭಿನ್ನ ಪ್ರಯತ್ನಕ್ಕೆ ನೆರೆದಿದ್ದವರಿಂದ ಪ್ರಶಂಸೆ ವ್ಯಕ್ತವಾಯಿತು.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗಳ ಹಂಚಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು - guarantee cards