ಆನೇಕಲ್ : 24 ಅಂಕಣ ಎತ್ತರದಲ್ಲಿ ಸಾಂಪ್ರದಾಯಿಕವಾಗಿ ಕಟ್ಟಲಾಗಿದ್ದ ಹುಸ್ಕೂರು ಮದ್ದೂರಮ್ಮ ದೇವಿಯ ತೇರು ನಿಯಂತ್ರಣ ಕಳೆದುಕೊಂಡು (ಕುರುಜು) ನೆಲಕಚ್ಚಿದೆ. ಆನೇಕಲ್ನ ಹೀಲಲಿಗೆ ಗ್ರಾಮದಲ್ಲಿ ಘಟನೆ ನಡೆದಿದ್ದು, ವಾರದಿಂದಲೇ ಹೀಲಲಿಗೆ ಗ್ರಾಮಸ್ಥರು ಪ್ರತಿಷ್ಠೆಗಾಗಿ ತೇರನ್ನು ಕಟ್ಟಿದರು. ಆದರೆ ಒಮ್ಮೆಲೇ ತೇರು ನೆಲಕ್ಕುರುಳಿರುವುದು ಜನರ ಆಸೆಗೆ ತಣ್ಣೀರೆರಚಿದಂತಾಗಿದೆ.
ಹೀಲಲಿಗೆ ಗ್ರಾಮದ ಸುತ್ತಲೂ ಹೊಸದಾಗಿ ಸ್ಯಾನಿಟರಿ ಲೈನ್, ಕಾಲುವೆ ಕಾಮಗಾರಿಗಳು ನಡೆಯುತ್ತಿವೆ. ಕಲಗಲಿನ ರಥದ ಚಕ್ರ ಪಿಟ್ ಮುಚ್ಚಳದ ಮೇಲೆ ಬಲಕ್ಕೆ ಹರಿದರಿಂದ ನಿಯಂತ್ರಣ ಕಳೆದುಕೊಂಡಿದೆ. ಬಳಿಕ ತೂಕಕ್ಕೇ ಕುರುಜು ನೆಲಕ್ಕೆ ಅಪ್ಪಳಿಸಿದೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದರೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಲ್ಲದೆ, ಯಾರೊಬ್ಬರಿಗೂ ಸಣ್ಣ ಗಾಯಗಳಾಗದೆ ಇರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಬಾರಿ ಒಟ್ಟು ಏಳು ಕುರುಜುಗಳನ್ನು ಕಟ್ಟಲಾಗಿದೆ. ಹೊಸದಾಗಿ ಹೈಟೆನ್ಷನ್ ರೈಲ್ವೆ ಲೈನ್ ಅಳವಡಿಸಿದ ಕಾರಣಕ್ಕೆ ಕೊಡತಿ-ಸೂಲಕುಂಟೆ ಕುರುಜುಗಳಷ್ಟೇ ಚಿಂತಲಮಡಿವಾಳದ ರೈಲ್ವೆ ಹಳಿ ಬಳಿಗಷ್ಟೇ ಬರಲಿವೆ. ಉಳಿದಂತೆ ಚೊಕ್ಕಸಂದ್ರ, ಹಾರೋಹಳ್ಳಿ, ಕಗ್ಗಲೀಪುರ, ನಾರಾಯಣಘಟ್ಟ ಮತ್ತು ರಾಮಸಾಗರ ಕುರುಜುಗಳು ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಕಟ್ಟಲಿಲ್ಲ. ಕಳೆದ ಬಾರಿ ಹನ್ನೊಂದು ಕುರುಜುಗಳು ಮದ್ದೂರಮ್ಮ ದೇವಾಲಯದ ಸುತ್ತ ನಿಂತುಕೊಳ್ಳುತ್ತಿದ್ದವು. ಇದನ್ನು ಕಣ್ಣು ತುಂಬಿಕೊಳ್ಳಲು ಹೊರ ರಾಜ್ಯಗಳಿಂದಲೂ ಜನ ಸಾಗರ ಹರಿದು ಬರುತಿತ್ತು. ಆದರೆ ರೈಲ್ವೇ ಲೈನ್ ಕಾರಣಕ್ಕೆ ಐದು ಕುರುಜುಗಳು ಗೈರು ಹಾಜರಾಗಿವೆ.
ಉಳಿದಂತೆ ದೊಡ್ಡನಾಗಮಂಗಲ, ಹೀಲಲಿಗೆ, ಲಕ್ಷ್ಮಿನಾರಾಯಣಪುರ, ರಾಯಸಂದ್ರ, ಸಿಂಗೇನಗ್ರಹಾರ ಮತ್ತು ಕೊಡತಿ, ಸೂಲಕುಂಟೆ ಕುರುಜುಗಳು ಸೇರಿ ಏಳು ಕುರುಜುಗಳು ಬರಲಿವೆ. ಇದರಲ್ಲಿ ಇದೀಗ ಹೀಲಲಿಗೆ ನೆಲಕ್ಕೆ ಕುಸಿದಿದ್ದರಿಂದ ಆರು ಕುರುಜುಗಳು ಸೆಟ್ಟೇರಿ ಹುಸ್ಕೂರಿನತ್ತ ತೆರಳಿವೆ. ಮೊನ್ನೆಯಿಂದ ಅದ್ದೂರಿಯಾಗಿ ನಡೆಯುತ್ತಿರುವ ಹುಸ್ಕೂರು ಮದ್ದೂರಮ್ಮ ಜಾತ್ರೆ ವಿಶೇಷ ಆಕರ್ಷಣೆಯಾಗಿ ಕುರುಜಗಳೇ ಆಗಿದ್ದು, ಊರಿನವರು ದೇವಿಯ ಹರಕೆ ತೀರಿಸಲು ಪ್ರತಿಷ್ಠೆಯನ್ನೇ ಪಣವಾಗಿಟ್ಟು ಕಟ್ಟುವ ಪದ್ಧತಿ ರೂಢಿಯಲ್ಲಿದೆ.
ಇದನ್ನೂ ಓದಿ : ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಬ್ರಹ್ಮರಥೋತ್ಸವ; ಹಂಬಿನಿಂದ ತೇರು ಎಳೆದ ಭಕ್ತರು - Himavad Gopalaswamy Hills