ತುಮಕೂರು: "ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ನೋಟಿಸ್ ಕೊಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಲು ರಾಜಣ್ಣನವರು ನಮ್ಮ ಪಕ್ಷದವರಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ತುಮಕೂರು ಜಿಲ್ಲೆ ಬೆಳ್ಳಾವಿಯ ಖಾರದ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಕೇಂದ್ರದ ಶಿಸ್ತು ಸಮಿತಿ ನೋಟಿಸ್ ಕೊಟ್ಟಿದೆ. 72 ಗಂಟೆಗಳ ಗಡುವು ಕೂಡ ಇತ್ತು. ನಮ್ಮ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ" ಎಂದು ನಕ್ಕು ಸುಮ್ಮನಾದರು.
ಮುಂದುವರೆದು, "20ನೇ ತಾರೀಖಿನೊಳಗೆ ಉತ್ತರ ಸಿಗುತ್ತೆ ಅಂತ ಅಂದೇ ಹೇಳಿದ್ದೇನೆ. ಜಿಲ್ಲಾಧ್ಯಕ್ಷರ ನೇಮಕ ಬಳಿಕ ದೆಹಲಿಯಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಯಾವಾಗ ಬೇಕಾದರೂ ಕೇಂದ್ರದ ವರಿಷ್ಠರು ರಾಜ್ಯಕ್ಕೆ ಬರಲಿದ್ದಾರೆ. ಎಲ್ಲಾ ಶಾಸಕರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಮಾಡುತ್ತಾರೆ" ಎಂದರು.
ಒಂಬತ್ತು ವಿ.ವಿಗಳ ಮುಚ್ಚುವ ನಿರ್ಧಾರ: "ಇದೊಂದು ದುರದೃಷ್ಟಕರ ವಿಚಾರ. ಬಿಜೆಪಿ ಸರ್ಕಾರದಲ್ಲಿ ಹೊಸ ವಿ.ವಿಗಳಾಗಿದ್ದು, 300 ರಿಂದ 400 ಕೋಟಿ ರೂ ಅನುದಾನ ನೀಡಬೇಕಾಗುತ್ತದೆ ಎಂದು ಅದನ್ನು ಮುಚ್ಚುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಅನುದಾನ ನೀಡಿದರೆ ವಿ.ವಿಗಳು ಕೆಲಸ ಮಾಡಲು ಸಾಧ್ಯ. ಈ ನಿರ್ಧಾರ ಕಾಂಗ್ರೆಸ್ ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ. ಇದರಿಂದ ಮಕ್ಕಳಿಗೆ ಅನಾನುಕೂಲವಾಗಲಿದೆ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ನಿರ್ಧಾರ ಬದಲಿಸಲಿ. ಗ್ಯಾರಂಟಿಗಳಿಂದ ಎಲ್ಲವೂ ಸಾಧ್ಯ ಆಗುತ್ತಿಲ್ಲ. ಎಲ್ಲದರ ಬೆಲೆ ಏರಿಕೆಗಳಾಗುತ್ತಿವೆ. ಅನುದಾನವನ್ನೂ ಕೂಡ ಕೊಡುತ್ತಿಲ್ಲ" ಎಂದು ಆರೋಪಿಸಿದರು.
"ನರೇಂದ್ರ ಮೋದಿಜಿಯವರು ದೇಶದ ಅಭಿವೃದ್ಧಿಯ ಕನಸು ಕಾಣುತ್ತ, ನಮ್ಮ ದೇಶದ ಯುವಜನತೆ ಮೇಲೆ ವಿಶ್ವಾಸವಿಟ್ಟಿದ್ದಾರೆ. ಅದಕ್ಕಾಗಿ ಅವರು ರಾತ್ರಿ ಹಗಲು ಶ್ರಮಿಸುತ್ತಿದ್ದಾರೆ. ನಮ್ಮ ದೇಶಕ್ಕೆ ಹಿಂದೆ ಅಮೆರಿಕ ಸೇರಿದಂತೆ ಮುಂದುವರಿದ ದೇಶಗಳು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿರಲಿಲ್ಲ. ಬೇರೆ ದೇಶಗಳಲ್ಲಿ ಭಾರತೀಯರನ್ನು ಭಿಕ್ಷುಕರಂತೆ ಕಾಣುತ್ತಿದ್ದರು. ಇಂದು ಭಾರತೀಯರು ಯಾವುದೇ ದೇಶಕ್ಕೆ ಹೋದರು ತಲೆಯೆತ್ತಿ ನಡೆಯುವಂತೆ ಆಗಿದೆ. ವಿದೇಶಗಳಲ್ಲಿ ಪ್ರತಿಯೊಬ್ಬರಿಗೂ ಗೌರವ ಸಿಗುತ್ತಿದೆ. ಇದಕ್ಕೆ ಕಾರಣ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು".
"ಇದೀಗ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಆಗಿದೆ. 19ನೇ ಶತಮಾನವನ್ನು ರಷ್ಯಾದ ಶತಮಾನ, 20ನೇ ಶತಮಾನವನ್ನು ಅಮೇರಿಕಾದ ಶತಮಾನ ಅಂತಿದ್ದರು. ಇದೀಗ 21ನೇ ಶತಮಾನವನ್ನು ಭಾರತದ ಶತಮಾನ ಎನ್ನುವಂತಾಗಿದೆ" ಎಂದು ಶ್ಲಾಘಿಸಿದರು.
"ಯಡಿಯೂರಪ್ಪ ಅವರಿಗೆ ತೊಂದ್ರೆಯಾದಾಗಲೆಲ್ಲ ಈ ನಾಡಿನ ಮಠಮಾನ್ಯಗಳು ಅವರಿಗೆ ಜೊತೆಯಾಗಿ ನಿಂತಿವೆ. ನಾನು ರಾಜಕಾರಣದಲ್ಲಿ ಈಗ ತಾನೇ ಬೆಳೆಯುತ್ತಿರುವವನು ಎಡವುವುದು ಸಹಜ. ನನ್ನ ರಾಜಕೀಯ ಗುರು ಯಾರಪ್ಪ ಅಂದರೆ ಯಡಿಯೂರಪ್ಪ. ಮೊದಲ ಬಾರಿ ಶಿಕಾರಿಪುರದ ಜನರ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ನಾನು ಕಳೆದ ಒಂದು ವರ್ಷದಲ್ಲಿ ಅನೇಕ ಪಾಠಗಳನ್ನು ಕಲಿತಿದ್ದೇನೆ. ನಾನು ರಾಜಕಾರಣದಲ್ಲಿ ಬೆಳೆಯಬೇಕಾದವನು" ಎಂದು ಹೇಳಿದರು.
ಇದನ್ನೂ ಓದಿ: ದಲಿತ ಮುಖ್ಯಮಂತ್ರಿ ಪ್ರಸ್ತಾಪ ಅನಾವಶ್ಯಕ : ಸಚಿವ ಕೆ.ಎನ್. ರಾಜಣ್ಣ
ಇದನ್ನೂ ಓದಿ: ನನ್ನ ಬಗ್ಗೆ ಯಾರು ಏನೇ ಮಾತಾಡಲಿ; ಬಿ.ಎಸ್.ವೈ ತೇಜೋವಧೆ ಸರಿಯಲ್ಲ : ಬಿ.ವೈ. ವಿಜಯೇಂದ್ರ