ಕೋಲಾರ: ಮದುವೆಯಾದ ದಿನವೇ ದಂಪತಿ ನಡುವೆ ಗಲಾಟೆಯಾಗಿ ಮೊದಲು ಪತ್ನಿ ಬಳಿಕ ಪತಿ ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಂಬರಸನಹಳ್ಳಿ ಮೂಲದ ನವೀನ್ ಹಾಗೂ ಆಂಧ್ರ ಬೈನಪಲ್ಲಿ ಗ್ರಾಮದ ಲಿಖಿತಶ್ರೀ ಮೃತ ದುರ್ದೈವಿಗಳು. ಮೃತರಿಬ್ಬರು ಕಳೆದ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಬುಧವಾರ ಬೆಳಗ್ಗೆ ತಮ್ಮ ಕುಟುಂಬದವರ ಮುಂದೆ ಹಸೆಮಣೆ ಏರಿದ್ದರು.
''ಇಬ್ಬರ ನಡುವಿನ ಗಲಾಟೆಯಲ್ಲಿ ಮಚ್ಚಿನಿಂದ ಹಲ್ಲೆಯಾದ ಕಾರಣ ಪತ್ನಿ ನಿನ್ನೆ ಸಾವನ್ನಪ್ಪಿದ್ದಳು. ಗಲಾಟೆ ಬಳಿಕ ಪತ್ನಿಗೆ ಮಚ್ಚಿನಿಂದ ಇರಿದು ಪತಿ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ'' ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪತಿ ಕೂಡ ಚಿಕೆತ್ಸೆಗೆ ಕರೆದೊಯ್ಯುವ ವೇಳೆ ಇಂದು ಮೃತಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ಮದುವೆ ಬಳಿಕ ಸಂಜೆ ವೇಳೆ ನವದಂಪತಿ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಇಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಸಂಬಂಧಿಕರ ಮನೆಯಲ್ಲೇ ಇಬ್ಬರೂ ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ.

''ವಧುವಿನ ತಂದೆಯ ಕಡೆಯಿಂದ ದೂರನ್ನು ತೆಗೆದುಕೊಂಡು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವರ ನವೀನ್ ಮಚ್ಚಿನಿಂದ ವಧುವಿನ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಎಲ್ಲರೂ ಬಾಗಿಲು ಮುರಿದು ಒಳಗೆ ಹೋದಾಗ ಆತನೂ ತನ್ನ ಮೇಲೆ ಹಲ್ಲೆ ಮಾಡಿಕೊಂಡಿದ್ದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ'' ಎಂದು ಎಸ್ಪಿ ಶಾಂತರಾಜು ಅವರು ಮಾಹಿತಿ ನೀಡಿದ್ದಾರೆ.
ತಮ್ಮ ಪ್ರೀತಿಗೆ ಪೋಷಕರ ವಿರೋಧವಿದ್ದರೂ ಎಲ್ಲರನ್ನು ಒಪ್ಪಿಸಿ ನಿನ್ನೆಯಷ್ಟೇ ಮದುವೆಯಾಗಿದ್ದ ದಂಪತಿ, ಅದೇ ದಿನ ಮೃತಪಟ್ಟಿದ್ದಾರೆ. ಆಂಡರಸನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಹಣ ನೀಡದ ಮಲತಾಯಿ ಕೊಂದ ಪುತ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ - Life Imprisonment