ಬೆಂಗಳೂರು: ಡೆಂಗ್ಯೂ ರೋಗ ಪೀಡಿತರು ಗುಣಮುಖರಾಗಲು ಕೇವಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದೇ ತಮ್ಮ ಕರ್ತ್ಯವ್ಯ ಎಂದು ಭಾವಿಸದೆ, ಈ ರೋಗ ಹರಡುವುದಕ್ಕೆ ಕಾರಣರಾಗುವ ವ್ಯಕ್ತಿಗಳು, ಸಂಘ ಸಂಸ್ಥೆಗಳು ಹಾಗೂ ವಸತಿ ಸಮುಚ್ಚಯಗಳಿಗೆ ಭಾರೀ ದಂಡಕ್ಕೆ ಗುರಿಪಡಿಸುವಂತಹ ನಿಯಮಗಳನ್ನು ಜಾರಿ ಮಾಡುವಂತಾಗಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಡೆಂಗ್ಯೂ ರೋಗ ಹೆಚ್ಚಾಗುತ್ತಿದ್ದಂತೆ ಮಾಧ್ಯಮಗಳ ವರದಿಯನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ನೀರು ದೀರ್ಘಕಾಲ ನಿಂತಲ್ಲೇ ನಿಲ್ಲುವಂತೆ ಮಾಡುವುದು, ಘನ ತ್ಯಾಜ್ಯ ತೆರವುಗೊಳಿಸದೇ ನಿರ್ಲಕ್ಷ್ಯ ವಹಿಸುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಲು ಕಾರಣರಾಗುವಂತೆ ಮಾಡುವ ಸಂಸ್ಥೆಗಳ ವಿರುದ್ಧ ಪಾಲಿಕೆ ಅಧಿಕಾರಿಗಳು ಸದಾಕಾಲ ಕಾರ್ಯಪ್ರವೃತ್ತರಾಗಿ ಅಂತಹವರ ವಿರುದ್ಧ ಭಾರೀ ಮಟ್ಟದ ದಂಡ ವಿಧಿಸುವಂತಾಗಬೇಕು ಎಂದು ಪೀಠ ತಿಳಿಸಿದೆ.
ಸಂವಿಧಾನದ ಪರಿಚ್ಚೇದ 21ರ ಪ್ರಕಾರ ಉತ್ತಮ ಆರೋಗ್ಯಕರ ವಾತಾವರಣ ಪಡೆಯುವುದು ಪ್ರತಿ ನಾಗರಿಕನ ಮೂಲಭೂತ ಹಕ್ಕಾಗಿದೆ. ನಾಗರಿಕರಿಗೆ ಆರೋಗ್ಯಕರ ಮತ್ತು ರೋಗ ಮುಕ್ತ ವಾತಾವರಣವನ್ನು ಒದಗಿಸುವುದು ಸರ್ಕಾರ ಮತ್ತು ಅಧಿಕಾರಿಗಳ ಶಾಸನ ಬದ್ಧ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ತಾಪಮಾನದಲ್ಲಿನ ಬದಲಾವಣೆ, ಮಳೆ, ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಲಿದೆ. ಇದು ಡೆಂಗ್ಯೂಗೆ ಕಾರಣವಾಗಬಹುದು ಎಂಬುದಾಗಿ 2004 ರಿಂದ 2015ರ ವರೆಗೂ ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರೋಲಜಿ(ಐಐಟಿಎಂ) ಸಂಶೋಧನಾ ವರದಿಯನ್ನು ಉಲ್ಲೇಖಿಸಿರುವ ಪೀಠ, ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಡಿಮೆ ಮಾಡಲು ಶ್ರಮಿಸಬೇಕಾಗಿದೆ ಎಂದು ಪೀಠ ಹೇಳಿದೆ.
ಅಲ್ಲದೆ, ಪತ್ರಿಕೆಗಳಲ್ಲಿ ಸಂಪಾದಕರಿಗೆ ಬರೆಯುವಂತಹ ಪತ್ರಗಳು ಸಮಾಜದ ನಾಡಿಮಿಡಿತವಾಗಿರಲಿದೆ. ಸಮಾಜದ ನಿಜವಾದ ಚಟುವಟಿಕೆಗಳನ್ನು ಪ್ರತಿಬಿಂಬಿಸುವ ಮಾಪಕವಾಗಿದೆ. ಸಂಪಾದಕರಿಗೆ ಬರೆಯುವ ಪತ್ರಗಳ ಸಾಮಾನ್ಯ ನಾಗರಿಕರು ವ್ಯಕ್ತಪಡಿಸುವ ಅಭಿಪ್ರಾಯಗಳು ಸತ್ಯ ಮತ್ತು ಮಹತ್ವದ್ದಾಗಿರುತ್ತವೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಜನನ ಪ್ರಮಾಣ ಪತ್ರದಲ್ಲಿನ ಹೆಸರು ಬದಲಾವಣೆ ಕುರಿತು ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ
ಇದನ್ನೂ ಓದಿ: ಮೃತ ಮಾವನಿಗೆ ಹೆಣ್ಣುಮಕ್ಕಳಿದ್ದರೂ ತನ್ನನ್ನು 'ಮನೆ ಅಳಿಯ'ನೆಂದು ಘೋಷಿಸಲು ಕೋರಿದ್ದ ಅರ್ಜಿ ವಜಾ