ಬೆಂಗಳೂರು: ನಗರದ ಹಿರಿಯ ವೃದ್ಧೆಯೊಬ್ಬರ ಕೋಟ್ಯಂತರ ರೂಪಾಯಿ ಹಾಗೂ ಭಾರಿ ಬೆಲೆಯ ಆಸ್ತಿಯನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ತನ್ನ ಸಿಬ್ಬಂದಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ, ಮೇಲ್ನೋಟಕ್ಕೆ ಆರೋಪಗಳಲ್ಲಿ ಹುರುಳಿದೆ ಎಂದು ಕಂಡುಬರುತ್ತಿದೆ. ಹಾಗಾಗಿ ತನಿಖೆ ಎದುರಿಸಲೇಬೇಕು ಎಂದು ಆದೇಶ ನೀಡಿದೆ.
47 ವರ್ಷದ ಹೈಕೋರ್ಟ್ ಸಿಬ್ಬಂದಿ ಎನ್.ವೆಂಕಟೇಶ್, ಆತನ ಪತ್ನಿ ಹಾಗೂ ಮಗ ಮತ್ತು ಸೊಸೆ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಸಿವಿಲ್ ವ್ಯಾಜ್ಯಕ್ಕೆ ಅಪರಾಧದ ಬಣ್ಣ ಹಚ್ಚಲಾಗಿದೆ ಎಂಬ ಅರ್ಜಿದಾರರ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಲಯ, ಇದು ಮೇಲ್ನೋಟಕ್ಕೆ ಸಿವಿಲ್ ವ್ಯಾಜ್ಯದಂತೆ ಕಂಡರೂ ಸಹ ದೂರಿನ ಆಳಕ್ಕೆ ಇಳಿದಾಗ ಅದರಲ್ಲಿ ಸ್ವಲ್ಪ ಸತ್ಯಾಂಶವಿದೆ ಎಂದು ಕಂಡುಬರುತ್ತದೆ. ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಪುಷ್ಠಿ ನೀಡುವ ವಿಚಾರಗಳಿವೆ ಎನಿಸುತ್ತದೆ. ಹಾಗಾಗಿ ತನಿಖೆಯನ್ನು ಎದುರಿಸಲಿ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಅರ್ಜಿದಾರರ ವಿರುದ್ಧ ವಿಶ್ವಾಸ ದ್ರೋಹ, ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಿವೆ. ಈ ಬಗ್ಗೆ ತನಿಖೆಯಿಂದ ಮಾತ್ರ ಸಂಪೂರ್ಣ ಸತ್ಯಾಂಶ ಹೊರ ಬೀಳಬೇಕಿದೆ. ಮೇಲ್ನೋಟಕ್ಕೆ ವ್ಯಾಜ್ಯ ಸಿವಿಲ್ ಸ್ವರೂಪದಂತೆ ಕಂಡು ಬಂದರೂ ಸಹ ಅದರಲ್ಲಿ ಬೇರೆ ಕ್ರಿಮಿನಲ್ ಅಂಶಗಳಿರುವುದರಿಂದ ತನಿಖೆ ಆಗಲೇಬೇಕಿದೆ ಎಂದು ನ್ಯಾಯಾಲಯ ಹೇಳಿದೆ.
2022ರ ಏಪ್ರಿಲ್ನಲ್ಲಿ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸುವ ಮೂಲಕ ನ್ಯಾಯಾಲಯ ತನಿಖೆಗೆ ಹಾದಿ ಸುಗುಮಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ನಿವಾಸಿ ವೈ.ಸಂಧ್ಯಾ ಅವರು ಆಗಾಗ ವಿವಿಪುರಂನ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಅಲ್ಲಿಗೆ ಆಗಮಿಸುತ್ತಿದ್ದ ಅರ್ಜಿದಾರರ ವೆಂಕಟೇಶ್ ಹಾಗೂ ಅವರ ಪತ್ನಿಗೆ ಮಹಿಳೆಯ ಪರಿಚಯವಾಯಿತು. ಕೆಲವೇ ದಿನಗಳಲ್ಲಿ ಇಬ್ಬರೂ ಸ್ವಲ್ಪ ಹತ್ತಿರವಾಗಿದ್ದರು. ವೆಂಕಟೇಶ್ ತಾನು ಹೈಕೋರ್ಟ್ ಸಿಬ್ಬಂದಿ ಎಂದು ಹೇಳಿಕೊಂಡು ಸಂಧ್ಯಾ ಅವರ ಬಳಿ 1.5 ಕೋಟಿ ರೂ. ಸಾಲ ಪಡೆದಿದ್ದರು. ಅವರು ಜಯಗರದಲ್ಲಿನ ತಮ್ಮ ಆಸ್ತಿಯನ್ನು ಅಡವಿಟ್ಟು ಆ ಹಣವನ್ನು ಹೊಂದಿಸಿ ವೆಂಕಟೇಶ್ಗೆ ಕೊಟ್ಟಿದ್ದರು. ಅಷ್ಟೇ ಅಲ್ಲದೆ, ವೆಂಕಟೇಶ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂಧ್ಯಾ ಅವರಿಗೆ ಸೇರಿದ ಜಯನಗರದಲ್ಲಿನ ಆಸ್ತಿಯನ್ನು ತಮ್ಮ ಹೆಸರಿಗೆ ಸೇಲ್ ಡೀಡ್ ಮಾಡಿಸಿಕೊಂಡಿದ್ದರು ಮತ್ತು ಕೊನೆಗೆ ಒಪ್ಪಿದ್ದಂತೆ 4.5 ಕೋಟಿ ರೂ. ಹಣವನ್ನು ಮರು ಪಾವತಿ ಮಾಡದೆ, ಆಸ್ತಿಯ ದಾಖಲೆಗಳನ್ನು ನೀಡದೇ ವಂಚನೆ ಎಸಗಿದ್ದಾರೆಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಇದನ್ನೂ ಓದಿ: ಜನನ ಪ್ರಮಾಣ ಪತ್ರದಲ್ಲಿನ ಹೆಸರು ಬದಲಾವಣೆ ಕುರಿತು ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ
ಇದನ್ನೂ ಓದಿ: ನಿಗಮ, ಮಂಡಳಿಗಳ ಅಧ್ಯಕ್ಷರಾಗಿರುವ ಶಾಸಕರಿಗೂ ಸಂಪುಟ ದರ್ಜೆ ಸ್ಥಾನಮಾನ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ