ಬೆಳಗಾವಿ: ''ಭಾರತ ದೇಶದಲ್ಲಿ ಗುರುವಿನ ಮೇಲಿನ ಭಕ್ತಿ ಎಂದಿಗೂ ಕಡಿಮೆಯಾಗುವುದಿಲ್ಲ. ನಮ್ಮ ದೇಶದಲ್ಲಿ ಮಾತ್ರ ಗುರುಪರಂಪರೆ ಗುರುತಿಸಿ, ಗೌರವಿಸುವುದನ್ನು ಕಾಣಬಹುದು'' ಎಂದು ಜ್ಞಾನಪೀಠ ಪುರಸ್ಕೃತ, ನಾಡೋಜ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ಘಟಪ್ರಭಾ ಎಸ್ಡಿಟಿ ಪ್ರೌಢಶಾಲೆಯ 1995ರ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಹಾಗೂ ಹಳೆ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ''ಅನ್ನಕ್ಕೆ ದಾರಿ ದೀಪವಾದ ಗುರುಗಳನ್ನು ದೇವರೆಂದು ಭಾವಿಸುತ್ತೇವೆ. ದೇವರಿಗೆ ಸಮನಾದ ಗುರುಗಳನ್ನು 30 ವರ್ಷಗಳ ನಂತರವೂ ತಾವೆಲ್ಲರೂ ಸೇರಿ ನೆನಪಿಸಿಕೊಂಡು ಗೌರವಿಸುತ್ತಿರುವುದೇ ಈ ನೆಲದ, ನಾಡಿನ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ'' ಎಂದು ಹೇಳಿದರು.
![chandrashekhar kambara](https://etvbharatimages.akamaized.net/etvbharat/prod-images/25-11-2024/bgm-chandrashekhar-kambar-programme_25112024154714_2511f_1732529834_1092.jpg)
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಮಾತನಾಡಿ, ''ನಡೆದು ಬಂದ ಹಾದಿ ಮರೆತು ನಡೆಯುವುದು ಆದರ್ಶವಲ್ಲ. ಹಳೇಯ ವಿದ್ಯಾರ್ಥಿಗಳಿಗೆ ಶಾಲೆ, ಗುರುಗಳ ಮೇಲಿರುವ ಪ್ರೀತಿ ನಿಜಕ್ಕೂ ಶ್ಲಾಘನೀಯ'' ಎಂದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅರಭಾವಿ ಮಠದ ಶ್ರೀ ಗುರುಬಸವಲಿಂಗ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ''ಈ ಸಂಘದ ಮೂಲಕ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿ'' ಎಂದು ಹಾರೈಸಿದರು.
![TEACHER FELICITATION PROGRAM](https://etvbharatimages.akamaized.net/etvbharat/prod-images/25-11-2024/bgm-chandrashekhar-kambar-programme_25112024154714_2511f_1732529834_462.jpg)
ಸಂಘದ ಅಧ್ಯಕ್ಷ ಕೆ.ಎಸ್.ನಾಗರಾಜ್ ಮಾತನಾಡಿ, ''ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ತರಬೇತಿ ಹೀಗೆ ಹಲವಾರು ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಸಂಘವು ಯೋಜನೆ ರೂಪಿಸುತ್ತಿದೆ'' ಎಂದು ತಿಳಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ: ಇದೇ ವೇಳೆ, ಗಣ್ಯರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. 30 ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿರುವ ನಿವೃತ್ತ ಶಿಕ್ಷಕರು, ಉಪನ್ಯಾಸಕರನ್ನು ಸತ್ಕರಿಸಲಾಯಿತು. ಈ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಯಲ್ಲಿರುವ ಡಾ.ನಾಗರಾಜ್ ಚರಂತಿಮಠ, ವಿದ್ಯಾನಂದ ನಾಯಿಕ, ಭಾಗ್ಯಶ್ರೀ ಪಡೆಪ್ಪಗೋಳ ಅವರಿಗೆ 'ನಮ್ಮ ಎಸ್ ಡಿಟಿ ಹೈಸ್ಕೂಲ್ ರತ್ನ' ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಅರ್ಜುನ ಸಂಪಗಾರ, ಗೀತಾ ಬೆನವಾಡಿ, ಶೇಖರ ಬೇಟಗೇರಿ, ಕುಮಾರಯ್ಯ ಕರ್ಪೂರಮಠ, ವಿಜಯಕುಮಾರ್ ಬಡಕುಂದ್ರಿ, ಸಂಜೀವ ನಾಯಿಕ, ಸೋಮಶೇಖರ ಜಿನರಾಳೆ, ಪ್ರಕಾಶ ಮಟಗಾರ, ಜಯಪ್ರಕಾಶ್ ಕಾಡದವರ, ಸುವರ್ಣ ಗಾಡಿವಡ್ಡರ ನಿವೇದಿತಾ ಚರಂತಿಮಠ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಜೋಗದಲ್ಲಿ ಅಭಿವೃದ್ದಿ ಕಾಮಗಾರಿ ಶೇ 85ರಷ್ಟು ಪೂರ್ಣ; 2025ರ ನವೆಂಬರ್ಗೆ ಲೋಕಾರ್ಪಣೆ