ಬೆಳಗಾವಿ: "ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂದು ಸುವರ್ಣಸೌಧಕ್ಕೆ ಆಗಮಿಸಿದ್ದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಭೇಟಿಯಾಗಿ ಮಾತನಾಡಿದ ಅವರು, "ಗ್ಯಾರಂಟಿಗಳಿಂದ ಬಡವರು, ಮಧ್ಯಮ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಅನುಕೂಲ ಆಗ್ತಿದೆ. ಗ್ಯಾರಂಟಿಗಳ ಅನುಕೂಲ ಪಡೆದ ಮಹಿಳೆಯರು ಇವತ್ತು ನನ್ನನ್ನು ಭೇಟಿಯಾಗಿದ್ದಾರೆ. ಮಹಿಳೆಯರಿಗೆ ತುಂಬಾ ಅನುಕೂಲ ಆಗಿದೆ" ಎಂದರು.
ವಕ್ಫ್ ವಿರುದ್ದ ಬಿಜೆಪಿ ಹೋರಾಟದ ವಿಚಾರವಾಗಿ ಮಾತನಾಡಿ, "ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಅವಕಾಶವಿದೆ. ಆದರೆ ದುರುದ್ದೇಶದಿಂದ ಹೋರಾಟ ಮಾಡಬಾರದು. ನಮ್ಮ ತಪ್ಪುಗಳಿದ್ರೆ ವಿಪಕ್ಷದವರು ಚರ್ಚಿಸಲಿ. ಅಭಿವೃದ್ದಿ ವಿಚಾರಗಳ ಬಗ್ಗೆ ಚರ್ಚೆ ಮಾಡಲಿ. ಎಐಸಿಸಿ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತೆ. ಅಡ್ಡಿಪಡಿಸೋಕೆ ಬಂದ್ರೆ ಕಾನೂನು ಕ್ರಮ ಕೈಗೊಳ್ತೀವಿ. ಯಾರೇ ಅಡ್ಡಿಪಡಿಸಿದ್ರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ" ಎಂದು ಎಚ್ಚರಿಕೆ ನೀಡಿದರು.
ವಕ್ಫ್ ಪ್ರಕರಣವನ್ನು ಸಿಬಿಐಗೆ ವಹಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಬಿಜೆಪಿ ಕಾಲದಲ್ಲಿ ಒಂದೇ ಒಂದು ಪ್ರಕರಣ ಸಿಬಿಐಗೆ ಕೊಟ್ಟರಾ?. ಯಾವ ನೈತಿಕತೆ ಇದೆ ನಮ್ಮನ್ನು ಪ್ರಶ್ನಿಸಲು?. ಬಿಜೆಪಿಯವರು ಅಪಪ್ರಚಾರ ಮಾಡ್ತಾರೆ" ಎಂದು ತಿರುಗೇಟು ಕೊಟ್ಟರು.
ಇದಕ್ಕೂ ಮುನ್ನ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸುವರ್ಣಸೌಧದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಭೇಟಿ ಮಾಡಿದ ಅವರು, ಸಿಎಂಗೆ ಕೃತಜ್ಞತೆ ಸಲ್ಲಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಶಾಸಕ ವಿನಯ್ ಕುಲಕರ್ಣಿ ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಪಕ್ಷಗಳ ಟೀಕೆಯಿಂದ ಗ್ಯಾರಂಟಿ ಯೋಜನೆಗಳು ಪ್ರಚಾರ ಕಳೆದುಕೊಳ್ತಿವೆ: ಟಿ.ಬಿ.ಜಯಚಂದ್ರ