ಬಳ್ಳಾರಿ: ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ಮೂರು ತಿಂಗಳು ಜೈಲುವಾಸ ಅನುಭವಿಸಿದ ಬಳಿಕ ಇಂದು ಬಳ್ಳಾರಿಗೆ ಆಗಮಿಸಿದ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ಎಸ್ಪಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಶಾಸಕ ಭರತ್ ರೆಡ್ಡಿ ಅವರೊಂದಿಗೆ ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಆ ಬಳಿಕ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಡ್ಯಾನ್ಸ್ ಮಾಡಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ನಾಗೇಂದ್ರ, "ವಾಲ್ಮೀಕಿ ಸಮುದಾಯದ ಮಗನಾಗಿ ವಾಲ್ಮೀಕಿ ಜಯಂತಿಯಂದು ವಾಲ್ಮೀಕಿ ಹಗರಣ ಎನ್ನುವ ಶಬ್ದ ಬಳಸಿ ಮಾತಾಡೋಕೆ ಬೇಸರವಾಗ್ತಿದೆ. ನಾವು ಯಾವುದೇ ಹಗರಣ ಮಾಡಿಲ್ಲ. ಇದೆಲ್ಲವೂ ಬಿಜೆಪಿ ಕುತಂತ್ರ. ಸಿಬಿಐ, ಇ.ಡಿ. ಬಳಸಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಿಂದ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಈ ಪ್ರಕರಣದಿಂದ ಶೀಘ್ರದಲ್ಲೇ ಆರೋಪ ಮುಕ್ತನಾಗುವೆ" ಎಂದರು.
ಇದೇ ವೇಳೆ ಜನಾರ್ದನ ರೆಡ್ಡಿಗೆ ಎದುರೇಟು ನೀಡಿ, "ಜನಾರ್ದನ ರೆಡ್ಡಿ ಇ.ಡಿ., ಸಿಬಿಐ ಭಯದಿಂದ ಬಿಜೆಪಿ ಸೇರಿದ್ದಾರೆ. ಅವರು ಕೆಆರ್ಪಿಪಿ ಪಕ್ಷ ಕಟ್ಟಿದಾಗ ಬಿಜೆಪಿ ವಿರುದ್ದ ಸಾಕಷ್ಟು ಆರೋಪಗಳನ್ನು ಮಾಡಿದ್ದರು" ಎಂದು ಹೇಳಿದರು.
"ರೆಡ್ಡಿ ಸಂಡೂರಿನಲ್ಲಿ ಮನೆ ಅಲ್ಲ ಅರಮನೆ ಮಾಡಿದ್ರೂ ಕಾಂಗ್ರೆಸ್ ಗೆಲುವು ಫಿಕ್ಸ್. ಅವರು ಬಳ್ಳಾರಿಗೆ ಬಂದಿರೋದು ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ" ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಭೇಟಿಯಾದ ಬಿ.ನಾಗೇಂದ್ರ; ಇ.ಡಿ. ತನಿಖೆ, ಒತ್ತಡದ ಬಗ್ಗೆ ಸಮಾಲೋಚನೆ