ಬೆಂಗಳೂರು: ಮಖಾನ ಬೆಳೆ ಹಾಗೂ ಅದರಿಂದ ತಯಾರಿಸುವ ತಿನಿಸನ್ನು ರಾಜ್ಯ, ದೇಶ ಹಾಗೂ ವಿದೇಶಗಳಲ್ಲೂ ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮಖಾನ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಿಳಿಸಿದರು.
ಅರಮನೆ ಮೈದಾನದ ಕಿಂಗ್ಸ್ಕೋರ್ಟ್ನಲ್ಲಿ ಬಿಹಾರ ಸರ್ಕಾರ ಹಾಗೂ ಭಾರತೀಯ ವಾಣಿಜ್ಯ ಮಂಡಳಿ ಸಹಯೋಗದಲ್ಲಿ 2 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಮಖಾನ ಮಹೋತ್ಸವದಲ್ಲಿ ಅವರು ಮಾತನಾಡಿದರು. ದೇಶದ ಶೇ.80 ರಷ್ಟು ಮಖಾನ ಬಿಹಾರದಲ್ಲಿ ಬೆಳೆಯಲಾಗುತ್ತದೆ. ಈ ಬೆಳೆ ಅಲ್ಲಿನ ರೈತರಿಗೆ ಮಾರುಕಟ್ಟೆ ಕಲ್ಪಿಸುತ್ತದೆ. ಬಿಹಾರ ಸರ್ಕಾರ ಮಖಾನ ಬೆಳೆಗಾರರಿಗೆ ಶೇ.75ರ ಸಬ್ಸಿಡಿ ಸಹ ನೀಡುತ್ತಿದೆ. ಇದರಲ್ಲಿ ಹೆಚ್ಚು ನಾರು ಹಾಗೂ ಪ್ರೋಟಿನ್ ಅಂಶವಿರುವುದರಿಂದ ತಿನಿಸು, ಸಿರಿಧಾನ್ಯ, ಖೀರು ಅಥವಾ ಇನ್ನಾವುದೇ ರೂಪದಲ್ಲಿ ತಯಾರಿಸಿ ಸೇವಿಸಬಹುದು. ಮಖಾನ ಲಾಭಗಳ ಕುರಿತು ಸಂಶೋಧನೆ ಸಹ ನಡೆಯುತ್ತಿದೆ. ಜನರು ಇದರ ಬಗ್ಗೆ ಹೆಚ್ಚು ಒಲವು ತೋರಿಸಿ, ಇದರ ತಿನಿಸುಗಳನ್ನು ಸೇವಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಹಾರದ ಕೃಷಿ ಸಚಿವ ಮಂಗಲ್ ಪಾಂಡೆ ಮಾತನಾಡಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಖಾನ ಬೀಜ, ಬೆಳೆ, ತಿನಿಸು ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಈ ಖಾದ್ಯದ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಲು ಮಖಾನ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮಖಾನ ತಿನ್ನುವುದರಿಂದ ದೇಹಕ್ಕೆ ಪೋಷಕಾಂಶ ಸಿಗುವುದರ ಜೊತೆಗೆ ಕ್ಯಾನ್ಯರ್ ರೋಗ ಸಹ ತಡೆಯಬಹುದಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದರ ಬೆಲೆ ಮೂರು ಪಟ್ಟು ಏರಿಕೆಯಾಗಿದೆ. ಪ್ರಸ್ತುತ ಇದು ಕೆಜಿಗೆ 1800 ರಿಂದ 2000 ರೂಪಾಯಿಯವರೆಗೆ ಮಾರಾಟವಾಗುತ್ತಿದೆ. ಇದರ ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ ಮಖಾನವನ್ನು ಎಲ್ಲೆಡೆ ಪ್ರಚುರ ಪಡೆಸುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಮಖಾನ ಬೀಜ, ಇದರ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಮಖಾನ ಕುರಿತು 2.4 ಕೋಟಿಯ ಪ್ರಥಮ ಒಡಂಬಡಿಕೆ ಸಹ ಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬಿಹಾರದ ಕೃಷಿ ಇಲಾಖೆ ಕಾರ್ಯದರ್ಶಿ ಸಂಜಯ್ ಕುಮಾರ್ ಅಗರ್ವಾಲ್, ತೋಟಗಾರಿಕೆ ನಿರ್ದೇಶಕ ಅಭಿಷೇಕ್ ಕುಮಾರ್, ರಿಪಬ್ಲಿಕ್ ಆಫ್ ಅರ್ಮೇನಿಯಾದ ಕೌನ್ಸಿಲ್ ಜನರಲ್ ಶಿವಕುಮಾರ್ ಈಶ್ವರನ್, ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಕುಮಾರ್ ರವಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಯಶಸ್ವಿನಿ ಯೋಜನೆಗೆ ಆದಾಯ ಮಿತಿಗೊಳಿಸಿದ ಸರ್ಕಾರ; ನೋಂದಣಿಗೆ ಡಿ.31ರವರೆಗೆ ಅವಕಾಶ