ಚಿಕ್ಕಮಗಳೂರು : ಅಯೋಧ್ಯೆಯ ಬಾಲರಾಮನಿಗೆ ಭಕ್ತರೊಬ್ಬರು ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನು ನೀಡುವ ಮೂಲಕ ಭಕ್ತಿ ಸಮರ್ಪಿಸಿದ್ದಾರೆ. ಬೆಳ್ಳಿಯ ಬಿಲ್ಲು-ಬಾಣವನ್ನ ಮಾಡಿಸಿದ ಆಂಧ್ರಪ್ರದೇಶ ಮೂಲದ ಬೆಂಗಳೂರು ನಿವಾಸಿಯೊಬ್ಬರು ಅದನ್ನು ಶೃಂಗೇರಿ ಶಾರದಾ ಮಠಕ್ಕೆ ತಂದು ಪೂಜೆ ಮಾಡಿಸಿದ್ದಾರೆ.
ಬಾಲರಾಮನ ಬೆಳ್ಳಿಯ ಬಿಲ್ಲು ಹಾಗೂ ಬಾಣಕ್ಕೆ ಶೃಂಗೇರಿ ಮಠದ ಹಿರಿಯ ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮಿಯವರು ಪೂಜೆ ಸಲ್ಲಿಸಿದ್ದಾರೆ. ಶೃಂಗೇರಿ ಮಠದ ಕಿರಿಯ ಗುರುಗಳಾದ ವಿಧುಶೇಖರ ಶ್ರೀಗಳು ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನ ಕೈನಲ್ಲಿ ಹಿಡಿದು ನೋಡಿದ್ದಾರೆ.
ನೋಡಲು ಅತ್ಯಂತ ಸುಂದರ ಹಾಗೂ ಮನಮೋಹಕವಾಗಿರುವ ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನ ಆಂಧ್ರಪ್ರದೇಶ ಮೂಲದ ರಾಮನ ಭಕ್ತರಾದಂತಹ ಚಲ್ಲಾ ಶ್ರೀನಿವಾಸ್ ಎಂಬ ಭಕ್ತರು ಅಯೋಧ್ಯೆಯ ರಾಮನಿಗೆ ಭಕ್ತಿ ಪೂರ್ವಕವಾಗಿ ನೀಡಿದ್ದಾರೆ. ಜನವರಿ 22ರಂದು ಅಯೋಧ್ಯೆಯ ರಾಮನ ಪ್ರಾಣಪ್ರತಿಷ್ಠಾಪನೆ ದಿನ. ಆಗ ಶೃಂಗೇರಿಯ ಋತ್ವಿಜರು ಹಾಗೂ ಪುರೋಹಿತರು ಕೂಡ ಅಯೋಧ್ಯೆಯ ಧಾರ್ಮಿಕ ಕಾರ್ಯಕ್ರಮ ಹಾಗೂ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡಿದ್ದರು.
ಅಯೋಧ್ಯೆ ರಾಮನ ಜಲಾಭಿಷೇಕಕ್ಕೆಂದು ಶೃಂಗೇರಿ ಶಾರದಾಂಬೆ ನೆಲೆಸಿರೋ ತುಂಗಾ ನದಿಯಿಂದಲೂ ಜಲವನ್ನ ಕೊಂಡೊಯ್ದಿದ್ದರು. ತುಂಗಾ ನದಿ ಜೊತೆ ಜಿಲ್ಲೆಯ ಭದ್ರಾ ಹಾಗೂ ಹೇಮಾವತಿ ನದಿಯಿಂದಲೂ ಜಲವನ್ನ ಕೊಂಡೊಯ್ದಿದ್ದರು. ಇದರ ಮಧ್ಯೆ ಅಯೋಧ್ಯೆಯ ಶ್ರೀರಾಮನಿಗೂ ಶೃಂಗೇರಿಗೂ ಅವಿನಾಭಾವ ಸಂಬಂಧವಿದೆ. ಶ್ರೀರಾಮನ ಸಹೋದರಿ ಶಾಂತ ಅವರ ದೇಗುಲವಿರುವ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ದೇಗುಲದಿಂದಲೂ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿನ ರಾಮನ ಪೂಜೆಗಾಗಿ ಪಂಚೆ, ಶಲ್ಯ, ಸೀರೆ, ಅರಿಶಿನ-ಕುಂಕುಮ ಸೇರಿದಂತೆ ವಿವಿಧ ಧಾರ್ಮಿಕ ವಸ್ತುಗಳನ್ನ ಕೊಂಡೊಯ್ದಿದ್ದರು.
ಮಳೆ ದೇವರು ಎಂದೇ ಖ್ಯಾತಿಯಾಗಿರೋ ಕಿಗ್ಗಾದ ಶಾಂತಾ ಸಮೇತ ಋಷ್ಯಶೃಂಗೇಶ್ವರರು ಅಯೋಧ್ಯೆಯ ಶ್ರೀರಾಮನ ಅಕ್ಕ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇಂದು ಭಕ್ತರೊಬ್ಬರು ಅಯೋಧ್ಯ ಶ್ರೀರಾಮನಿಗೆ ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನ ಮಾಡಿಸಿ, ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಪೂಜೆ ಸಲ್ಲಿಸಿ ಅಯೋಧ್ಯೆಗೆ ತಲುಪಿಸಿದ್ದಾರೆ.
ಇದನ್ನೂ ಓದಿ : ದೇವ್ರಹಾ ಬಾಬಾ ಆಶ್ರಮದಿಂದ ಬಾಲರಾಮನಿಗೆ 1 ಲಕ್ಷ 11 ಸಾವಿರ ಟಿಫಿನ್ ಬಾಕ್ಸ್ನಲ್ಲಿ ಲಡ್ಡುಗಳ ರವಾನೆ - Laddus Sent To Ayodhya