ದಾವಣಗೆರೆ: ನಕಲಿ ನೋಟುಗಳನ್ನು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ದಾವಣಗೆರೆ ಪೊಲೀಸರು, ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 200 ಹಾಗೂ 500 ಮುಖಬೆಲೆಯ ಒಟ್ಟು 7.70 ಲಕ್ಷ ಮೊತ್ತದ ನಕಲಿ ನೋಟು ಹಾಗೂ 43,000 ಮೌಲ್ಯದ ಅಸಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಯ ಹರೀಶ್ (29), ತಳವಾರ ಕುಬೇರಪ್ಪ (58) ಹಾಗೂ ಮೈಸೂರು ಜಿಲ್ಲೆಯ ಸಂದೀಪ್(30), ಮನೋಜ್ ಗೌಡ (21), ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜೆ.ರುದ್ರೇಶ (39), ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೃಷ್ಣನಾಯ್ಕ (28) ಬಂಧಿತರು.
ಎಸ್ಪಿ ಉಮಾ ಪ್ರಶಾಂತ್ ಹೇಳಿದಿಷ್ಟು: ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಉಮಾ ಪ್ರಶಾಂತ್, "ನಕಲಿ ನೋಟುಗಳ ಜಾಲದಿಂದ ಬೇಸತ್ತಿದ್ದ ದಾವಣಗೆರೆ ಖಾಕಿ ಪಡೆ, ವಿಶೇಷ ತಂಡವನ್ನು ರಚಿಸಿ, ಕಾರ್ಯಾಚರಣೆ ಪ್ರಾರಂಭಿಸಿತ್ತು. ಜ. 17ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಕೂಗಳತೆ ದೂರದಲ್ಲಿ ನಕಲಿ ನೋಟುಗಳ ಚಲಾವಣೆ ಆಗುತ್ತಿರುವ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿದ್ದ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳಾದ ಹರೀಶ್ ಹಾಗೂ ಕುಬೇರಪ್ಪನನ್ನು ಬಂಧಿಸಿದ್ದರು. ಆಗ ಆರೋಪಿಗಳ ಬಳಿ ಇದ್ದ 500 ರೂ ಮುಖಬೆಲೆಯ ಒಟ್ಟು 37,000 ರೂ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು." ಎಂದು ಹೇಳಿದರು.
"ಹರಿಹರ ಗ್ರಾಮಾಂತರ ಠಾಣೆಯ ಪಿಐ ಸುರೇಶ್ ಸಗರಿ ಹಾಗು ಪಿಐ ಅರವಿಂದ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಅವರು ನೀಡಿದ ಮಾಹಿತಿ ಆಧಾರದಲ್ಲಿ ನಂತರ ಮತ್ತೆ ನಾಲ್ವರು ಆರೋಪಿಗಳಾದ ಸಂದೀಪ್, ಮನೋಜ್ ಗೌಡ, ಜೆ.ರುದ್ರೇಶ್, ಕೃಷ್ಣನಾಯ್ಕ ಅವರನ್ನು ಬಂಧಿಸಲಾಯಿತು. ಇದರಲ್ಲಿ ಹರೀಶ್ ಹಾಗೂ ರುದ್ರೇಶ್, ಕುಬೇರಪ್ಪ ಮುಖ್ಯ ಕಿಂಗ್ಪಿನ್ ಆಗಿದ್ದಾರೆ. ಇವರು ಈ ಹಿಂದೆ ಕೆಲವು ಕೇಸ್ಗಳಲ್ಲಿ ಬಂಧನಗೊಂಡು ಜೈಲಿನಿಂದ ಬಿಡುಗಡೆಯಾಗಿದ್ದರು" ಎಂದು ತಿಳಿಸಿದರು.
ಮೈಸೂರಿನಲ್ಲೂ ನಕಲಿ ನೋಟುಗಳು ಪತ್ತೆ: "ಆರೋಪಿಗಳಾದ ಮನೋಜ್ ಗೌಡ ಹಾಗೂ ಜೆ.ರುದ್ರೇಶ್ ಮೈಸೂರು ಮೂಲದವರು. ಈ ಇಬ್ಬರು ಮೈಸೂರಿನ ಕೂರ್ಗಳ್ಳಿ - ಮೇಗಲಕೊಪ್ಪಲು ಎಂಬಲ್ಲಿ ಬಾಡಿಗೆ ಪಡೆದಿದ್ದ ಮನೆಯಲ್ಲಿ ಖೋಟಾ ನೋಟು ಪತ್ತೆ ಆಗಿದ್ದರಿಂದ ನಕಲಿ ನೋಟು ಸಮೇತ ಇಬ್ಬರನ್ನು ಬಂಧಿಸಲಾಗಿದೆ. ಇವರಿಂದ 500 ಮತ್ತು 200 ಮುಖಬೆಲೆಯ 7.70 ಲಕ್ಷ ಮೌಲ್ಯದ ಖೋಟಾ ನೋಟು ಹಾಗೂ 43,000 ಮೌಲ್ಯದ ಅಸಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಕೃತ್ಯಕ್ಕೆ ಬಳಸಿದ್ದ ಕಾರು, ಲ್ಯಾಪ್ಟಾಪ್ಗಳು, ಕಲರ್ ಪ್ರಿಂಟರ್ಗಳು, ಪೇಪರ್ ಕಟ್ಟರ್, ಕಲರ್ ಬಾಟಲಿಗಳನ್ನೂ ವಶಕ್ಕೆ ಪಡೆಯಲಾಗಿದೆ." ಎಂದು ಎಸ್ಪಿ ತಿಳಿಸಿದರು.
"ಆರೋಪಿ ರುದ್ರೇಶ್ ಎಂಬಾತ ಎಂಬಿಎ ಪದವಿ ವ್ಯಾಸಂಗ ಮಾಡಿದ್ದು, ತಾಂತ್ರಿಕ ಕೌಶಲಗಳನ್ನು ರೂಢಿಸಿಕೊಂಡಿದ್ದ. ಈತ ನೋಟುಗಳನ್ನು ಸ್ಕ್ಯಾನ್ ಮಾಡಿ ಮುಖಬೆಲೆ ಬರೆಯುವ ಕೌಶಲ ಹೊಂದಿದ್ದ. ಕೊರೊನಾ ಸಮಯದಲ್ಲಿ ವ್ಯವಹಾರದಲ್ಲಿ ನಷ್ಟವಾಗಿ ಎಲ್ಲೂ ಕೆಲಸ ಸಿಗದೇ ಇದ್ದಾಗ ಈ ದಂಧೆಗೆ ಇಳಿದಿರುವುದಾಗಿ ಒಪ್ಪಿಕೊಂಡಿದ್ದಾನೆ" ಎಂದು ಮಾಹಿತಿ ನೀಡಿದರು.
ಜನನಿಬಿಡ ಪ್ರದೇಶಗಳೇ ಇವರ ಟಾರ್ಗೆಟ್: "ಸಂತೆ, ಜಾತ್ರೆ, ಜನಸಂದಣಿ ಇರುವ ಅಂಗಡಿಗಳ ಜನನಿಬಿಡ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿ ಆರೋಪಿಗಳು, ಅದರಲ್ಲೂ ರಾತ್ರಿ ವೇಳೆ ಹೆಚ್ಚು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು. ಕಳೆದ 3 ತಿಂಗಳುಗಳಿಂದ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು. ಒಟ್ಟು 20 ಲಕ್ಷ ನಕಲಿ ನೋಟುಗಳನ್ನು ತಯಾರಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. 20 ಲಕ್ಷ ನಕಲಿ ನೋಟುಗಳ ಪೈಕಿ 7 ಲಕ್ಷ ಖೋಟಾ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ 13 ಲಕ್ಷ ಚಲಾವಣೆಯಾಗಿರಬಹುದು ಎಂದು ಶಂಕಿಸಲಾಗಿದೆ" ಎಂದು ಎಸ್ಪಿ ಮಾಹಿತಿ ನೀಡಿದರು.
ಇದನ್ನೂ ಓದಿ: ತುಮಕೂರು: ಖೋಟಾ ನೋಟು ಚಲಾವಣೆ ಯತ್ನ, ವಿಚಾರಿಸುತ್ತಿದ್ದಂತೆ ಯುವಕರು ಪರಾರಿ