ಬೆಂಗಳೂರು: "ದಾವೋಸ್ ಶೃಂಗಸಭೆಯಲ್ಲಿ ರಾಜ್ಯ ಈ ಸಲ ಪ್ರಜ್ಞಾಪೂರ್ವಕವಾಗಿಯೇ ಭಾಗವಹಿಸುತ್ತಿಲ್ಲ. ಅಲ್ಲಿಗೂ ಹೋಗಿ ಒಡಂಬಡಿಕೆಗಳಿಗೆ ಸಹಿ ಹಾಕುವುದು ಮತ್ತು ಅವೇ ಕಂಪನಿಗಳನ್ನು ಇಲ್ಲಿಗೂ ಕರೆದು ಮತ್ತೆ ಅದೇ ಒಡಂಬಡಿಕೆಗಳಿಗೆ ಸಹಿ ಹಾಕುವುದರಿಂದ ವೃಥಾ ಗೊಂದಲ ಉಂಟಾಗುತ್ತದೆ. ಇದನ್ನು ತಪ್ಪಿಸಲೆಂದೇ ನಾವು ಈ ಸಲ ದಾವೋಸ್ ಶೃಂಗಸಭೆಯಿಂದ ದೂರ ಉಳಿದಿದ್ದೇವೆ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, "ಫೆ.11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಾಗತಿಕ ಮಟ್ಟದ ಕಂಪನಿಗಳೆಲ್ಲ ಭಾಗವಹಿಸಲಿವೆ. ಇದರಿಂದ ರಾಜ್ಯಕ್ಕೆ 8 ರಿಂದ 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಬರುವ ನಿರೀಕ್ಷೆ ಇದೆ" ಎಂದು ಅವರು ಭರವಸೆ ವ್ಯಕ್ತಪಡಿಸಿದರು.
"ಮಾಡಿಕೊಳ್ಳುವ ಒಡಂಬಡಿಕೆಗಳ ಪೈಕಿ ಮುಕ್ಕಾಲು ಪಾಲಾದರೂ ವಾಸ್ತವವಾಗಿ ಬಂಡವಾಳ ರೂಪದಲ್ಲಿ ನಮಗೆ ಬರಬೇಕು. ಇಲ್ಲದೇ ಹೋದರೆ ಎಲ್ಲವೂ ವ್ಯರ್ಥ. ಆದ್ದರಿಂದ ನಾವು ವಾಸ್ತವಿಕ ದೃಷ್ಟಿಕೋನ ಹೊಂದಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದನ್ನೇ ಹೇಳಿದ್ದಾರೆ" ಎಂದು ತಿಳಿಸಿದರು.
"2022ರಲ್ಲಿ ಬಿಜೆಪಿ ಸರಕಾರ ಕೂಡ ಹೂಡಿಕೆದಾರರ ಸಮಾವೇಶ ಮಾಡಿ, 50 ಲಕ್ಷ ಕೋಟಿ ರೂಪಾಯಿ ಬರುತ್ತದೆ ಎಂದಿತ್ತು. ಅದರಲ್ಲೂ ಗ್ರೀನ್ ಎನರ್ಜಿ ವಲಯಕ್ಕೆ 2.40 ಲಕ್ಷ ಕೋಟಿ ರೂಪಾಯಿ ಹೂಡಿಕೆ ಆಗಲಿದೆ ಎಂದಿತ್ತು. ಆದರೆ ಒಂದು ರೂಪಾಯಿ ಕೂಡ ಬರಲಿಲ್ಲ. ನಮ್ಮಲ್ಲಿ ಗ್ರೀನ್ ಎನರ್ಜಿ ಕ್ಷೇತ್ರಕ್ಕೆ ಅಷ್ಟೊಂದು ಬಂಡವಾಳ ತಡೆದುಕೊಳ್ಳುವ ಧಾರಣಾಶಕ್ತಿಯೇ ಇಲ್ಲ. ಆದರೂ ಬಿಜೆಪಿ ಸರಕಾರ ದೊಡ್ಡದಾಗಿ ಹೇಳಿಕೊಂಡಿತು. ಅಂತಹ ತಪ್ಪು ಈ ಬಾರಿ ಆಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
ಜಾರಕಿಹೊಳಿಗೆ ಶಕ್ತಿ ಇದೆ: "ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ಪಕ್ಷದ ನೇತಾರರು. ಅವರನ್ನು ರಾಜಕೀಯವಾಗಿ ಯಾರೂ ಮುಗಿಸಲಾರರು. ಅಂತಹ ಆಲೋಚನೆ ಕೂಡ ಯಾರಿಗೂ ಇಲ್ಲ. ಈ ವಿಚಾರವಾಗಿ ಬಿಜೆಪಿಯ ಜನಾರ್ದನ ರೆಡ್ಡಿ ಮಾತನಾಡಿರುವುದು ರಾಜಕೀಯಪ್ರೇರಿತ" ಎಂದು ತಿಳಿಸಿದರು.
"ಶ್ರೀರಾಮುಲು ಮತ್ತು ರೆಡ್ಡಿ ಅವರ ಸಂಬಂಧ ಈಗ ಹಳಸಿದೆ. ಶ್ರೀರಾಮುಲು ನಮ್ಮ ಪಕ್ಷಕ್ಕೆ ಬರುವ ಆಸಕ್ತಿ ವ್ಯಕ್ತಪಡಿಸಿದರೆ, ಅದರ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಆದರೆ ರೆಡ್ಡಿ ವಿರುದ್ಧ ನಾವೆಲ್ಲರೂ ಹೋರಾಡಿದ್ದೇವೆ. ಹೀಗಾಗಿಯೇ ಹಿಂದೆ ಅವರು ನಮ್ಮ ಪಕ್ಷಕ್ಕೆ ಸೇರಲು ಬಂದರೂ ನಾವು ಅದನ್ನು ಒಪ್ಪಲಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ: ಜ.25ಕ್ಕೆ ಸಿಎಂ ನೇತೃತ್ವದಲ್ಲಿ ಸಭೆ