ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ದಿನಗಳ ಕಾಲ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಹಿನ್ನೀರು ಭಾಗದಲ್ಲಿರುವ ರೆಸಾರ್ಟ್ನಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಲೋಕಸಭೆ ಚುನಾವಣೆ ಗೆಲ್ಲಲು ಕಾರ್ಯತಂತ್ರ ರೂಪಿಸಲು ಆಪ್ತರು ಹಾಗೂ ಶಾಸಕರ ಜೊತೆ ಚರ್ಚಿಸುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಭಾನುವಾರದಿಂದ ಬುಧವಾರವರೆಗೆ ರೆಸಾರ್ಟ್ನಲ್ಲಿಯೇ ತಂಗಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ನೇರವಾಗಿ ಮೈಸೂರು ನಗರದ ಖಾಸಗಿ ಹೋಟೆಲ್ನಲ್ಲಿ ಮೈಸೂರು- ಕೊಡಗು ಹಾಗೂ ಚಾಮರಾಜನಗರದ ಕಾಂಗ್ರೆಸ್ ಜನಪ್ರತಿನಿಧಿಗಳು ಮತ್ತು ಪದಾಧಿಕಾರಿಗಳ ಸಭೆಯನ್ನು ಸಂಜೆವರೆಗೆ ನಡೆಸಿದರು. ಸಂಜೆ ಹೋಟೆಲ್ನಿಂದ ನೇರವಾಗಿ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಹಿನ್ನೀರು ಭಾಗದಲ್ಲಿರುವ ರೆಸಾರ್ಟ್ಗೆ ಹೋದ ಮುಖ್ಯಮಂತ್ರಿಗಳು ಭಾನುವಾರ ರಾತ್ರಿ, ಸೋಮವಾರ, ಹಾಗೂ ಮಂಗಳವಾರ ರೆಸಾರ್ಟ್ನಲ್ಲಿಯೇ ವಾಸ್ತವ್ಯ ಹೂಡುವ ಮುಖ್ಯಮಂತ್ರಿಗಳು ರೆಸಾರ್ಟ್ನಲ್ಲಿ ಮೈಸೂರು, ಮಡಿಕೇರಿ ಹಾಗೂ ಚಾಮರಾಜನಗರ ಜಿಲ್ಲೆಯ ಪ್ರಮುಖ ನಾಯಕರು ಹಾಗೂ ಶಾಸಕರ ಸಭೆ ಹಾಗೂ ಎರಡು ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ಕಾರ್ಯ ತಂತ್ರ ರೂಪಿಸಲಿದ್ದಾರೆ ಎಂದು ಮಾಹಿತಿ ಮೂಲಗಳಿಂದ ಖಚಿತವಾಗಿದೆ.
![Siddaramaiah Lok Sabha Elections Lok Sabha Polls 2024](https://etvbharatimages.akamaized.net/etvbharat/prod-images/25-03-2024/ka-mys02-25-03-2024-cmnews-7208092_25032024121730_2503f_1711349250_337.jpg)
ಮುಖ್ಯಮಂತ್ರಿಗಳ ಜೊತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಡಾ. ಹೆಚ್.ಸಿ. ಮಹದೇವಪ್ಪ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಅರಣ್ಯ ಮತ್ತು ವಸತಿ ವಿಹಾರಗಳ ನಿಗಮದ ಅಧ್ಯಕ್ಷ ಮತ್ತು ಹೆಚ್.ಡಿ. ಕೋಟೆಯ ಶಾಸಕ ಅನಿಲ್ ಚಿಕ್ಕಮಾದು, ಮುಖ್ಯಮಂತ್ರಿಗಳ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಿಎಂ ಜೊತೆ ರೆಸಾರ್ಟ್ನಲ್ಲಿದ್ದಾರೆ.
ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿಗಳು, ಅಲ್ಲಿ ಮೂರು ದಿನಗಳ ಕಾಲ ರಿಲ್ಯಾಕ್ಸ್ ಆಗುವ ಜೊತೆಗೆ ಆಪ್ತರೊಂದಿಗೆ ಚುನಾವಣೆ ಗೆಲ್ಲಲು ರಾಜಕೀಯ ಕಾರ್ಯತಂತ್ರ ರೂಪಿಸಿದ್ದಾರೆ. ಬಳಿಕ ಸಫಾರಿ ನಡೆಸಲಿದ್ದಾರೆ ಎಂದು ರೆಸಾರ್ಟ್ನ ಮೂಲಗಳು ಖಚಿತಪಡಿಸಿವೆ.
![Siddaramaiah Lok Sabha Elections Lok Sabha Polls 2024](https://etvbharatimages.akamaized.net/etvbharat/prod-images/25-03-2024/ka-mys02-25-03-2024-cmnews-7208092_25032024121730_2503f_1711349250_837.jpg)
ಬಿಜೆಪಿ ಅಭ್ಯರ್ಥಿ ವಿರುದ್ಧ ಮಾತಾನಾಡದಂತೆ ನಾಯಕರಿಗೆ ಸಿಎಂ ಎಚ್ಚರಿಕೆ: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಕುರಿತು ಪ್ರಚಾರ ಸಂದರ್ಭದಲ್ಲಿ ಯಾವುದೇ ಕಾಂಗ್ರೆಸ್ ಮುಖಂಡರು, ಶಾಸಕರು ಅವರ ವಿರುದ್ಧ ಟೀಕೆ ಮಾಡದಂತೆ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನ ನೀಡದಂತೆ ಮುಖ್ಯಮಂತ್ರಿಗಳು ಮೈಸೂರು ಮತ್ತು ಕೊಡಗು ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ನಿನ್ನೆ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಸೂಚಿಸಿದ್ದಾರೆ. ಸಾಧ್ಯವಾದಷ್ಟು ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡುವ ಮೂಲಕ ಮತಗಳನ್ನು ಕ್ರೋಢೀಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೂರು ದಿನಗಳ ಕಾಲ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿಗಳು ಮೈಸೂರು- ಕೊಡಗಿನ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಹೆಚ್ಚಿನ ಮತಗಳನ್ನು ಪಡೆಯುವ ಬಗ್ಗೆ ಶಾಸಕರೊಂದಿಗೆ ಚರ್ಚಿಸಿದ್ದಾರೆ. ಮುಖ್ಯಮಂತ್ರಿಗಳು ಬುಧವಾರ ಬೆಳಗ್ಗೆ ಮೈಸೂರಿಗೆ ಆಗಮಿಸಲಿದ್ದಾರೆ.
ಇದನ್ನೂ ಓದಿ: '13 ವರ್ಷಗಳ ಬಳಿಕ ಬಿಜೆಪಿ ಕಚೇರಿಗೆ ಬಂದಿದ್ದೇನೆ': 'ಗಣಿಧಣಿ' ಜನಾರ್ದನ ರೆಡ್ಡಿ ಘರ್ ವಾಪ್ಸಿ - Janardhan Reddy Joins BJP