ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿಯಲ್ಲಿರುವ ಗೀತಂ ವಿಶ್ವವಿದ್ಯಾಲಯದ ಆವರಣದಲ್ಲಿ ಬಿ.ಟೆಕ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದು ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಆದರೆ, ವಿದ್ಯಾರ್ಥಿ ಸಾವಿನ ಕುರಿತು ಕೆಲ ಅನುಮಾನಗಳು ಸಹ ವ್ಯಕ್ತವಾಗಿದ್ದು, ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ವಿದ್ಯಾರ್ಥಿಯನ್ನು ಆಂಧ್ರ ಮೂಲದ ವಿದ್ಯಾರ್ಥಿ ದಾಸರಿ ಬ್ರಹ್ಮಾ ಸಾಯಿರೆಡ್ಡಿ(20) ಎಂದು ಗುರುತಿಸಲಾಗಿದೆ. ಗೀತಂ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಟೆಕ್ ಪದವಿ ಓದುತ್ತಿದ್ದ, ಕಳೆದ ರಾತ್ರಿ ಊಟದ ನಂತರ ಹಾಸ್ಟೆಲ್ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮೃತನ ಸಹೋದರ ನರಸಿಂಹರೆಡ್ಡಿ ಮಾತನಾಡಿ, ದಾಸರಿ ಬ್ರಹ್ಮಾ ಸಾಯಿರೆಡ್ಡಿ ಕಳೆದ ವರ್ಷ ಪ್ರವೇಶ ಪಡೆದಿದ್ದರು. ಕುಟುಂಬ ಮತ್ತು ಓದಿನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ನಾವು ಕರೆ ಮಾಡಿದಾಗ ಯಾವ ಸಮಸ್ಯೆ ಇಲ್ಲ ಎಂದು ಹೇಳುತ್ತಿಲ್ಲ. ಖಿನ್ನತೆ ಸಮಸ್ಯೆ ಕೂಡ ಇರಲಿಲ್ಲ. ಮೊದಲ ವರ್ಷದ ಎಲ್ಲ ವಿಷಯಗಳಲ್ಲಿ ಪಾಸಾಗಿದ್ದ. ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ವಿವಿಯು ಹೆಚ್ಚಿನ ಭದ್ರತೆ ವ್ಯವಸ್ಥೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಗೀತಂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಅಧಿಕಾರಿ ಪ್ರತಿಕ್ರಿಯಿಸಿ, ''ವಿದ್ಯಾರ್ಥಿ ಸಾವಿಗೆ ನಿಖರ ಕಾರಣ ಗೊತ್ತಿಲ್ಲ. ಪೊಲೀಸ್ ಪ್ರಕರಣ ದಾಖಲಾಗಿದ್ದು, ವೈದ್ಯಕೀಯ ವರದಿಯೂ ಬರಬೇಕಿದೆ. ಹೀಗಾಗಿ, ಏನಾಗಿದೆ ಎಂಬುವುದೂ ನಮಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕೌನ್ಸೆಲಿಂಗ್ ಕೇಂದ್ರವು ಇದೆ. ಇಂತಹ ಘಟನೆಗಳನ್ನು ತಡೆಯಲು ವಿಶ್ವವಿದ್ಯಾಲಯದಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂದಿನ ಮಕ್ಕಳಿಗೆ ದುಃಖ ತಡೆದುಕೊಳ್ಳಲು ಆಗಲ್ಲ, ತುಂಬಾ ಕಷ್ಟ. ತಮ್ಮ ಜೀವನವನ್ನು ಯಾವ ರೀತಿಯಾಗಿ ನಿರ್ವಹಣೆ ಮಾಡಬೇಕು ಎಂಬ ಕೇಳಿ ಕೊಡಬೇಕಿದೆ'' ಎಂದು ಹೇಳಿದರು.
ಈ ಘಟನೆ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಹಾಸ್ಟೆಲ್ನಲ್ಲಿ ವಿದ್ಯಾರ್ಥಿ ಸಾವು: ಕುಲಪತಿ ಅಮಾನತುಗೊಳಿಸಿ ಕೇರಳ ರಾಜ್ಯಪಾಲರ ಆದೇಶ