ಬೆಂಗಳೂರು: ಸಾಲಗಾರರ ಕಿರುಕುಳ ತಾಳಲಾರದೆ ವ್ಯಕ್ತಿಯೋರ್ವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅರುಣ್ (38) ಆತ್ಮಹತ್ಯೆ ಮಾಡಿಕೊಂಡವರು.
ಅರುಣ್ ಅವರ ತಂದೆ ದೇವರಾಜ್ ನೀಡಿದ ದೂರಿನ ಮೇರೆಗೆ ಸಾಲ ನೀಡಿದ್ದ ದಿನೇಶ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕಾಶ್ ನಗರದಲ್ಲಿ ಕಳೆದ 20 ವರ್ಷಗಳಿಂದ ಅರುಣ್ ವಾಸಿಸುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ವ್ಯವಹಾರದ ಸಲುವಾಗಿ ಪೂಜಾ ಎಂಟರ್ಪ್ರೈಸಸ್ ಹೆಸರಿನಲ್ಲಿ ಫೈನಾನ್ಸ್ ನಡೆಸುತ್ತಿದ್ದ ದಿನೇಶ್ ಎಂಬವರನ್ನು 15 ದಿನಗಳ ಹಿಂದೆ ಭೇಟಿ ಮಾಡಿದ್ದ ಅರುಣ್, 6 ಲಕ್ಷ ರೂ ಸಾಲ ಪಡೆದುಕೊಂಡಿದ್ದರು. ಇದಕ್ಕೆ ಶ್ಯೂರಿಟಿಯಾಗಿ ತಮ್ಮ ಕಾರನ್ನು ಒಪ್ಪಿಸಿದ್ದರು.
ವಾಯಿದೆಯಂತೆ 6 ಲಕ್ಷ ಹಣ ಹೊಂದಿಸಲು ಸಾಧ್ಯವಾಗದೆ 1.50 ಲಕ್ಷ ಹಣವನ್ನು ಅರುಣ್ ನೀಡಲು ಮುಂದಾದಾಗ ಬೆದರಿಕೆ ಹಾಕಲಾಗಿದೆ ಎಂದು ದಿನೇಶ್ ವಿರುದ್ಧ ಮೃತನ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಿಗದಿತ ಅವಧಿಯೊಳಗೆ ಹಣ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರುಣ್ನನ್ನು ತಮ್ಮ ಅಂಗಡಿಗೆ ಕರೆಯಿಸಿ ದಿನೇಶ್ ಧಮ್ಕಿ ಹಾಕಿದ್ದ. ಕೈಯಿಂದ ಹೊಡೆದು ಹಲ್ಲೆ ಮಾಡಿದ್ದ. ಹಣ ವಾಪಸ್ ನೀಡಲು ಆಗದಿದ್ದರೆ ನೇಣು ಹಾಕಿಕೊಂಡು ಸಾಯಿ ಎಂದು ಹೀಯಾಳಿಸಿದ್ದ. ಆದಷ್ಟು ಬೇಗ ಹಣ ನೀಡದಿದ್ದರೆ ಜೀವಸಮೇತ ಬಿಡುವುದಿಲ್ಲ ಎಂದೂ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಹೆಂಡತಿ-ಮಕ್ಕಳನ್ನು ಸಹೋದರನ ಮನೆಯಲ್ಲಿರಿಸಿ ಜ.23ರಂದು ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಅರುಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ತಂದೆ ನೀಡಿದ ದೂರು ಆಧರಿಸಿ ದಿನೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್, ಲೇವಾದೇವಿದಾರರ ಕಿರುಕುಳಕ್ಕೆ ಬ್ರೇಕ್ ಹಾಕಲು ಕರಡು ಮಸೂದೆ: ಇಂದು ಸಂಪುಟ ಸಭೆಯಲ್ಲಿ ಒಪ್ಪಿಗೆ?
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ನಿಂದ ಮನೆಗೆ ಬೀಗ: ಬಾಣಂತಿ ಮನೆಗೆ ವಾಪಸ್ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಾಯಕ್ಕೆ ಕುಟುಂಬದಿಂದ ಧನ್ಯವಾದ