ಬೆಂಗಳೂರು: ''ಬಿಜೆಪಿಯವರಿಗೆ ಅನುಕೂಲ ಮಾಡಿಕೊಳ್ಳುವುದಕ್ಕೇ ಅಂತಲೇ ಇಷ್ಟೊಂದು ಹಂತದಲ್ಲಿ ಚುನಾವಣೆ ನಡೆಯುತ್ತಿದೆ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಖರ್ಗೆ, ''ಚುನಾವಣಾ ಆಯೋಗವು ಏಳು ಹಂತದಲ್ಲಿ ಚುನಾವಣೆ ಘೋಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ನಾಲ್ಕೈದು ಹಂತದಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ, ಈ ಬಾರಿ ಏಳು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇದು ಸರಿಯಾದ ಪ್ರಕ್ರಿಯೆ ಅನ್ನಿಸಲ್ಲ. ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಇದು ಸಮಸ್ಯೆಯಾಗುತ್ತದೆ. ಇಂದಿನಿಂದಲೇ ಕೋಡ್ ಆಫ್ ಕಂಡಕ್ಟ್ ಬಂದಿದೆ. ಮಕ್ಕಳ ಸ್ಕಾಲರ್ಶಿಪ್, ಕೂಲಿ ಕಾರ್ಮಿಕರಿಗೆ ಸೇರಿದಂತೆ ಯಾವುದಕ್ಕೂ ಹಣ ಬಿಗುಗಡೆ ಆಗುವುದಿಲ್ಲ. ಮೇ ತಿಂಗಳಲ್ಲಿ ಮುಗಿಸಿದ್ದರೆ ಬಹಳಷ್ಟು ಜನರಿಗೆ ಅನುಕೂಲ ಆಗುತ್ತಿತ್ತು. ಬಿಜೆಪಿಯವರು ಯಾವ್ಯಾವ ಕ್ಷೇತ್ರ, ಊರುಗಳಿಗೆ ಹೋಗಿ ಪ್ರಚಾರ ಮಾಡಿಲ್ವೋ ಅಲ್ಲೆಲ್ಲ ಈಗ ಪ್ರಚಾರಕ್ಕೆ ಹೋಗಲಿದ್ದಾರೆ'' ಎಂದರು.
20 ಸ್ಥಾನ ಗೆಲ್ಲುತ್ತೇವೆ ಎಂದ ಡಿಕೆಶಿ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್, ''ಇಡೀ ದೇಶಕ್ಕೆ 7 ಹಂತದ ಚುನಾವಣೆ ಘೋಷಣೆ ಆಗಿದೆ. ರಾಜ್ಯದಲ್ಲಿ 2 ಹಂತದ ಚುನಾವಣೆ ಘೋಷಣೆಯಾಗಿದೆ. ಪ್ರಜಾಪ್ರಭುತ್ವದ ಹಬ್ಬ, ಅವಧಿ ಮುಗಿದ ಚುನಾವಣೆಯಾಗಿದ್ದು, ನಮಗೆ ಆಶ್ಚರ್ಯ ಏನಿಲ್ಲ. ಚುನಾವಣೆ ಸಂತೋಷ, ಆತ್ಮವಿಶ್ವಾಸದಿಂದ ಸ್ವೀಕರಿಸುತ್ತೇವೆ. ಕಳೆದ 7 - 8 ತಿಂಗಳಿಂದ ಕಾರ್ಯಕರ್ತರನ್ನು ಚುನಾವಣೆಗೆ ತೆಗೆದುಕೊಂಡಿದ್ದೇವೆ. ನುಡಿದಂತೆ ನಡೆದಿದ್ದೇವೆ, ಕೊಟ್ಟ ಅವಕಾಶದಲ್ಲಿ ಜನರ ಋಣ ತೀರಿಸುತ್ತಿದ್ದೇವೆ. ನಮ್ಮ ಎಲ್ಲ ಅಭ್ಯರ್ಥಿಗಳನ್ನು ಬೇಗ ಘೋಷಣೆ ಮಾಡ್ತೇವೆ'' ಎಂದರು.
''7 ಹಂತದ ಚುನಾವಣೆ ಘೋಷಣೆ ಆಗಿದೆ. ಇದರಿಂದ ನಮಗೆ ಲಾಸ್ ಆಗಬಹುದು, ಬೇರೆ ವಿಧಿ ಇಲ್ಲ. ರಾಜಕೀಯವಾಗಿ ಬಿಜೆಪಿಯವರು ತಮ್ಮ ಅನುಕೂಲಕ್ಕೆ ಮಾಡಿಕೊಂಡು ಬಂದಿದ್ದಾರೆ. ನಮ್ಮ ಚುನಾವಣೆ ನಾವು ಮಾಡುತ್ತೇವೆ. ದಿನನಿತ್ಯದ ಚಟುವಟಿಕೆಗೆ ನೀತಿಸಂಹಿತೆ ಅಡ್ಡಿ ಆಗಲ್ಲ. ರಾಜ್ಯದಲ್ಲಿ ನಾವು 20 ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರನ್ನು ನೋಡುತ್ತಿದ್ದೀರಿ, ಅವರ ರೀತಿಯ ಗೊಂದಲ ನಮಗೆ ಆಗಲ್ಲ. ಮಕ್ಕಳನ್ನು ಚುನಾವಣೆಗೆ ಬಳಸಬಾರದು ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಎಚ್ಚರವಾಗಿ ಇರಬೇಕು'' ಎಂದು ಕಾರ್ಯಕರ್ತರಿಗೆ ಡಿಕೆಶಿ ಕರೆ ನೀಡಿದರು.
ಆಪರೇಷನ್ ಮಾಡಲು ರೆಡಿ ಇದ್ದೆ, ಪಕ್ಷ ಒಪ್ಪಿಲ್ಲ: ''ನಾನು ಬಿಜೆಪಿಯವರನ್ನು ಆಪರೇಷನ್ ಮಾಡಲು ರೆಡಿ ಇದ್ದೆ. ನಮ್ಮ ಪಕ್ಷ ಒಪ್ಪಿಲ್ಲ. ಒಳ್ಳೆಯ ಹುಲಿಗಳು ಇದ್ದವು'' ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು. ಮಾರ್ಚ್ 19-20ರಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ: ರಾಜ್ಯದಲ್ಲಿ 5.42 ಕೋಟಿ ಮತದಾರರು, ಅಧಿಕಾರಿಗಳಿಂದ ಹದ್ದಿನ ಕಣ್ಣು