ಹಾಸನ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 14 ವರ್ಷದ ವಿಶೇಷ ಚೇತನ ಬಾಲಕನನ್ನು ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಜೀರೋ ಟ್ರಾಫಿಕ್ ವ್ಯವಸ್ಥೆ ಮೂಲಕ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಅಮ್ಜದ್ ಪಾಷಾ ಮತ್ತು ರಜೀಯಾ ಬೇಗಂ ದಂಪತಿ ಪುತ್ರ ಹದಿನಾಲ್ಕು ವರ್ಷದ ಮಹಮದ್ ಕೈಫ್ ಕಳೆದ ನಾಲ್ಕು ದಿನಗಳಿಂದ ಹಿಮ್ಸ್ನ ಶ್ರೀಚಾಮರಾಜೇಂದ್ರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಹೆಚ್ಚಿನ ಚಿಕಿತ್ಸೆಗಾಗಿ ಶನಿವಾರದಂದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸಾಗಿಸಲಾಯಿತು.
ಜೀರೋ ಟ್ರಾಫಿಕ್ ವ್ಯವಸ್ಥೆಯಿಂದ 3 ಗಂಟೆಯಲ್ಲಿ ಜಯದೇವ ಆಸ್ಪತ್ರೆಗೆ ವಿಶೇಷ ಆಂಬ್ಯುಲೆನ್ಸ್ ಮೂಲಕ ಸಾಗಿಸಲಾಗಿದೆ. ಒಟ್ಟು ಮೂರು ಆಂಬ್ಯುಲೆನ್ಸ್ ಜೊತೆ ಪೊಲೀಸ್ ವಾಹನವು ಕೂಡ ಸಾಗಿತು. ಈ ವೇಳೆ ರಸ್ತೆ ಉದ್ದಗಲಕ್ಕೂ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.