ನವದೆಹಲಿ: ಭಾರತ ಮತ್ತು ಚೀನಾ ನಡುವಿನ ವಿದೇಶಾಂಗ ಕಾರ್ಯದರ್ಶಿ - ಉಪ ಸಚಿವರ ಕಾರ್ಯವಿಧಾನದ ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಜನವರಿ 26-27 ರಂದು ಬೀಜಿಂಗ್ ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಗುರುವಾರ ಪ್ರಕಟಿಸಿದೆ.
"ರಾಜಕೀಯ, ಆರ್ಥಿಕ ಮತ್ತು ಜನರ ನಡುವಿನ ವಿಷಯಗಳು ಸೇರಿದಂತೆ ಭಾರತ - ಚೀನಾ ಸಂಬಂಧಗಳ ಮುಂದಿನ ಹಂತಗಳನ್ನು ಚರ್ಚಿಸಲು ನಾಯಕತ್ವ ಮಟ್ಟದಲ್ಲಾದ ಒಪ್ಪಂದದ ಅನ್ವಯ ಈ ದ್ವಿಪಕ್ಷೀಯ ಕಾರ್ಯವಿಧಾನವು ಪುನರಾರಂಭಗೊಳ್ಳುತ್ತಿದೆ" ಎಂದು ಎಂಇಎ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಚೀನಾದ ಉಪಾಧ್ಯಕ್ಷ ಹಾನ್ ಜೆಂಗ್ ಅವರನ್ನು ಭೇಟಿ ಮಾಡಲು ಬೀಜಿಂಗ್ಗೆ ಪ್ರಯಾಣಿಸಿದ್ದರು.
ಅಂದಿನ ಸಭೆಯಲ್ಲಿ ಎನ್ಎಸ್ಎ ದೋವಲ್ ಅವರು ಐದು ವರ್ಷಗಳ ಅಂತರದ ನಂತರ ಗಡಿ ಪ್ರಶ್ನೆಗಾಗಿ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ ನಡುವಿನ ಸಭೆಯನ್ನು ಪುನರಾರಂಭಿಸುವುದು ಉಭಯ ದೇಶಗಳ ನಾಯಕರು ತಲುಪಿದ ಒಮ್ಮತವನ್ನು ಕಾರ್ಯಗತಗೊಳಿಸುವ ಪ್ರಮುಖ ಕ್ರಮವಾಗಿದೆ ಮತ್ತು ಇದು ದ್ವಿಪಕ್ಷೀಯ ಸಂಬಂಧಗಳನ್ನು ಉತ್ತಮಗೊಳಿಸುವಲ್ಲಿ ಬಹಳ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು.
ಕೈಲಾಸ ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ವೇದಿಕೆ: ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸುವುದು, ಗಡಿಯಾಚೆಗಿನ ನದಿಗಳು ಮತ್ತು ಗಡಿ ವ್ಯಾಪಾರದ ದತ್ತಾಂಶ ಹಂಚಿಕೆ ಸೇರಿದಂತೆ ಗಡಿಯಾಚೆಗಿನ ಸಹಕಾರ ಮತ್ತು ವಿನಿಮಯಕ್ಕೆ ಸಕಾರಾತ್ಮಕ ನಿರ್ದೇಶನಗಳನ್ನು ನೀಡಲು ಎನ್ಎಸ್ಎ ದೋವಲ್ ಮತ್ತು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ಯಿ ಭಾಗವಹಿಸಿದ್ದ ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳ (ಎಸ್ಆರ್) 23 ನೇ ಸಭೆಯಲ್ಲಿ ಎರಡೂ ದೇಶಗಳು ನಿರ್ಧರಿಸಿದ್ದವು.
ಭಾರತ-ಚೀನಾ ಸಂಬಂಧಗಳು ಸಕಾರಾತ್ಮಕ ಪಥಕ್ಕೆ ಮರಳಬೇಕಾದರೆ ಮತ್ತು ಸುಸ್ಥಿರವಾಗಿ ಉಳಿಯಬೇಕಾದರೆ ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆ ಎಂಬ ಮೂರು ಪರಸ್ಪರ ಅಂಶಗಳನ್ನು ಆಧರಿಸಿರಬೇಕು ಎಂದು ಪಿಎಂ ಮೋದಿ ಚೀನಾದ ಅಧ್ಯಕ್ಷರಿಗೆ ತಿಳಿಸಿದ್ದರು.
"ಕಳೆದ ನಾಲ್ಕು ವರ್ಷಗಳಲ್ಲಿ ಭಾರತ - ಚೀನಾ ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿಗಳ ಬಗ್ಗೆ ಒಮ್ಮತ ಮೂಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಪರಸ್ಪರ ಸೂಕ್ಷ್ಮತೆ ನಮ್ಮ ಸಂಬಂಧಗಳ ಆಧಾರವಾಗಿದೆ " ಎಂದು ಕ್ಸಿ ಜಿನ್ ಪಿಂಗ್ ಅವರೊಂದಿಗಿನ ಮಹತ್ವದ ದ್ವಿಪಕ್ಷೀಯ ಸಭೆಯ ನಂತರ ಪ್ರಧಾನಿ ಮೋದಿ ಹೇಳಿದ್ದರು.
ಇದನ್ನೂ ಓದಿ : ಪರಿಹಾರ ಸಾಮಗ್ರಿ ಹೊತ್ತ 1,000 ಟ್ರಕ್ ಗಾಜಾ ಪ್ರವೇಶ: ವಿಶ್ವಸಂಸ್ಥೆಯಿಂದ ನೆರವು ಕಾರ್ಯ ಪುನಾರಂಭ - UN AID TO GAZA