ಕೇರಳ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರರಂಗದ ಕರಾಳ ಮುಖವನ್ನು ಪ್ರದರ್ಶಿಸಿದೆ. ಹೆಸರಾಂತ ನಟ, ನಿರ್ದೇಶಕರು ಗಂಭೀರ ಆರೋಪಗಳನ್ನು ಎದುರಿಸಿದ್ದಾರೆ. ಆರೋಪ ಪ್ರತ್ಯಾರೋಪಗಳು ಜೋರಾಗೇ ಕೇಳಿಬಂದಿವೆ. ಲೈಂಗಿಕ ದುರ್ವರ್ತನೆಯ ಆರೋಪಗಳನ್ನು ಎದುರಿಸಿರುವ ನಟ - ರಾಜಕಾರಣಿ ಮುಕೇಶ್ ಚಲನಚಿತ್ರ ನೀತಿ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಬಂಧನಕ್ಕೊಳಗಾಗಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಮುಕೇಶ್ ಅವರ ವಿಚಾರಣೆ ನಡೆದಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ಮುಕೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿಯ ಕೋಸ್ಟಲ್ ಪೊಲೀಸ್ ಆಫೀಸ್ನಲ್ಲಿ ಎಐಜಿ ಪೂಂಗುಝಾಲಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ಇನ್ನು, ಮುಕೇಶ್ಗೆ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಇರುವುದರಿಂದ ಬಿಡುಗಡೆ ಆಗುವ ಸಾಧ್ಯತೆಗಳಿವೆ.
ಕೇರಳ ಸಿನಿ ವಲಯದ ಗಣ್ಯರ ವಿರುದ್ಧ ನಟಿಯರು ಗಂಭೀರ ಆರೋಪ ಹೊರಿಸಿದ್ದಾರೆ. ನಟರಾದ ಮುಕೇಶ್, ಜಯಸೂರ್ಯ, ಮಣಿಯನ್ಪಿಳ್ಳ ರಾಜು, ಇಡವೆಲ್ ಬಾಬು, ಚಂದ್ರಶೇಖರನ್, ಪ್ರೊಡಕ್ಷನ್ ಟೀಮ್ನ ನೋಬಲ್ ಮತ್ತು ವಿಚು ವಿರುದ್ಧ ಈಗಾಗಲೇ ಗಂಭೀರ ಆರೋಪಗಳು ಕೇಳಿಬಂದಿವೆ. ನಟರ ವಿರುದ್ಧ ಆರೋಪ ಹೊರಿಸಿರುವ ನಟಿಮಣಿಯರ ಹೇಳಿಕೆಗಳನ್ನು ಈಗಾಗಲೇ ತನಿಖಾ ತಂಡ ದಾಖಲಿಸಿಕೊಂಡಿದೆ.
ಇದನ್ನು ಓದಿ: ಡಿವೋರ್ಸ್ ವದಂತಿ ನಡುವೆ ಪ್ಯಾರಿಸ್ ಫ್ಯಾಶನ್ ವೀಕ್ನಲ್ಲಿ ಮಿಂಚು ಹರಿಸಿದ ನೀಲಿ ಕಣ್ಣಿನ ಚೆಲುವೆ - Aishwarya Rai