ಸ್ಯಾಂಡಲ್ವುಡ್ನಲ್ಲಿ ಹೊಸ ಪ್ರತಿಭೆಗಳ ಕಂಟೆಂಟ್ ಆಧಾರಿತ ಚಿತ್ರಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿವೆ. ಈ ಸಾಲಿನಲ್ಲಿ 'ಧೀರ ಸಾಮ್ರಾಟ್' ಚಿತ್ರವಿದೆ. 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ವರ್ಷದ ಎರಡನೇ ಚಿತ್ರವಾಗಿದೆ. ಈ ಖುಷಿಯನ್ನು ಸೋಮವಾರದಂದು ನಿರ್ಮಾಪಕ ಗುಡಿಬಂಡೆ ಸಂತೋಷ್ ಅವರು ಕಲಾವಿದರಿಗೆ, ತಂತ್ರಜ್ಞರಿಗೆ ಯಶಸ್ಸಿನ ನೆನಪಿನ ಕಾಣಿಕೆ ನೀಡೋ ಮೂಲಕ ಆಚರಿಸಿದರು.

ನಿರ್ದೇಶಕ ಪವನ್ ಕುಮಾರ್ ಮಾತನಾಡಿ, ಸಿನಿಮಾ ತೆರೆಕಂಡು 25 ದಿನಗಳ ಉತ್ತಮ ಪ್ರದರ್ಶನ ಸುಲುಭದ ಮಾತಲ್ಲ. ನಮ್ಮ ಈ ಚಿತ್ರ ಬಿಡುಗಡೆ ಆದ ಸಂದರ್ಭ ಎಲ್ಲ ಭಾಷೆಗಳೂ ಸೇರಿದಂತೆ 21 ಚಿತ್ರಗಳು ತೆರೆ ಕಂಡಿದ್ದವು. ಇದರ ಮಧ್ಯೆ ನಮ್ಮದು ಸತತ ಉತ್ತಮ ಪ್ರದರ್ಶನ ಕಂಡಿರುವುದು ಖುಷಿಯ ವಿಚಾರ.

ಮುಖ್ಯವಾಗಿ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಬೇಕು. ಏನೇ ಸಮಸ್ಯೆ ಬಂದರೂ ತಲೆಕೆಡಿಸಿಕೊಳ್ಳದೇ ಎಲ್ಲರನ್ನೂ ಹುರಿ ದುಂಬಿಸುತ್ತಿದ್ದರು. ನಾಯಕ ನಟಿ ಅದ್ವಿತಿ ಶೆಟ್ಟಿ ನಾವು ಕರೆದಾಗಲೆಲ್ಲಾ ಬಂದು ಮಾತು ಉಳಿಸಿಕೊಂಡಿದ್ದಾರೆ. ನಮ್ಮಂತಹ ಹೊಸ ಚಿತ್ರಕ್ಕೆ ಸ್ಟಾರ್ ನಟರು ಪ್ರೋತ್ಸಾಹ ನೀಡಿದರೆ ಇನ್ನಷ್ಟು ಪ್ರಚಾರ ಸಿಗುತ್ತದೆ. ಗೆಳೆಯ ಧ್ರುವ ಸರ್ಜಾ ಮುಹೂರ್ತಕ್ಕೆ ಆಗಮಿಸಿ, ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದಂತೆ ಶ್ರೀಮುರಳಿ ಪೋಸ್ಟರ್ ಅನಾವರಣಗೊಳಿಸಿದ್ದರು. ಅವರೆಲ್ಲರಿಗೂ ನಮ್ಮ ಕಡೆಯಿಂದ ತುಂಬು ಹೃದಯದ ಕೃತಜ್ಞತೆ ಸಲ್ಲಿಸಬೇಕು. ತಮಿಳು, ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ. ಹಿಂದಿ, ಒಟಿಟಿ ಮಾತುಕತೆಯಲ್ಲಿದೆ. ಒಟ್ಟಿನಲ್ಲಿ ಒಂದು ಹಂತದಲ್ಲಿ ನಿರ್ಮಾಪಕರು ಸೇಫ್ ಆಗಿದ್ದಾರೆ ಎಂದು ತಿಳಿಸಿದರು.
ಅವಕಾಶ ವಂಚಿತರಾಗಿ, ಇನ್ನೇನು ಉದ್ಯಮ ಬಿಡಬೇಕು ಎಂಬ ನಿರ್ಧಾರ ಮಾಡಿದ ಸಂದರ್ಭದಲ್ಲಿ ಈ ಸಿನಿಮಾಕ್ಕೆ ಆಫರ್ ಬಂತು. ಇದರಲ್ಲಿ ನಟಿಸುತ್ತಿರುವಾಗಲೇ ಎರಡು ಚಿತ್ರಗಳಿಗೆ ಸಹಿ ಹಾಕಿದೆ. ಒಬ್ಬ ಕಲಾವಿದೆಗೆ 25 ದಿನಗಳ ಯಶಸ್ವಿ ಪ್ರದರ್ಶನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅಂದರೆ ಅದಕ್ಕಿಂತ ಸಂತಸ ಬೇರೆ ಇಲ್ಲ. ಇದು ಮುಂದೆ 50, 100 ಆಗಲಿ. ಮತ್ತೆ ನಾವೆಲ್ಲರೂ ಸೇರೋಣ. ಅಪ್ಪ ಇದ್ದರೆ ಬಹಳ ಖುಷಿಪಡುತ್ತಿದ್ದರು ಎಂದು ನಟಿ ಹೇಳಿದರು, ಈ ಸಂದರ್ಭದಲ್ಲಿ ನಿರ್ದೇಶಕ ಪವನ್ ಕುಮಾರ್ ಅವರ ಕಣ್ಣುಗಳು ಒದ್ದೆಯಾಗಿದ್ದವು.

ಇದನ್ನೂ ಓದಿ: ಪುಲ್ಕಿತ್ ಕೈ ಹಿಡಿಯಲಿರುವ 'ಗೂಗ್ಲಿ' ಬೆಡಗಿ: ಮದುವೆ ಸ್ಥಳಕ್ಕೆ ತೆರಳಿದ ಕೃತಿ ಖರಬಂದ - ವಿಡಿಯೋ
ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಸಿನಿಮಾವು ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ನಿರ್ಮಾಪಕ ಗುಡಿಬಂಡೆ ಸಂತೋಷ್ ಮಾಹಿತಿ ನೀಡಿದರು. ಈ ಸಂದರ್ಭ ನಟರಾದ ರವೀಂದ್ರನಾಥ್, ನಾಗೇಂದ್ರ ಅರಸು, ಯತಿರಾಜ್, ಇಂಚರ, ಸಂಗೀತ ನಿರ್ದೇಶಕ ವಿನುಮನಸು, ಸೆನ್ಸಾರ್ ಶಿವು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್, ಕನ್ನಡಪರ ಹೋರಾಟಗಾರ, ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜ್ ತಂಡದ ಯಶಸ್ಸಿನ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಮಾಜಿ ಸಿಎಂ ಬಂಗಾರಪ್ಪರ ಕುಟುಂಬ ಒಂದು ಮಾಡಲು ನಾನ್ಯಾರು?': ಶಿವಣ್ಣ