ಹೈದರಾಬಾದ್: ಮಣಿರತ್ನಂ ನಿರ್ದೇಶನದ ''ಪೊನ್ನಿಯಿನ್ ಸೆಲ್ವನ್: II'' ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ಸೈಮಾ ಪ್ರೋಗ್ರಾಮ್ನಲ್ಲಿ ಅತ್ಯುತ್ತಮ ನಟಿ (ಕ್ರಿಟಿಕ್ಸ್) ಪ್ರಶಸ್ತಿಯನ್ನು ಗೆದ್ದು ಗಮನ ಸೆಳೆದಿದ್ದಾರೆ. ಈವೆಂಟ್ನಲ್ಲಿ ಮಗಳು ಆರಾಧ್ಯ ಜೊತೆ ಕಾಣಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಫೊಟೋ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆದ ಬೆನ್ನಲ್ಲೇ ನಟಿಯ ಹಳೇ ವಿಚಾರಗಳು ಕೂಡಾ ಮುನ್ನಲೆಗೆ ಬಂದಿವೆ.
ಆ ಪೈಕಿ ಅಮಿತಾಭ್ ಬಚ್ಚನ್ ಅವರ ವಿಷಯವೊಂದು ಸಖತ್ ಸದ್ದು ಮಾಡಿದೆ. ಹೌದು, ಹಿರಿಯ ನಟ ಅಮಿತಾಭ್ ಬಚ್ಚನ್ ಅವರೊಂದಿಗೆ ಕೆಲಸ ಮಾಡುವ ಸಂದರ್ಭ ನಟಿ ಬದುಕುಳಿದ ಕ್ಷಣವದು. ಅಭಿಷೇಕ್ ಬಚ್ಚನ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸುವುದಕ್ಕೂ ಮುನ್ನ ಐಶ್ವರ್ಯಾ ರೈ ಅವರು ಅಮಿತಾಭ್ ಜೊತೆ ಹಮ್ ಕಿಸೀಸೆ ಕುಮ್ ನಹೀ, ಖಾಕಿ, ಕ್ಯೂನ್! ಹೋ ಗಯಾ ನಾ ಮತ್ತು ಮೊಹಬ್ಬತೇನ್ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು.

'ಖಾಕಿ' ಚಿತ್ರೀಕರಣ ಸಂದರ್ಭ ಐಶ್ವರ್ಯಾ ಅವರು ನಾಸಿಕ್ ಬಳಿ ಗಂಭೀರ ಅಪಘಾತಕ್ಕೊಳಗಾಗಿದ್ದರು. ಸ್ಟಂಟ್ಮ್ಯಾನ್ ವಾಹನದ ನಿಯಂತ್ರಣ ಕಳೆದುಕೊಂಡ ಹಿನ್ನೆಲೆ ಗಾಡಿ ಐಶ್ವರ್ಯಾ ಅವರ ಕುರ್ಚಿಗೆ ಬಂದು ಡಿಕ್ಕಿ ಹೊಡೆದಿತ್ತು. ಪರಿಣಾಮ, ನಟಿ ಮತ್ತು ಅವರ ಸಹನಟ ತುಷಾರ್ ಕಪೂರ್ ಇಬ್ಬರೂ ಆಘಾತಕ್ಕೊಳಗಾಗಿದ್ದರು. ಆ ವೇಳೆ ಅಕ್ಷಯ್ ಕುಮಾರ್ ಮುನ್ನುಗ್ಗಿ ಐಶ್ವರ್ಯಾ ಅವರನ್ನು ಎಳೆದು ರಕ್ಷಣೆಗೆ ಮುಂದಾದರು. ಅಮಿತಾಭ್ ತಕ್ಷಣ ವೈದ್ಯಕೀಯ ಕ್ರಮಕ್ಕೆ ಮುಂದಾದರು. ಅಮಿತಾಭ್ ಸಂದರ್ಶನವೊಂದರಲ್ಲಿ ಮಾಧ್ಯಮಗಳು ಈ ಘಟನೆಯನ್ನು ಅಸಡ್ಡೆಯಾಗಿ ಚಿತ್ರಿಸಿದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.

ಐಶ್ವರ್ಯಾ ಅವರ ಸುರಕ್ಷತೆ ನಿಟ್ಟಿನಲ್ಲಿ ಅಮಿತಾಭ್ ಅವರು ನಟಿಯನ್ನು ಮುಂಬೈಗೆ ತುರ್ತಾಗಿ ಸಾಗಿಸಲು ಅನಿಲ್ ಅಂಬಾನಿ ಅವರ ಖಾಸಗಿ ಜೆಟ್ ಪಡೆದರು. ನಾಸಿಕ್ನಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯದ ಕೊರತೆಯಿಂದಾಗಿ, ಮಿಲಿಟರಿ ನೆಲೆಯಲ್ಲಿ ಇಳಿಯಲು ದೆಹಲಿಯಿಂದ ವಿಶೇಷ ಅನುಮತಿ ಪಡೆಯಬೇಕಾಯಿತು. ಹಾರಾಟದ ಸಮಯದಲ್ಲಿ ಐಶ್ವರ್ಯಾ ಅವರ ಸುರಕ್ಷತೆ ನಿಟ್ಟಿನಲ್ಲಿ ವಿಮಾನದ ಸೀಟುಗಳನ್ನು ಸಹ ತೆಗೆದುಹಾಕಲಾಗಿತ್ತು. ಅಮಿತಾಭ್ ಅವರ ಈ ಕ್ರಮವು ಪರಿಸ್ಥಿತಿಯ ತೀವ್ರತೆ ಮತ್ತು ಐಶ್ವರ್ಯಾ ಅವರ ಯೋಗಕ್ಷೇಮದ ಬಗ್ಗೆ ಅವರು ಹೊಂದಿರುವ ಕಾಳಜಿಯನ್ನು ಎತ್ತಿ ತೋರಿಸಿದೆ.
ಎಲ್ಲರೂ ಇದನ್ನು ಸಣ್ಣ ಘಟನೆಯಾಗಿ ಸ್ವೀಕರಿಸಿದರು. ಇದು ನನ್ನ ಅಸಮಾಧಾನಕ್ಕೆ ಕಾರಣವಾಯಿತು. ಎಷ್ಟರ ಮಟ್ಟಿಗೆ ಎಫೆಕ್ಟ್ ಆಗಿತ್ತೆಂದರೆ "ಎರಡು ರಾತ್ರಿ ನನಗೆ ನಿದ್ರೆ ಬರಲಿಲ್ಲ. ನನ್ನ ಕಣ್ಮುಂದೆ ನಡೆದ ಘಟನೆ ಅದು. ನಟಿಯ ಬೆನ್ನು ಮುಳ್ಳುಗಳಿಂದ ಸೀಳಿ ಹೋಗಿತ್ತು. ಪಾದದ ಹಿಂಭಾಗದ ಮೂಳೆ ಮುರಿದಿತ್ತು. ತೀವ್ರ ನೋವು ಅನುಭವಿಸಿದ್ದು, ಮೈನರ್ ಆ್ಯಕ್ಸಿಡೆಂಟ್ ಎಂದು ವರದಿಯಾಯ್ತು'' ಎಂದು ಸಂದರ್ಶನವೊಂದರಲ್ಲಿ ಅಮಿತಾಭ್ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: 'ತಲೆಗೆ ಹುಳ ಬಿಡ್ತೀನಂತಾರೆ, ಯುಐ ಚಿತ್ರದಲ್ಲಿ ಹುಳ ತೆಗೆಯುವ ಕೆಲಸ ಮಾಡಿದ್ದೇನೆ': ಉಪೇಂದ್ರ - UI Making Video
2007ರಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ದಾಂಪತ್ಯ ಜೀವನ ಆರಂಭಿಸಿ 2011ರಲ್ಲಿ ಮಗಳು ಆರಾಧ್ಯಳನ್ನು ಸ್ವಾಗತಿಸಿದರು. ತಾರಾ ಜೋಡಿಯ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಬಹಳ ದಿನಗಳಿಂದ ಇದೆ. ಆದರೆ ಇದ್ಯಾವುದಕ್ಕೂ ಗಮನ ಕೊಡದೇ ತಮ್ಮ ಸುಖ ಸಂಸಾರ ಮುಂದುವರಿಸಿದ್ದಾರೆ ಅಭಿ ಐಶ್.