ಹೈದರಾಬಾದ್ (ತೆಲಂಗಾಣ): ತೆಲುಗು ಟಿವಿ ಚಾನೆಲ್ನಲ್ಲಿ ಆ್ಯಂಕರ್ ಕೆಲಸ ಮಾಡುತ್ತಿದ್ದ ಪ್ರಣವ್ ಎಂಬುವರನ್ನು ಅಪಹರಿಸಿದ ಆರೋಪದ ಮೇಲೆ ಯುವತಿಯೊಬ್ಬಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವ ಇಚ್ಛೆಯಿಂದ ಈ ಕಿಡ್ನಾಪ್ ಮಾಡಿರುವುದಾಗಿ ಆರೋಪಿ ಯುವತಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತ್ರಿಷ್ಣಾ ಎಂಬ ಯುವತಿಯೇ ಬಂಧನಕ್ಕೊಳಗಾಗಿದ್ದು, ಇದೇ ಫೆಬ್ರವರಿ 10ರಂದು ಮಧ್ಯರಾತ್ರಿ ಪ್ರಣಣ್ ಅವರನ್ನು ಮದುವೆಯಾಗಲು ಐದು ಜನರೊಂದಿಗೆ ಸೇರಿಕೊಂಡು ಕಿಡ್ನಾಪ್ ಮಾಡಿದ್ದಳು. ನಂತರ ರಾತ್ರಿಯಿಡೀ ಕೋಣೆಯಲ್ಲಿ ಇರಿಸಿ, ತನ್ನನ್ನು ಮದುವೆಯಾಗುವಂತೆ ಬೇಡಿಕೆ ಇರಿಸಿದ್ದಳು. ಇದಾದ ಬಳಿಕ ಫೆ.11ರಂದು ಪ್ರಣಬ್ ಅವರನ್ನು ಬಿಡುಗಡೆ ಮಾಡಿದ್ದಳು. ಅಲ್ಲಿಂದ ಬಂದ ಪ್ರಣವ್ ಉಪ್ಪಾಲ್ ಠಾಣೆಯ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ತ್ರಿಷ್ಣಾಳನ್ನು ಬಂಧಿಸಿದ್ದಾರೆ.
ಫೋಟೋ ನೋಡಿ ಚಾಟ್ ಮಾಡಿ ಅವಾಂತರ: ಈ ಘಟನೆ ಬಗ್ಗೆ ಮಾಹಿತಿ ನೀಡಿದ ಎಸಿಪಿ ಪುರುಷೋತ್ತಮ ರೆಡ್ಡಿ, ಪ್ರಣವ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಟಿವಿ ಚಾನೆಲ್ನಲ್ಲಿ ಪಾರ್ಟ್ಟೈಮ್ ಆ್ಯಂಕರಿಂಗ್ ಸಹ ಮಾಡುತ್ತಿದ್ದಾರೆ. ಆರೋಪಿ ತ್ರಿಷ್ಣಾ ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಮ್ಯಾಟ್ರಿಮೋನಿ ಸೈಟ್ವೊಂದರಲ್ಲಿ ಪ್ರಣವ್ ಫೋಟೋಗಳ ಬಳಕೆ ಮಾಡಿ ಯಾರೋ ಖಾತೆಯನ್ನು ಸೃಷ್ಠಿಸಿದ್ದರು. ಈ ಫೋಟೋಗಳನ್ನು ನೋಡಿದ ತ್ರಿಷ್ಣಾ, ಈ ಖಾತೆಯು ನಿಜವಾಗಿಯೂ ಪ್ರಣವ್ ಅವರದ್ದೇ ಇರಬೇಕೆಂದು ಭಾವಿಸಿದ್ದಳು ಎಂದು ತಿಳಿಸಿದರು.
ಹೀಗಾಗಿ ಪ್ರಣವ್ ಎಂದೇ ತಿಳಿದು ನಿರಂತರವಾಗಿ ತ್ರಿಷ್ಣಾ ಚಾಟ್ ಮಾಡುತ್ತಿದ್ದಳು. ಆದರೆ, ಒಂದು ದಿನ ಏಕಾಏಕಿ ಚಾಟಿಂಗ್ ಮಾಡುವುದು ಬಂದ್ ಆಗಿದೆ. ಆಗ ಪ್ರಣವ್ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂಬ ಭಾವನೆ ಆಕೆಯಲ್ಲಿ ಮೂಡಿದೆ. ಅಲ್ಲದೇ, ಆತನ ಜಾಡನ್ನು ತ್ರಿಷ್ಣಾ ಪತ್ತೆ ಹಚ್ಚಲು ಹೋದಾಗ ಚೈತನ್ಯ ರೆಡ್ಡಿ ಎಂಬಾತ ಪ್ರಣವ್ ಫೋಟೋಗಳ ಬಳಸಿ ಚಾಟ್ ಮಾಡುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಇದಾದ ಬಳಿಕ ಸ್ವತಃ ತ್ರಿಷ್ಣಾಳೇ ಪ್ರಣವ್ ಅವರನ್ನೂ ಸಂಪರ್ಕಿಸಿ ಮ್ಯಾಟ್ರಿಮೋನಿ ಸೈಟ್ವೊಂದರಲ್ಲಿ ಆತನ ಫೋಟೋಗಳ ಬಳಕೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದರಿಂದ ಆಗಲೇ ಪ್ರಣವ್ ತನ್ನ ಫೋಟೋಗಳನ್ನು ಬೇರೆಯವರು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದರು. ಇದರ ನಂತರ ನೇರವಾಗಿ ಪ್ರಣವ್ ಜೊತೆಗೆ ತ್ರಿಷ್ಣಾ ಮಾತನಾಡುವುದನ್ನು ಶುರು ಮಾಡಿದ್ದಳು ಎಂದು ಎಸಿಪಿ ಮಾಹಿತಿ ನೀಡಿದರು.
ಇದರ ನಡುವೆ ಇದೇ ತಿಂಗಳ 10ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಣವ್ ಅವರನ್ನು ಐದು ಜನರೊಂದಿಗೆ ಸೇರಿ ಕಿಡ್ನಾಪ್ ಮಾಡಿದ್ದಾಳೆ. ಆಗ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಈ ವೇಳೆ, ಪ್ರಣವ್ ಉಪಾಯ ಮಾಡಿ ಅವರಿಂದ ತಪ್ಪಿಸಿಕೊಂಡು ಹೊರ ಬಂದಿದ್ದಾರೆ. ನಂತರ ತನ್ನ ಕಿಡ್ನಾಪ್ ಮಾಡಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಯುವತಿಯನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಪ್ರೀತಿ ತಿರಸ್ಕರಿಸಿದ್ದ ಶಿಕ್ಷಕನ ಮೇಲೆ ದ್ವೇಷ - ಪತ್ನಿ, ಪುತ್ರಿಯ ಮಾನಹಾನಿ: ಪೋಕ್ಸೋ ಕಾಯ್ದೆಯಡಿ ಯುವತಿ ಅರೆಸ್ಟ್