ಲಖನೌ, ಉತ್ತರಪ್ರದೇಶ: 2011ರಲ್ಲಿ ಮೊದಲ ಪ್ರಯತ್ನದಲ್ಲೇ ಐಎಎಸ್ ಪಾಸ್ ಮಾಡಿದ ಅಧಿಕಾರಿ ಅಭಿಷೇಕ್ ಸಿಂಗ್ ಉತ್ತರ ಪ್ರದೇಶ ಕೇಡರ್ ಅಧಿಕಾರಿ. ಆಡಳಿತದ ಕೆಲಸಕ್ಕಿಂತ ಇತರ ಕಾರಣಗಳಿಂದಲೇ ಸುದ್ದಿಯಾದ ಆಫೀಸರ್ ಇವರು. ರಾಜಕೀಯದಲ್ಲಿ ನೆಲೆ ಪಡೆಯಬೇಕು ಎಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಈ ಅಧಿಕಾರಿ ಇದೀಗ ತಮ್ಮ ರಾಜೀನಾಮೆ ಹಿಂಪಡೆಯಲು ಮುಂದಾಗಿದ್ದು, ಈ ಸಂಬಂಧ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ, ಸಿಎಂ ಆದಿತ್ಯನಾಥ ಅವರ ಸರ್ಕಾರ ಇದಕ್ಕೆ ನಿರಾಕರಿಸಿದೆ.
ರಾಜಕೀಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಅಭಿಷೇಕ್ ಸಿಂಗ್, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯುವ ನಿರೀಕ್ಷೆ ಹೊಂದಿದ್ದರು. ಇದೇ ಕಾರಣಕ್ಕೆ ತಮ್ಮ ರಾಜಕೀಯ ಸಿದ್ಧತೆಗಾಗಿ 2023ರ ಅಕ್ಟೋಬರ್ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಕೂಡಾ ನೀಡಿದ್ದರು. ಅಷ್ಟೇ ಅಲ್ಲದೇ, ಚುನಾವಣೆಗೆ ಮುನ್ನವೇ ಈ ಕುರಿತು ಪೂರ್ಣ ಪುಟದ ಜಾಹೀರಾತನ್ನು ನೀಡಿ, ಸ್ಥಳೀಯ ಜನರಿಗೆ ಅಯೋಧ್ಯೆಗೆ ಉಚಿತ ಬಸ್ ಪ್ರಯಾಣ ಘೋಷಿಸಿದ್ದರು.
ಇಷ್ಟೆಲ್ಲಾ ಪ್ರಯತ್ನಗಳ ನಡುವೆ ಅಭಿಷೇಕ್ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಚುನಾವಣೆಯಲ್ಲಿ ಟಿಕೆಟ್ ನಿರಾಶೆ ಉಂಟಾದ ಹಿನ್ನಲೆ ಇದೀಗ ಅಧಿಕಾರಿ, ತಮ್ಮ ರಾಜೀನಾಮೆಯನ್ನು ತಾವು ಹಿಂಪಡೆಯುತ್ತಿದ್ದು, ಮರಳಿ ಹುದ್ದೆಗೆ ಸೇರುವ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಮನವಿಯನ್ನು ತಿರಸ್ಕರಿಸಿದ್ದಾರೆ.