ಮಥುರಾ (ಉತ್ತರ ಪ್ರದೇಶ): ಸ್ನೇಹ, ಮಾನವೀಯತೆ ಎಂಬುದು ಅನೇಕ ಬಾರಿ ರಕ್ತ ಸಂಬಂಧಗಳಿಗೂ ಮೀರಿದ್ದು ಎಂಬುದು ಸಾಬೀತಾಗಿದೆ. ಇದೇ ರೀತಿಯ ಘಟನೆಗೆ ಸ್ನೇಹಿತರು ಸಾಕ್ಷಿಯಾಗಿದ್ದಾರೆ. ಮಗಳ ಮದುವೆಗೆ ಇನ್ನೇನು ಎರಡು ದಿನ ಬಾಕಿ ಇದೆ ಎನ್ನುವಾಗ ಸಾವನ್ನಪ್ಪಿದ ತಮ್ಮ ಸಹೋದ್ಯೋಗಿ ಮಗಳ ಮದುವೆಯನ್ನು ಮಾಜಿ ಯೋಧನ ಸ್ನೇಹಿತರು ಸೇರಿ ಮಾಡಿದ್ದಲ್ಲದೇ, ತಂದೆ ಸ್ಥಾನದಲ್ಲಿ ನಿಂತು ಕನ್ಯಾದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಏನಿದು ಘಟನೆ : ಮಂತ್ ಪೊಲೀಸ್ ಠಾಣೆಯ ನಿವೃತ್ತ ನೌಕರ ದೇವೇಂದ್ರ ಸಿಂಗ್(48) ಮಗಳ ಮದುವೆ ಇದೇ ಶನಿವಾರ ನಿಶ್ಚಯವಾಗಿತ್ತು. ಆದರೆ ದುರಾದೃಷ್ಟವಶಾತ್ ದೇವೇಂದ್ರ ಸಿಂಗ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಯಿತು. ಹಸೆಮಣೆ ಏರಬೇಕಿದ್ದ ವಧು ತಂದೆ ಸಾವಿನ ಆಘಾತದಿಂದ ಮದುವೆಯೇ ಬೇಡ ಎಂದು ನಿರ್ಧರಿಸಿದರು.
ಸಂಭ್ರಮದ ಮನೆಯೊಂದು ಸಾವಿನ ಮನೆಯಾಗಿ ನಿರ್ಮಾಣವಾಯಿತು. ಇದೆಲ್ಲವನ್ನು ಮರೆತು ಮದುವೆ ಮಾಡೋಣ ಎಂದರೆ, ಮಗಳಿಗೆ ಕನ್ಯಾದಾನ ಮಾಡುವವರು ಯಾರು ಎಂಬ ಪ್ರಶ್ನೆ ಕೂಡ ಎದುರಾಗಿ, ಮದುವೆ ಕಾರ್ಯ ಅರ್ಧದಲ್ಲಿಯೇ ನಿಂತಿತು.
ತಂದೆ ಸಾವಿನಿಂದ ಕುಟುಂಬ ಅನಾಥವಾದ ಸುದ್ದಿ ಕಮಾಂಡಿಂಗ್ ಆಫೀಸರ್ಗೆ ಮುಟ್ಟಿತು. ತಕ್ಷಣಕ್ಕೆ ಅವರು ಐವರು ಯೋಧರನ್ನು ಮದುವೆ ಮನೆಗೆ ಕಳುಹಿಸಿದರು. ಸುಬೇದಾರ್ ಸೋನ್ವೀರ್ ಸಿಂಗ್, ಸುಬೇದಾರ್ ಮುಖೇಶ್ ಕುಮಾರ್, ಹವಾಲ್ದಾರ್ ಪ್ರೇಮ್ವೀರ್, ವಿನೋದ್ ಮತ್ತು ಬೇತಾಳ್ ಸಿಂಗ್ ಅವರು ಮೃತ ದೇವೇಂದ್ರ ಅವರ ಗ್ರಾಮಕ್ಕೆ ಆಗಮಿಸಿ ತಂದೆಯ ಸ್ಥಾನದಲ್ಲಿ ನಿಂತು ಮದುವೆ ಮನೆಯ ಕರ್ತವ್ಯ ನಿರ್ವಹಿಸುವ ಜೊತೆಗೆ ಕನ್ಯಾದಾನ ಮಾಡಿ, ನವ ದಂಪತಿಗೆ ಆಶೀರ್ವದಿಸಿದರು.
ಅಷ್ಟೇ ಅಲ್ಲದೇ, ಬಂದ ಬಂಧು- ಬಳಗವನ್ನು ಕೂಡ ಆತ್ಮೀಯವಾಗಿ ಸತ್ಕರಿಸಿ, ತಮ್ಮ ಕುಟುಂಬದ ಮದುವೆಯಂತೆ ನಿಂತು ಸಂಪೂರ್ಣ ಕಾರ್ಯ ನಿರ್ವಹಿಸಿದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದರು.
ಇದನ್ನೂ ಓದಿ: ಕಾರ್ಡಿನಲ್ ಆಗಿ ದೀಕ್ಷೆ ಪಡೆದ ಕೇರಳದ ಜಾರ್ಜ್ ಕೂವಕಾಡ್: ಶುಭ ಕೋರಿದ ಪ್ರಧಾನಿ ಮೋದಿ