ಚೆನ್ನೈ, ತಮಿಳುನಾಡು: ಮೈಸೂರು- ದರ್ಬಾಂಗ್ನ ಬಾಗಮತಿ ಎಕ್ಸ್ಪ್ರೆಸ್ ರೈಲು ತಮಿಳುನಾಡಿನ ಕವರಾಯಪೆಟ್ಟೈ ಸಮೀಪದಲ್ಲಿ ಅಪಘಾತಗೊಂಡ ಪ್ರಕರಣದ ತನಿಖೆ ವೇಳೆ ಹೊಸ ತಿರುವು ಸಿಕ್ಕಿದೆ. ಅಕ್ಟೋಬರ್ 11 ರಂದು ಸಂಭವಿಸಿದ ಅಪಘಾತವು ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯವಾಗಿರಬಹುದು ಎಂಬ ಸಂಶಯ ತನಿಖಾ ತಂಡಗಳಿಗೆ ವ್ಯಕ್ತವಾಗಿದ್ದು, ಈ ಸಂಬಂಧದ ಸಾಕ್ಷಿಗಳ ಮತ್ತಷ್ಟು ಹೊಸ ಅಂಶಗಳನ್ನು ತನಿಖೆಯಲ್ಲಿ ಸೇರಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ರೈಲು ಹಳಿತಪ್ಪಿಸಲು ವಿಧ್ವಂಸಕ ಕೃತ್ಯ ಎಂದು ಆರೋಪಿಸಲಾಗಿದೆ.
ಅಕ್ಟೋಬರ್ 11ರಂದು ತಿರುವಳ್ಳೂರು ಜಿಲ್ಲೆಯ ಕವರಾಯಪೆಟ್ಟೈ ರೈಲು ನಿಲ್ದಾಣದಲ್ಲಿ ಬಾಗ್ಮತಿ ಎಕ್ಸ್ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಯಾವುದೇ ಸಾವು - ನೋವು ಆಗದಿದ್ದರೂ, 19 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.
ಈ ರೈಲು ಅಪಘಾತ ಪ್ರಕರಣದ ತನಿಖೆಯಲ್ಲಿ ಕೊರುಕ್ಕು ಪೆಟ್ಟೈ ರೈಲ್ವೆ ಪೊಲೀಸರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಮತ್ತು ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ನಡೆಸುತ್ತಿದೆ. ಈ ಸಂಬಂಧ ಲೋಕೋ ಪೈಲಟ್, ತಾಂತ್ರಿಕ, ಸಿಗ್ನಲ್ ಮತ್ತು ಟ್ರ್ಯಾಕ್ ನಿರ್ವಹಣೆ ವಿಭಾಗಗಳು ಸೇರಿದಂತೆ ವಿವಿಧ ಇಲಾಖೆಗಳ 40 ಕ್ಕೂ ಹೆಚ್ಚು ರೈಲ್ವೆ ನೌಕರರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಬಾಗ್ಮತಿ ಎಕ್ಸ್ಪ್ರೆಸ್ ಅನ್ನು ಮುಖ್ಯ ಲೈನ್ ಬದಲಾಗಿ ಲೂಪ್ ಲೈನ್ಗೆ ಬದಲಾಯಿಸಲಾಗಿದೆ. ಇದು ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಲು ಪ್ರಮುಖ ಕಾರಣವಾಗಿದೆ.
ಆರಂಭದಲ್ಲಿ ಘಟನೆ ಸಂಬಂಧ, ಜೀವಕ್ಕೆ ಅಪಾಯ ಮತ್ತು ಗಂಭೀರ ಗಾಯಕ್ಕೆ ಕಾರಣ ಎಂಬ ಅಂಶಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ನಾಲ್ಕು ಸೆಕ್ಷನ್ಗಳ ಅಡಿ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ, ರೈಲಿನ ಮಾರ್ಗ ಬದಲಾಯಿಸಿದ ಸ್ಥಳದಲ್ಲಿ ಬೋಲ್ಟ್ಗಳು ಮತ್ತು ನಟ್ಗಳು ಪತ್ತೆಯಾಗಿರುವುದು ಅಪಘಾತವು ಯೋಜಿತ ವಿಧ್ವಂಸಕ ಕೃತ್ಯ ಎಂದು ನಂಬುವಂತೆ ಮಾಡಿದೆ.
ಹೀಗಾಗಿ ಭಾರತೀಯ ರೈಲ್ವೆ ಕಾಯ್ದೆ 150ರ ಅಡಿ ರೈಲನ್ನು ಹಳಿ ತಪ್ಪಿಸುವ ಅಥವಾ ಹಾನಿ ಮಾಡುವ ಉದ್ದೇಶದ ಅಡಿ ಪ್ರಕರಣ ದಾಖಲಿಸಲಾಗಿದೆ. ಅಪಘಾತದ ಹಿಂದೆ ಕ್ರಿಮಿನಲ್ ಪಿತೂರಿ ಇರುವ ಸಾಧ್ಯತೆ ಇದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ.
ಇದನ್ನೂ ಓದಿ: ನನ್ನ ತಂದೆ ಸಿಂಹದಂತೆ, ಅವರ ಘರ್ಜನೆಯನ್ನು ನಾನು ಮುಂದುವರೆಸುತ್ತೇನೆ: ಬಾಬಾ ಸಿದ್ದಿಕಿ ಪುತ್ರ