ರಾಮಗಢ( ಜಾರ್ಖಂಡ್): ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಬೊಕಾರೊ ಮೂಲಕ ರಾಮಗಢ ತಲುಪಿದೆ. ಜಿಲ್ಲೆಯ ಮಗನ್ಪುರದಿಂದ ಗೋಲಾ ಡಿವಿಸಿ ಚೌಕ್ವರೆಗೆ ತೆರೆದ ಜೀಪಿನಲ್ಲಿ ರಾಹುಲ್ ಗಾಂಧಿ ಜನರೊಂದಿಗೆ ಬೆರತರು, ಅವರ ಸಮಸ್ಯೆಗಳನ್ನು ಆಲಿಸಿದರು. ಇದಾದ ನಂತರ ಸಿಡೋ ಕನ್ಹು ಜಿಲ್ಲೆಯ ಮೈದಾನ್ ಬಜಾರ್ ತಾಂಡ್ಗೆ ತೆರಳಿ ಭಾನುವಾರ ರಾತ್ರಿ ರಾಮಗಢದಲ್ಲೇ ತಂಗಿದರು.
ಫೆಬ್ರವರಿ 5 ರಂದು ಅಂದರೆ ಇಂದು ರಾಹುಲ್ ಗಾಂಧಿ ಅವರು ಸಿಡೋ ಕನ್ಹು ಜಿಲ್ಲಾ ಮೈದಾನದಿಂದ ಕಾಲ್ನಡಿಗೆಯಲ್ಲಿ ಚಟ್ಟಿ ಬಜಾರ್ ಗಾಂಧಿ ಚೌಕ್ಗೆ ತಲುಪಲಿದ್ದಾರೆ. ಅಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದಾರೆ. ಇದಾದ ಬಳಿಕ ನಗರದ ಸುಭಾಷ್ ಚೌಕ್ ಗೆ ಅವರು ಭೇಟಿ ನೀಡಲಿದ್ದಾರೆ. ಅಲ್ಲಿಯೂ ಸುಭಾಷ್ ಚಂದ್ರ ಬೋಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಯಾತ್ರೆ ಮುಂದುವರೆಸಲಿದ್ದಾರೆ. ಇದಾದ ನಂತರ ಅವರ ನ್ಯಾಯ ಯಾತ್ರೆಯು ರಾಮಗಢ ಬಸ್ ನಿಲ್ದಾಣ, ಬ್ಲಾಕ್ ಚೌಕ್, ಟೈರ್ ಮೋಡ್ ಮೂಲಕ ಕಂಕೆಬಾರ್ ಬೈಪಾಸ್, NH 33 ಮೂಲಕ ರಾಂಚಿಗೆ ಸಾಗಲಿದೆ. ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಅಪಾರ ಪ್ರಮಾಣದ ಕಾಂಗ್ರೆಸ್ ಕಾರ್ಯಕರ್ತರು, ಅವರ ಬೆಂಬಲಿಗರು ಭಾರಿ ಸಿದ್ಧತೆ ನಡೆಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ನಗರದ ಸಂಚಾರ ಮಾರ್ಗದಲ್ಲಿ ಭಾರಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ.