ನವದೆಹಲಿ: ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ನೋಂದಣಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹರ್ಷ ವ್ಯಕ್ತಪಡಿಸಿದ್ದಾರೆ. ರೂಫ್ಟಾಪ್ ಸೌರ ಯೋಜನೆಯಡಿಯಲ್ಲಿ 1 ಕೋಟಿಗೂ ಹೆಚ್ಚು ಕುಟುಂಬಗಳು ಉಚಿತ ವಿದ್ಯುತ್ಗಾಗಿ ನೋಂದಾಯಿಸಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆದಷ್ಟು ಬೇಗನೇ ನೋಂದಣಿ ಮಾಡಿಸಿ- ಪ್ರಧಾನಿ ಮೋದಿ: "ಅತ್ಯುತ್ತಮ ಸುದ್ದಿ! ಇದು ಪ್ರಾರಂಭವಾದ ಸುಮಾರು ಒಂದು ತಿಂಗಳಲ್ಲಿ, 1 ಕೋಟಿ ಕುಟುಂಬಗಳು ಈಗಾಗಲೇ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ನೋಂದಾಯಿಸಿಕೊಂಡಿವೆ. ರಾಷ್ಟ್ರದ ಎಲ್ಲಾ ಭಾಗಗಳಲ್ಲಿರುವ ಕುಟುಂಬಗಳು ನೋಂದಣಿ ಮಾಡಿಸಲು ಮುಂದಾಗಿವೆ. ಅಸ್ಸೋಂ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯದ ತಲಾ 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ನೋಂದಣಿಗಳನ್ನು ಮಾಡಿಸಿವೆ. ಇನ್ನು ವೆಬ್ಸೈಟ್- pmsuryaghar.gov.in ನಲ್ಲಿ ಯೋಜನೆಯಡಿ ಲಾಭ ಪಡೆಯಲು ಆದಷ್ಟು ಬೇಗನೇ ನೋಂದಣಿ ಮಾಡಿಸಬೇಕು'' ಎಂದು ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
''ಈ ಯೋಜನೆಯು ಶಕ್ತಿ ಉತ್ಪಾದನೆಯನ್ನು ಖಾತ್ರಿಪಡಿಸುವುದರ ಜೊತೆಗೆ ಮನೆಗಳಿಗೆ ವಿದ್ಯುತ್ ವೆಚ್ಚದಲ್ಲಿ ಗಣನೀಯ ಕಡಿತವನ್ನು ಭರವಸೆ ನೀಡುತ್ತದೆ. ಇದು ಉತ್ತಮ ಗ್ರಹಕ್ಕೆ ಕೊಡುಗೆ ನೀಡುವ ಮೂಲಕ ಪರಿಸರಕ್ಕಾಗಿ ಜೀವನಶೈಲಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು ಸಜ್ಜಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಏನಿದು ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ?: 2024 ರ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ನಲ್ಲಿ ಘೋಷಿಸಲಾದ ಪ್ರಧಾನ ಮಂತ್ರಿ ರೂಫ್ಟಾಪ್ ಸೌರ ಯೋಜನೆಯನ್ನು ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಎಂದು ಕರೆಯಲ್ಪಡುತ್ತದೆ. 75,000 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯೊಂದಿಗೆ, ಈ ಯೋಜನೆಯು ತಿಂಗಳಿಗೆ 300 ಯೂನಿಟ್ ವಿದ್ಯುತ್ನೊಂದಿಗೆ 1 ಕೋಟಿ ಮನೆಗಳಿಗೆ ವಿದ್ಯುದ್ದೀಕರಿಸುವ ಗುರಿಯನ್ನು ಹೊಂದಿದೆ. ಯೋಜನೆಯನ್ನು ತಳಮಟ್ಟದಿಂದ ಅಂದ್ರೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯ್ತಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮೇಲ್ಛಾವಣಿ ಸೌರ ವ್ಯವಸ್ಥೆಗಳನ್ನು ಉತ್ತೇಜಿಸಲು ಪ್ರೋತ್ಸಾಹಿಸಲಾಗುತ್ತಿದೆ.
ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿ: ಸರ್ಕಾರದ ಪ್ರಕಾರ, ಈ ಸೌರೀಕರಣದಿಂದ ನಿರೀಕ್ಷಿತ ಪ್ರಯೋಜನಗಳೆಂದರೆ ಉಚಿತ ಸೌರ ವಿದ್ಯುತ್ನಿಂದ ಮನೆಗಳಿಗೆ ವಾರ್ಷಿಕವಾಗಿ 15,000-18,000 ರೂ. ಕೋಟಿಗಳವರೆಗೆ ಉಳಿತಾಯ ಆಗುತ್ತದೆ. ಹೆಚ್ಚುವರಿಯಾಗಿ ಉತ್ಪದನೆಯಾದ ವಿದ್ಯುತ್ನ್ನು ವಿತರಣಾ ಕಂಪನಿಗಳಿಗೆ ಮಾರಾಟ ಮಾಡಬಹುದು. ವಿದ್ಯುತ್ ವಾಹನಗಳ ಚಾರ್ಜಿಂಗ್, ಪೂರೈಕೆ ಮತ್ತು ಅನುಸ್ಥಾಪನೆಗೆ ಹೆಚ್ಚಿನ ಸಂಖ್ಯೆಯ ಮಾರಾಟಗಾರರಿಗೆ ಉದ್ಯಮಶೀಲತೆಯ ಅವಕಾಶಗಳು ದೊರೆಯುತ್ತವೆ. ಜೊತೆಗೆ ಸೌರ ವಿದ್ಯುತ್ ಉತ್ಪಾದನೆ, ಸ್ಥಾಪನೆ ಹಾಗೂ ನಿರ್ವಹಣೆಯಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಕರಿಗೆ ಉದ್ಯೋಗಾವಕಾಶಗಳು ಲಭಿಸುತ್ತವೆ.
ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಕೇಜ್ರಿವಾಲ್ಗೆ ಜಾಮೀನು