ನವದೆಹಲಿ: ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆಯ ನಿರೀಕ್ಷೆ ಮೂಡಿಸಿರುವ 'ಒಂದು ರಾಷ್ಟ್ರ, ಒಂದು ಚುನಾವಣೆ' ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ವಿಧೇಯಕವನ್ನು ಮಂಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಏಕಕಾಲದಲ್ಲಿ ಚುನಾವಣೆ ನಡೆಸುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದೆ. ಬುಧವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಕೋವಿಂದ್, 'ಒಂದು ರಾಷ್ಟ್ರ, ಒಂದು ಚುನಾವಣೆ' ವಿಧೇಯಕವನ್ನು ಒಮ್ಮತದಿಂದ ಅಂಗೀಕರಿಸಬೇಕು. ರಾಜಕೀಯ ಹಿತಾಸಕ್ತಿಗಳನ್ನೂ ಮೀರಿ, ರಾಷ್ಟ್ರದ ಹಿತಕ್ಕಾಗಿ ಒಪ್ಪಬೇಕಿದೆ ಎಂದು ಸಲಹೆ ನೀಡಿದ್ದರು.
ಮುಂದುವರೆದು, ಕೇಂದ್ರ ಸರ್ಕಾರವು ವಿಪಕ್ಷಗಳೊಂದಿಗೆ ಮಾತುಕತೆ ನಡೆಸಿ ಈ ವಿಚಾರದಲ್ಲಿ ಒಮ್ಮತ ಮೂಡಿಸಬೇಕು. ಇದರಲ್ಲಿ ಯಾವುದೇ ಪಕ್ಷದ ಹಿತಾಸಕ್ತಿ ಇಲ್ಲ, ರಾಷ್ಟ್ರದ ಹಿತಾಸಕ್ತಿ ಅಡಗಿದೆ. ಇದನ್ನು ಅನುಸರಿಸಿದಲ್ಲಿ ದೇಶದ ಆರ್ಥಿಕ ಚಿತ್ರಣವೇ ಬದಲಾಗುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಜಿಡಿಪಿ ಶೇಕಡಾ 1 ರಿಂದ 1.5ರಷ್ಟು ಹೆಚ್ಚಾಗುತ್ತದೆ ಎಂದೂ ಅಂದಾಜಿಸಲಾಗಿದೆ ಎಂದು ಹೇಳಿದ್ದರು.
ಏನಿದು ಒಂದು ರಾಷ್ಟ್ರ ಒಂದು ಚುನಾವಣೆ?: ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆಯು 100 ದಿನಗಳ ಅವಧಿಯಲ್ಲಿ ಲೋಕಸಭೆ, ರಾಜ್ಯಗಳ ವಿಧಾನಸಭೆ ಮತ್ತು ನಗರ ಪಾಲಿಕೆ ಹಾಗು ಪಂಚಾಯತಿ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದಾಗಿದೆ. ಇದು ಕಾರ್ಯಸಾಧುವೇ ಎಂಬುದನ್ನು ಅರಿಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ಅಧ್ಯಯನ ನಡೆಸಿ ಶಿಫಾರಸು ವರದಿಯನ್ನು ಸರ್ಕಾರಕ್ಕೆ ನೀಡಿದೆ.
N.D.A ಮಿತ್ರಪಕ್ಷಗಳಾದ ಜೆಡಿಯು ಮತ್ತು ಲೋಕ ಜನಶಕ್ತಿ ಪಕ್ಷ ಬೆಂಬಲದ ಹೊರತಾಗಿಯೂ, ವಿಪಕ್ಷಗಳಾದ ಕಾಂಗ್ರೆಸ್, ಎಎಪಿ ಸೇರಿದಂತೆ I.N.D.I.A ಕೂಟದಿಂದ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಆಂಧ್ರಪ್ರದೇಶಕ್ಕೆ ಅಮರಾವತಿ ಏಕೈಕ ರಾಜಧಾನಿಯಾಗಿರಲಿದೆ; ಸುಪ್ರೀಂಗೆ ಸರ್ಕಾರದ ಅಫಿಡವಿಟ್