ಬಲಂಗೀರ್ (ಒಡಿಶಾ): ಬಲಂಗೀರ್ ಜಿಲ್ಲೆಯ ಲಾಥೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಲಿಯಾಲಿಟಿ ಗ್ರಾಮದ ಬಳಿ ನರಬಲಿ ನಡೆದಿರುವ ಆರೋಪ ಕೇಳಿಬಂದಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ 13 ವರ್ಷದ ಅಪ್ರಾಪ್ತನನ್ನು ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಸಂತ್ರಸ್ತ ಕುಟುಂಬ ಆಗ್ರಹಿಸಿದೆ.
ಬಾಲಕ ಗುರುವಾರದಿಂದ ನಾಪತ್ತೆಯಾಗಿದ್ದ. ಇದೀಗ ಆತನ ಶವ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ. ಯಾವುದೇ ದುರಾಸೆಗಾಗಿ ನರಬಲಿ ನೀಡಲಾಗಿದೆ ಎಂದು ಬಾಲಕನ ಕುಟುಂಬದವರು ಆರೋಪಿಸಿದ್ದಾರೆ.
ಬಲಿ ನೀಡಿದವರು ಶವವನ್ನು ಹೂಳಲು ಯತ್ನಿಸಿದ್ದಾರೆ. ಆದರೆ, ಯಾಕೋ ಹಾಗೆಯೇ ಬಿಸಾಡಿ ಹೋಗಿದ್ದಾರೆ. ಇದು ನರಬಲಿ ಪ್ರಕರಣ ಎಂದು ನಮಗೆ ಶಂಕಿಸಲಾಗಿದೆ. ಹುಣ್ಣಿಮೆಯ ರಾತ್ರಿಯಾದ್ದರಿಂದ ಯಾರೋ ನನ್ನ ಮಗನನ್ನು ಯಾವುದೋ ಉದ್ದೇಶಕ್ಕಾಗಿ ಹತ್ಯೆ ಮಾಡಿದ್ದಾರೆ ಎಂದು ಬಾಲಕನ ತಂದೆ ಹೇಳಿದ್ದಾರೆ.
ರಸ್ತೆ ತಡೆದು ಆಕ್ರೋಶ: ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ಸಂತ್ರಸ್ತೆಯ ಕುಟುಂಬಸ್ಥರು ನುವಾಪಾದ ರಸ್ತೆಯ ಮೇಲೆ ಧರಣಿ ನಡೆಸಿದರು. ವಾಹನ ತಡೆದು ರಸ್ತೆಯನ್ನು ನಿರ್ಬಂಧಿಸಿದರು. ಕೃತ್ಯ ಎಸಗಿದ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಮತ್ತು ಶ್ವಾನದಳ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.
ಬಾಲಕನನ್ನು ಹತ್ಯೆ ಮಾಡಲಾಗಿದೆ. ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂದು ಶಂಕಿಸಿಸಲಾಗಿದೆ. ಕುಟುಂಬಸ್ಥರು ದೂರು ನೀಡಿದ ನಂತರ, ಪೊಲೀಸರು ಮಗುವಿನ ಹುಡುಕಾಟ ನಡೆಸಿದ್ದರು. ನರಬಲಿ ಬಗ್ಗೆಯೂ ಆರೋಪವಿದೆ. ಈ ಕೋನದಲ್ಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ಸದಾನಂದ ಪೂಜಾರಿ ತಿಳಿಸಿದರು.
ಉತ್ತರ ಪ್ರದೇಶದ ಹತ್ರಾಸ್ನಲ್ಲಿ, ಶಾಲೆಯ ಉನ್ನತಿಗಾಗಿ 11 ವರ್ಷದ ಬಾಲಕನನ್ನು ನರಬಲಿ ನೀಡಿದ ಪ್ರಕರಣ ದಾಖಲಾಗಿತ್ತು. ಬಳಿಕ ಪಬ್ಲಿಕ್ ಸ್ಕೂಲ್ಗೆ ಸಂಬಂಧಿಸಿದ ಹಲವಾರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿಯ ಪ್ರಕಾರ, 2014 ರಿಂದ 2021 ರವರೆಗೆ ದೇಶದಲ್ಲಿ ಒಟ್ಟು 103 ನರಬಲಿಗಳು ನಡೆದಿವೆ. 2015 ರಲ್ಲಿ ಅತಿ ಹೆಚ್ಚು ಅಂದರೆ 24 ಪ್ರಕರಣಗಳು ದಾಖಲಾಗಿದ್ದರೆ, 2018 ರಲ್ಲಿ 20 ಪ್ರಕರಣಗಳು ನಡೆದಿದ್ದವು. 2014-2021ರ ನಡುವೆ 14 ಪ್ರಕರಣಗಳೊಂದಿಗೆ ಛತ್ತೀಸ್ಗಢದಲ್ಲಿ ಅತಿ ಹೆಚ್ಚು ನರಬಲಿಗಳು ದಾಖಲಾಗಿದ್ದರೆ, ಕರ್ನಾಟಕದಲ್ಲಿ 13 ಮತ್ತು ಜಾರ್ಖಂಡ್ನಲ್ಲಿ 11 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ; ಬಿಕ್ಕಟ್ಟಿನ ನಡುವೆ ಪಾಕಿಸ್ತಾನದ ಯುವತಿ ಜೊತೆ ಬಿಜೆಪಿ ಲೀಡರ್ ಪುತ್ರನ 'ವರ್ಚುವಲ್ ಮ್ಯಾರೇಜ್'