ನವದೆಹಲಿ: ಲೋಕಸಭೆ ಲೋಕಸಭೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಕಸರತ್ತು ಆರಂಭಿಸಿದೆ. ಸುಮಾರು 12 ರಾಜ್ಯಗಳ ಅಂದಾಜು 100 ಲೋಕಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ 7ರಂದು ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯ ಸಭೆ ನಡೆಸಲಿದ್ದಾರೆ.
ಕಾಂಗ್ರೆಸ್ 100 ಅಭ್ಯರ್ಥಿಗಳ ಹೆಸರನ್ನು ಮೊದಲ ಹಂತದಲ್ಲಿ ಪ್ರಕಟಿಸಲಿದೆ. ದೆಹಲಿ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ಕೇರಳ, ಕರ್ನಾಟಕ ಮತ್ತು ತೆಲಂಗಾಣ ಮತ್ತು ಎಲ್ಲ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ಸ್ಕ್ರೀನಿಂಗ್ ಸಮಿತಿಗಳು ಕಳೆದ ವಾರವೇ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಶಾರ್ಟ್ಲಿಸ್ಟ್ ಮಾಡಿವೆ. ಇದೀಗ ಈ ಹೆಸರುಗಳನ್ನು ಸಿಇಸಿ ಪರಿಶೀಲಿಸಿ, ಅನುಮೋದನೆ ನೀಡಲಿದೆ.
ಕರ್ನಾಟಕದಲ್ಲಿ ಹೊಸ ಮುಖಗಳಿಗೆ ಮಣೆ: ದಕ್ಷಿಣ ಭಾರತದ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಪಕ್ಷ ಜಯಭೇರಿ ಬಾರಿಸಬೇಕು ಎಂಬ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವ್ಯಾಪಕ ಸಭೆಗಳನ್ನು ನಡೆಸಿದ್ದಾರೆ. ಈ ಬಾರಿ ಕಾಂಗ್ರೆಸ್ನಿಂದ ಹೊಸ ಮುಖಗಳಿಗೆ ಮಣೆ ಹಾಕಲು ಸಹ ನಿರ್ಧರಿಸಲಾಗಿದೆ. ರಕ್ಷಾ ರಾಮಯ್ಯ, ಜಿ.ಬಿ.ವಿನಯ್ ಕುಮಾರ್, ಪ್ರಿಯಾಂಕಾ ಜಾರಕಿಹೊಳಿ, ಮೃಣಾಲ್ ಹೆಬ್ಬಾಳ್ಕರ್ ಮತ್ತು ಸೌಮ್ಯಾ ರೆಡ್ಡಿ ಸೇರಿದಂತೆ ಹಲವು ಯುವ ಮುಖಗಳ ಹೆಸರನ್ನು ಸ್ಕ್ರೀನಿಂಗ್ ಪ್ಯಾನೆಲ್ ಪ್ರಸ್ತಾಪಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ರಾಹುಲ್ ಸ್ಪರ್ಧೆ ಎಲ್ಲಿ?: ಕೇರಳದಲ್ಲಿ ಕಾಂಗ್ರೆಸ್ ತನ್ನ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಆದರೆ, ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೋ ಅಥವಾ ತೆಲಂಗಾಣಕ್ಕೆ ಬರುತ್ತಾರೋ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಮುಖ್ಯಮಂತ್ರಿ ರೇವಂತ್ ರೆಡ್ಡಿ ತಮ್ಮ ರಾಜ್ಯದ ಎಲ್ಲ 17 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಭರವಸೆಯನ್ನು ಹೈಕಮಾಂಡ್ಗೆ ನೀಡಿದ್ದಾರೆ.
ಹಿರಿಯ ನಾಯಕರು ಕಣಕ್ಕೆ: ಛತ್ತೀಸ್ಗಢದಲ್ಲಿ ಮಾಜಿ ಸಿಎಂ ಭೂಪೇಶ್ ಬಘೇಲ್ ಮತ್ತು ಮಾಜಿ ಡಿಸಿಎಂ ಟಿ.ಎಸ್.ಸಿಂಗ್.ದೇವ್ ಕ್ರಮವಾಗಿ ರಾಜನಂದಗಾಂವ್ ಮತ್ತು ಬಿಲಾಸ್ಪುರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಜೊತೆಗೆ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಬೈಜ್ (ಬಸ್ತಾರ್), ಜ್ಯೋತ್ಸ್ನಾ ಮಹಂತ್ (ಕೊರ್ಬಾ), ತಾಮ್ರಧ್ವಜ್ ಸಾಹು (ದುರ್ಗ್), ವಿಕಾಸ್ ಉಪಾಧಾಯ (ರಾಯ್ಪುರ) ಮತ್ತು ಶಿವ ದಹರಿಯಾ ಅವರು ಜಾಂಜ್ಗೀರ್-ಚಂಪಾ ಕ್ಷೇತ್ರದಿಂದ ಕಣಕ್ಕೆ ಇಳಿಯುವ ನಿರೀಕ್ಷೆ ಇದೆ.
ಗೆಹ್ಲೋಟ್ ಮಗನಿಗೆ ಟಿಕೆಟ್?: ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಒಲವು ತೋರುತ್ತಿಲ್ಲ. ಆದರೆ, ಜಲೋರ್ - ಸಿರೋಹಿ ಕ್ಷೇತ್ರದಿಂದ ತಮ್ಮ ಪುತ್ರ ವೈಭವ್ ಗೆಹ್ಲೋಟ್ ಅವರಿಗೆ ಟಿಕೆಟ್ ಕೇಳಿದ್ದಾರೆ. ಮಾಜಿ ಸಚಿವ ಅಶೋಕ್ ಚಂದನಾ (ಕೋಟಾ), ಎಐಸಿಸಿ ಕಾರ್ಯದರ್ಶಿ ಧೀರಜ್ ಗುರ್ಜರ್ (ಭಿಲ್ವಾರಾ) ಮತ್ತು ಮಾಜಿ ಸಂಸದ ರಘು ಶರ್ಮಾ (ಅಜ್ಮೀರ್) ಕಣಕ್ಕಿಳಿಯುವ ಸಾಧ್ಯತೆ ಇದೆ.
ದೆಹಲಿ, ಹರಿಯಾಣದಲ್ಲಿ ಯಾರು?: ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣದಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ದೆಹಲಿಯ ಏಳು ಕ್ಷೇತ್ರಗಳ ಪೈಕಿ ಮೂರಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿದೆ. ಈ ಕ್ಷೇತ್ರಗಳಿಗೆ ಹಿರಿಯ ಜೆ.ಪಿ.ಅಗರ್ವಾಲ್, ಉದಿತ್ ರಾಜ್, ಅಲ್ಕಾ ಲಂಬಾ, ಸಂದೀಪ್ ದೀಕ್ಷಿತ್, ಅರವಿಂದರ್ ಲವ್ವಿ, ಜೈ ಕಿಶನ್ ಹೆಸರುಗಳು ಕೇಳಿಬರುತ್ತಿವೆ. ಹರಿಯಾಣದಲ್ಲಿ ಕುರುಕ್ಷೇತ್ರವನ್ನು ಆಪ್ಗೆ ಬಿಟ್ಟುಕೊಡಲಾಗಿದೆ. ಉಳಿದಂತೆ ಹಿರಿಯ ನಾಯಕಿ ಕುಮಾರಿ ಸೆಲ್ಜಾ (ಅಂಬಾಲಾ), ಗೀತಾ ಭುಕ್ಕಲ್ (ಸಿರ್ಸಾ), ದೀಪೇಂದರ್ ಹೂಡಾ (ರೋಹ್ಟಕ್), ಕರ್ನಲ್ ರೋಹಿತ್ ಚೌಧರಿ (ಸೋನಿಪತ್), ಜಿತೇಂದ್ರ ಭಾರದ್ವಾಜ್ (ಗುರುಗಾಂವ್), ಕರಣ್ ದಲಾಲ್ (ಫರಿದಾಬಾದ್) ಅವರಿಗೆ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ.
'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿದ ದೆಹಲಿ ಮತ್ತು ಹರಿಯಾಣದ ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ, ಸಂಭವನೀಯ ಅಭ್ಯರ್ಥಿಗಳ ಪಟ್ಟಿಯು ಯುವಕರು ಮತ್ತು ಅನುಭವದ ಹಿರಿಯರ ಮಿಶ್ರಣವಾಗಿರಲಿದೆ. ಹರಿಯಾಣದಲ್ಲಿ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡುವಲ್ಲಿ ಗೆಲ್ಲುವ ಅಂಶದೊಂದಿಗೆ ಜಾತಿ ಪ್ರಾತಿನಿಧ್ಯವನ್ನು ಗಮನಿಸಲಾಗಿದೆ. ಇದು ನಿರ್ಣಾಯಕ ಚುನಾವಣೆಯಾಗಿದ್ದು, ನಮಗೆ ಉತ್ತಮ ಅಭ್ಯರ್ಥಿಗಳ ಅಗತ್ಯವಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಆರಂಭದಲ್ಲಿ ಫೆಬ್ರವರಿ ಅಂತ್ಯದೊಳಗೆ ಹೆಸರುಗಳನ್ನು ಅಂತಿಮಗೊಳಿಸಿ ಮಾರ್ಚ್ ಮೊದಲ ವಾರದಲ್ಲಿ ಘೋಷಿಸಲು ಯೋಜಿಸಿತ್ತು. ಆದರೆ, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಮತ್ತು ಬಿಹಾರ, ಜಾರ್ಖಂಡ್, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ಒಪ್ಪಂದ ಬಾಕಿ ಉಳಿದಿರುವುದಿಂದಾಗಿ ಸ್ವಲ್ಪ ವಿಳಂಬವಾಗಿದೆ ಎಂದು ಪಕ್ಷದ ಒಳಗಿನವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲೋಕಸಭೆ: ಸಂಭವನೀಯ ಅಭ್ಯರ್ಥಿಗಳ ಕುರಿತು ಸುರ್ಜೇವಾಲ ಜೊತೆ ಸಿಎಂ, ಡಿಸಿಎಂ ಸಭೆ