ಬೆಂಗಳೂರು: ದೆಹಲಿಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದ ಇಂಜಿನ್ ವಿಫಲಗೊಂಡು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ಸಂಜೆ 7 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನ 2820 ಹಾರಾಟ ನಡೆಸಿತ್ತು. ಇದಾಗಿ ಒಂದು ಗಂಟೆಯೊಳಗೆ ವಿಮಾನ ಮತ್ತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ.
"ಇದು ಭಾನುವಾರ ನಡೆದ ಘಟನೆ. ಯಾವುದೇ ತಾಂತ್ರಿಕ ಮಾಹಿತಿ ನಮ್ಮ ಬಳಿ ಇಲ್ಲ. ಆದರೆ, ವಿಮಾನ ತುರ್ತು ಲ್ಯಾಂಡಿಂಗ್ ನಡೆಸಿರುವುದು ವರದಿಯಾಗಿದೆ" ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.
ಟರ್ಕಿ ವಿಮಾನ ಮಾರ್ಗ ಬದಲಾವಣೆ: ಮಂಗಳವಾರ ಟರ್ಕಿಸ್ ಏರ್ಲೈನ್ಸ್ನ ವಿಮಾನವೊಂದು ಕೇರಳದ ತಿರುವನಂತಪುರದಲ್ಲಿ ಮಾರ್ಗ ಬದಲಾಯಿಸಿ ಲ್ಯಾಂಡ್ ಆಯಿತು. ಇಸ್ತಾಂಬುಲ್ನಿಂದ ಕೊಲೊಂಬೊಗೆ ವಿಮಾನ ತೆರಳುತ್ತಿತ್ತು. ಶ್ರೀಲಂಕಾ ರಾಜಧಾನಿ ಕೊಲೊಂಬೊದಲ್ಲಿ ಕೆಟ್ಟ ಹವಾಮಾನದಿಂದಾಗಿ ತಿರುವನಂತಪುರದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
ವಿಮಾನದಲ್ಲಿ 10 ಮಂದಿ ಸಿಬ್ಬಂದಿ ಸೇರಿದಂತೆ 299 ಪ್ರಯಾಣಿಕರಿದ್ದರು. ಈ ವಿಮಾನ ಮಂಗಳವಾರ ಬೆಳಗ್ಗೆ 6.51ಕ್ಕೆ ತಿರುವನಂತರಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಟ್ಟ ಹವಾಮಾನ ನಿವಾರಣೆಯಾದ ಬಳಿಕ ಮತ್ತೆ ವಿಮಾನ ಹಾರಾಟ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಪ್ರಾಣಾಂತಕವಾದ ಚಳಿ: ಸಾವಿನ ಸಂಖ್ಯೆ 11ಕ್ಕೆ ಏರಿಕೆ: ಉಸಿರುಗಟ್ಟಿ ಒಂದೇ ಕುಟುಂಬದ ಐವರು ಸಾವು