ಬದುಕಿಗೆ ಆಸರೆಯಾಗಿದ್ದ ಗೆಳೆಯನಿಗೆ ಮೆರವಣಿಗೆ ಮಾಡಿ ವಿದಾಯ ಹೇಳಿದ ರೈತ!
ಗದಗ: ಕಳೆದೊಂದು ವಾರದಿಂದ ಜಿಟಿಜಿಟಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಎತ್ತೊಂದು ತಂಪು ಹೆಚ್ಚಾಗಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ. ಮಂಜಪ್ಪ ಚಿಕ್ಕ ತೋಟದ್ ಎಂಬುವವರಿಗೆ ಸೇರಿದ ಎತ್ತು ಇದಾಗಿದೆ. ಇಷ್ಟು ದಿನ ತಮ್ಮ ಬದುಕಿಗೆ ಆಸರೆಯಾಗಿ ಕೃಷಿ ಚಟುವಟಿಕೆಗಳಿಗೆಲ್ಲ ಬೆನ್ನೆಲುಬಾಗಿದ್ದ ಎತ್ತಿನ ಋಣ ತೀರಿಸಲಿಕ್ಕಾಗಿ ಮಂಜಪ್ಪ ಹಾಗೂ ಆತನ ಕುಟುಂಬಸ್ಥರು ಎತ್ತಿಗೆ ಶೃಂಗಾರ ಮಾಡಿ ಶಿರಹಟ್ಟಿ ಪಟ್ಟಣದ ತುಂಬೆಲ್ಲ ಭಜನೆ ವಾದ್ಯ-ಮೇಳಗಳೊಂದಿಗೆ ಮೆರವಣಿಗೆ ಮಾಡುವ ಮೂಲಕ ವಿಶೇಷ ಅಂತಿಮ ನಮನ ಸಲ್ಲಿಸಿದರು. ಶಿರಹಟ್ಟಿಯ ಜನ್ರು ಮಂಜಪ್ಪನ ಮಾನವೀಯತೆಗೆ ತಲೆ ಬಾಗಿದ್ದಾರೆ.