ಮಳೆ ನೀರಲ್ಲಿ ಸೈಕಲ್ ಸಮೇತ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ
ಕೊಪ್ಪಳ: ಕಾಲು ಜಾರಿ ಬಿದ್ದು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸೈಕಲ್ ಸವಾರನನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಶಿವಪುರ ಗ್ರಾಮದ ಬಳಿ ಇರುವ ಹಳ್ಳದಲ್ಲಿಯೂ ನೀರು ರಭಸವಾಗಿ ಹರಿಯುತ್ತಿದೆ. ಜಮೀನು ಕೆಲಸಕ್ಕೆಂದು ಹೋಗಿ ವಾಪಸ್ ಬರುತ್ತಿದ್ದ ಶಿವಪುರ ಗ್ರಾಮದ ಮೌಲಾಸಾಬ್ ಎಂಬಾತ ಹಳ್ಳದ ನೀರಿನಲ್ಲಿ ಸೈಕಲ್ ಹೆಗಲ ಮೇಲೆ ಹೊತ್ತು ದಾಟುತ್ತಿದ್ದ. ಈ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದಾಗ ಅಲ್ಲಿಯೇ ಇದ್ದವರು ಮೌಲಾಸಾಬ್ನನ್ನು ರಕ್ಷಿಸಿದ್ದಾರೆ.