ವಸತಿ ಪ್ರದೇಶದಲ್ಲಿ ಹುಲಿ ಸಂಚಾರ; ಕ್ರಮಕ್ಕೆ ಮುಂದಾದ ಅರಣ್ಯ ಇಲಾಖೆ
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg?imwidth=128)
Published : Dec 12, 2023, 3:50 PM IST
![ETV Thumbnail thumbnail](https://etvbharatimages.akamaized.net/etvbharat/prod-images/12-12-2023/640-480-20248336-thumbnail-16x9-don.jpg)
ಲಖಿಂಪುರ ಖೇರಿ (ಉತ್ತರ ಪ್ರದೇಶ): ಇಲ್ಲಿನ ಪಿಲಿಭಿತ್ನಲ್ಲಿರುವ ಹುಲಿ ಸಂರಕ್ಷಿತ ಪ್ರದೇಶದ ಸುತ್ತ ಮುತ್ತಲಿನ ಗ್ರಾಮದ ಜನರಿಗೆ ವ್ಯಾಘ್ರ ಭೀತಿ ಆರಂಭವಾಗಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಹುಲಿಗಳು ಅರಣ್ಯ ಪ್ರದೇಶ ಬಿಟ್ಟು ಜನ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿವೆ. ಪ್ರತೀ ವರ್ಷ ಚಳಿಗಾಲದ ಸಂದರ್ಭದಲ್ಲಿ ವನ್ಯಜೀವಿ - ಮಾನವ ಸಂಘರ್ಷದ ಘಟನೆಗಳು ಕಂಡು ಬರುತ್ತಿವೆ. ಸೋಮವಾರ ಸಂಜೆ ವೇಳೆ ಪಿಪಾರಿಯಾ ಸಂತೋಷ್ ಗ್ರಾಮದ ಹೊಲದಲ್ಲಿ ಹುಲಿ ಸಂಚಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಲಿಯನ್ನು ಅರಣ್ಯಕ್ಕೆ ಓಡಿಸಲು ಜನ ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಪ್ರತೀ ವರ್ಷ ಇಂತಹ ಘಟನೆಗಳು ವರದಿಯಾದರೂ ಅರಣ್ಯ ಇಲಾಖೆ ಚಳಿಗಾಲಕ್ಕೂ ಮುನ್ನ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ವಿಡಿಯೋ ಬೆಳಕಿಗೆ ಬಂದ ನಂತರ ಹುಲಿ ಎಲ್ಲೆಲ್ಲಿ ಕಂಡುಬಂದರೂ ಅಲ್ಲಿಗೆ ತಂಡವನ್ನು ಕಳುಹಿಸಿ ಹುಲಿಯ ನಿಗಾ ಇಡಲಾಗುತ್ತದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ವಿಡಿಯೋ ಆಧರಿಸಿ ಪಿಪಾರಿಯಾ ಸಂತೋಷ್ ಗ್ರಾಮದಲ್ಲಿ ಹುಲಿ ಸೆರೆ ಹಿಡಿಯಲು ಆದೇಶ ನೀಡಲಾಗಿದೆ ಎಂದು ಡಿಎಫ್ಒ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಯೂರೋಪ್ನಿಂದ ಭಾರತಕ್ಕೆ ಬಂದ ಎರಡು ಸೈಬೀರಿಯನ್ ಹುಲಿಗಳು