ತಿಪಟೂರು: ಬೋನಿಗೆ ಬೀಳದೆ ಬಾವಿಗೆ ಬಿದ್ದ ಚಿರತೆ- ವಿಡಿಯೋ
Published : Nov 22, 2023, 12:53 PM IST
ತುಮಕೂರು : ರಾಜ್ಯದೆಲ್ಲೆಡೆ ಇದೀಗ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆಯಿಂದ ಕಡಿವಾಣ ಹಾಕಲು ಆನೇಕ ಪ್ರಯತ್ನ ಮಾಡಲಾಗುತ್ತಿದೆ. ಮಂಗಳವಾರ ಕೂಡ ಆಹಾರ ಅರಸಿ ಗ್ರಾಮಕ್ಕೆ ಬಂದ ಚಿರತೆಯು ಆಯತಪ್ಪಿ ತೋಟದಲ್ಲಿ ಪಾಳು ಬಿದ್ದ ಬಾವಿಗೆ ಬಿದ್ದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಮಾರನಗೆರೆಯಲ್ಲಿ ನಡೆದಿದೆ.
ಸುಮಾರು ಮೂರು ವರ್ಷ ವಯಸ್ಸಿನ ಗಂಡು ಚಿರತೆಯಾಗಿದ್ದು, ಅನೇಕ ದಿನಗಳಿಂದ ಗ್ರಾಮದ ಸುತ್ತಮುತ್ತಲು ಮೂರು ಚಿರತೆಗಳು ಓಡಾಡುತ್ತಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಜನರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಸಮೀಪ ಬೋನು ಇರಿಸಿದ್ದರೂ ಕೂಡ ಚಿರತೆಗಳು ಬೋನಿನಲ್ಲಿ ಸೆರೆಯಾಗುತ್ತಿರಲಿಲ್ಲ.
ಇದೀಗ ಈ ಮೂರು ಚಿರತೆಗಳ ಪೈಕಿ ಒಂದು ಚಿರತೆ ಬಾವಿಗೆ ಬಿದ್ದಿದೆ. ಮಂಗಳವಾರ ಒಂದು ಮೇಕೆಯನ್ನು ತಿಂದಿದ್ದ ಚಿರತೆ ತಡರಾತ್ರಿ ಬಾವಿಗೆ ಬಿದ್ದಿದೆ ಎಂದು ತೋಟದ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯಿಂದ ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಣೆ ಮಾಡಲಾಗಿದೆ. ಬಾವಿಗೆ ಬಿದ್ದ ಚಿರತೆಯನ್ನು ನೋಡಲು ಸಾರ್ವಜನಿಕರು ತಂಡೋಪತಂಡವಾಗಿ ಬಂದಿದ್ದರು.
ಇದನ್ನೂ ಓದಿ : ತುಮಕೂರು: ಬಾಲಕಿಯ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ