ಕುಡಿದ ಮತ್ತಿನಲ್ಲಿ ರಸ್ತೆ ಬಿಟ್ಟು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಭೂಪ.. ವಿಡಿಯೋ
ಕಣ್ಣೂರು (ಕೇರಳ): ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ರೈಲ್ವೆ ಹಳಿಗೆ ಕಾರು ನುಗ್ಗಿಸಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಅದೃಷ್ಟವಶಾತ್ ಈ ಸಮಯದಲ್ಲಿ ಯಾವುದೇ ರೈಲು ಬಾರದೇ ಇರುವುದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಅಲ್ಲದೇ, ಸ್ಥಳೀಯರು ದೌಡಾಯಿಸಿ ಕಾರನ್ನು ಹೊರ ತೆಗೆದಿದ್ದಾರೆ. ಈ ಘಟನೆ ಮಾಹಿತಿ ಪಡೆದ ಪೊಲೀಸರು ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.
ಕಣ್ಣೂರು ಮೂಲದ ಜಯಪ್ರಕಾಶ್ ಎಂಬಾತನೇ ರಸ್ತೆ ಬಿಟ್ಟು ರೈಲ್ವೆ ಹಳಿ ಮೇಲೆ ಕಾರು ಹತ್ತಿಸಿದ ಭೂಪ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಸಾಕಷ್ಟು ಮದ್ಯ ಸೇವಿಸಿದ್ದ ಜಯಪ್ರಕಾಶ್ ನಶೆಯಲ್ಲೇ ಕಾರು ಚಲಾಯಿಸಿಕೊಂಡು ಬರುತ್ತಿದ್ದ. ಈ ವೇಳೆ ಕಣ್ಣೂರು ಸ್ಪಿನ್ನಿಂಗ್ ಮಿಲ್ ಗೇಟ್ ಬಳಿ ರಸ್ತೆಗೆ ಸಮಾನಾಂತರವಾಗಿ ಸಾಗುವ ರೈಲ್ವೆ ಹಳಿ ಮೇಲೆ ಕಾರು ನುಗ್ಗಿಸಿದ್ದಾನೆ. ಅಷ್ಟೇ ಅಲ್ಲ, ಕುಡಿದ ಮತ್ತಿನಲ್ಲೇ ಹಳಿ ಮೇಲೆ ಸ್ವಲ್ವ ದೂರದವರೆಗೂ ಕಾರು ಚಲಾಯಿಸಿಕೊಂಡು ಬಂದಿದ್ದಾನೆ.
ಇದೇ ಸಮಯಕ್ಕೆ ರೈಲ್ವೆ ಹಳಿ ಮೇಲೆ ರಾಜಧಾನಿ ಎಕ್ಸ್ಪ್ರೆಸ್ ರೈಲು ಬರುವ ಸಮಯವಾಗಿತ್ತು. ಆದರೆ, ಅದೃಷ್ಟವಶಾತ್ ಎಂಬಂತೆ ನಿನ್ನೆ ರಾತ್ರಿ ರೈಲು ಬರುವ ಸಮಯ ತಡವಾಗಿದೆ. ಮತ್ತೊಂದೆಡೆ, ರೈಲ್ವೆ ಹಳಿಗೆ ಕಾರು ನುಗ್ಗಿರುವುದನ್ನು ಗಮನಿಸಿದ ಸ್ಥಳೀಯರು ಹಳಿ ಮೇಲಿಂದ ಕಾರನ್ನು ಹೊರ ತೆಗೆದಿದ್ದಾರೆ. ನಂತರ ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಚಾಲಕ ಜಯಪ್ರಕಾಶ್ನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಗಾಂಜಾ ಅಮಲಿನಲ್ಲಿ ನಡುರಸ್ತೆಯಲ್ಲಿ ಪುಡಿರೌಡಿಗಳ ಅಟ್ಟಹಾಸ: ಸಿಸಿಟಿವಿ ದೃಶ್ಯ